ಇತ್ತೀಚಿನ ಸುದ್ದಿ
ಫಿಫಾ ವಿಶ್ವಕಪ್ | ಫುಟ್ ಬಾಲ್ ಫ್ಯಾನ್ಸು ದಯವಿಟ್ಟು ತಾಳ್ಮೆಯಿಂದ ಇರಬೇಕು: ಸಿಎಂ ಡಿ.ಕೆ.ಶಿವಕುಮಾರ್ ಮನವಿ
19/07/2026, 21:39
ಬೆಂಗಳೂರು(reporterkarnataka.com): ರಾಜ್ಯದಲ್ಲಿ ಒಂದೆಡೆ ಫುಟ್ಬಾಲ್ ಹಬ್ಬದ ಸಂಭ್ರಮ ಮನೆಮಾಡಿದ್ದರೆ, ಇನ್ನೊಂದೆಡೆ ಭೀಕರ ಬರ ಪರಿಸ್ಥಿತಿಯ ಸವಾಲು ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಫಿಫಾ ವಿಶ್ವಕಪ್ ಅಂತಿಮ ಪಂದ್ಯದ ವೀಕ್ಷಣೆಗೆ ಯುವಜನರ ಬೇಡಿಕೆಯಂತೆ ತಡರಾತ್ರಿವರೆಗೆ ಹೋಟೆಲ್ಗಳು ತೆರೆದಿರಲು ವಿಶೇಷ ಅನುಮತಿ ನೀಡಲಾಗಿದ್ದು, ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಇದರ ಜೊತೆಗೆ, ರಾಜ್ಯದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ದಿನದ 24 ಗಂಟೆಯೂ ಕೆಲಸ ಮಾಡಬೇಕು ಎಂದು ಅವರು ಕಡಕ್ ಆದೇಶ ನೀಡಿದ್ದಾರೆ.
ವಿಧಾನಸೌಧದಲ್ಲಿ ಭಾನುವಾರ ಮಾತನಾಡಿದ ಮುಖ್ಯಮಂತ್ರಿಗಳು, ಯುವಕರ ಇಚ್ಛೆ ಮತ್ತು ಮನವಿಗೆ ಸ್ಪಂದಿಸಿ ಇಂದು ರಾತ್ರಿ ನಡೆಯಲಿರುವ ಫಿಫಾ ವಿಶ್ವಕಪ್ ಅಂತಿಮ ಪಂದ್ಯದ ನೇರ ಪ್ರಸಾರ ವೀಕ್ಷಣೆಗಾಗಿ ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಬೆಳಗಿನ ಜಾವ 3.30 ರವರೆಗೆ ಕಾರ್ಯನಿರ್ವಹಿಸಲು ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಿಸಿದರು.


ಪಂದ್ಯದ ವೇಳೆ ಅಭಿಮಾನಿಗಳು ಮತ್ತು ಯುವಜನರು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಯಾವುದೇ ತಂಡ ಗೆದ್ದರೂ ಕ್ರೀಡಾ ಮನೋಭಾವದಿಂದ ಪಂದ್ಯವನ್ನು ಆಸ್ವಾದಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದೆ ಶಾಂತಿಯುತವಾಗಿ ವರ್ತಿಸಬೇಕು ಎಂದು ಅವರು ಕೋರಿದ್ದಾರೆ.













