ಇತ್ತೀಚಿನ ಸುದ್ದಿ
ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
22/06/2026, 20:42
ಬೆಂಗಳೂರು(reporterkarnataka.com): ಕಾಂಗ್ರೆಸ್ ಸಮಾವೇಶದಿಂದ ಮೂವರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬ ವಿಪಕ್ಷಗಳ ಆರೋಪಗಳಿಗೆ ಇಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ‘ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ನಿಜ. ನಾನು ಒಪ್ಪಿಕೊಳ್ತೀನಿ. ಜನರಿಗೆ ತೊಂದರೆಯಾಗಬಾರದು ಎಂದೇ ನಾವು ಭಾನುವಾರ ಸಮಾವೇಶವಿಟ್ಟುಕೊಂಡಿದ್ದಿದ್ದು.
ನೀಟ್ ಪರೀಕ್ಷೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಎರಡು ಮೂರು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಬರಲು ಸಾಧ್ಯವಾಗಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾರ್ಯಕ್ರಮದಿಂದಾಗಿ ಯಾವುದಾದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗಿಲ್ಲ ಎಂದು ನಾನು ಅದರ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತೇನೆ.
ನೀಟ್ ಪರೀಕ್ಷೆ 1.30-2.30 ಸಮಯದಲ್ಲಿ. ನಮ್ಮೆಲ್ಲಾ ಬಸ್ ಗಳೂ ಸಹಾ 10.30 ಒಳಗೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಸೇರಿಕೊಂಡಿತ್ತು. ಎಲ್ಲೂ ಸಮಸ್ಯೆಯಾಗಬಾರದು ಎಂದು ಮೈದಾನದಲ್ಲಿನ ಎಲ್ಲಾ ಜಾಗವನ್ನು ತೆಗೆದುಕೊಂಡು ಪಾರ್ಕ್ ಮಾಡಿದ್ದೆವು. ಆದರೂ ಸಹ, ತಪ್ಪು ನಡೆದಿದೆ, ಅದರಲ್ಲೂ ಮೂರು ಮಕ್ಕಳನ್ನು ನಿರಂತರವಾಗಿ ತೋರಿಸುತ್ತಾ ಇದ್ದಾರೆ. ಅವರಿಗೇನಾದರೂ ತೊಂದರೆಯಾಗಿದ್ದರೆ ಅವರಿಗೆ ಮುಂದಿನ ಪರೀಕ್ಷೆ ತೆಗೆದುಕೊಳ್ಳಲು ಎಲ್ಲಾ ರೀತಿಯ ಸಹಾಯ ನಾವು ಮಾಡಲಿದ್ದೇವೆ’ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.












