ಇತ್ತೀಚಿನ ಸುದ್ದಿ
ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್
05/05/2026, 15:29
ಧಾರವಾಡ(reporterkarnataka.com): ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ಬೌದ್ಧ ಸನ್ಯಾಸಿ ಕೊಲೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಎಪ್ರಿಲ್ 29 ರಂದು ಧಾರವಾಡದ ಹಳಿಯಾಳ ರಸ್ತೆಯಲ್ಲಿ ಸನ್ಯಾಸಿಯ ಶವ ಪತ್ತೆಯಾಗಿತ್ತು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಕಳೆದ ಏಪ್ರಿಲ್ 29ರಂದು ಧಾರವಾಡದ ಹಳಿಯಾಳ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬೌದ್ಧ ಸನ್ಯಾಸಿಯೊಬ್ಬರ ಶವ ಪತ್ತೆಯಾಗಿತ್ತು. ಮೃತದೇಹದ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎಂಬ ಅನುಮಾನ ವ್ಯಕ್ತವಾಗಿತ್ತು. ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.
ಪೊಲೀಸರು ತಾಂತ್ರಿಕ ದಾಖಲೆಗಳು ಮತ್ತು ಖಚಿತ ಮಾಹಿತಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ, ಆರೋಪಿಗಳು ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಅಡಗಿರುವ ಸುಳಿವು ಲಭ್ಯವಾಗಿತ್ತು. ತಕ್ಷಣವೇ ಕೊಲ್ಹಾಪುರಕ್ಕೆ ತೆರಳಿದ ಧಾರವಾಡ ಗ್ರಾಮೀಣ ಪೊಲೀಸರ ತಂಡ, ಅಲ್ಲಿ ಅಡಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ಅರೆಸ್ಟ್ ಮಾಡಿದೆ. ಬಂಧಿತರನ್ನು ಸದ್ಯ ಧಾರವಾಡಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
ತನಿಖೆಯಲ್ಲಿ ಐವರಿಂದ ಸನ್ಯಾಸಿ ಕೊಲೆಯಾಗಿದೆ ಎಂದು ಗೊತ್ತಾಗಿದೆ. ಮೂವರು ಹಂತಕರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅರೆಸ್ಟ್ ಆಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸಂಕೇತ್ ಯಾದವ್, ವೈಭವ್ ಚವ್ಹಾನ್, ಸಿದ್ದೇಶ್ ಬೋಸ್ಲೆ ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












