7:45 AM Sunday21 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

ಕೊಡವರಿಗೆ ಪ್ರತ್ಯೇಕ ಲೋಕಸಭೆ, ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಸಿಎನ್‍ಸಿಯಿಂದ ಅಭಿಯಾನ ಆರಂಭ

03/05/2026, 18:48

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಪ್ರಾಚೀನ ಕೊಡವ ಸಾಂಪ್ರದಾಯಿಕ ಆವಾಸಸ್ಥಾನದ ಪ್ರಾದೇಶಿಕ ಮಿತಿಯೊಳಗೆ ಪ್ರತ್ಯೇಕ ಕೊಡವ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿ ಕ್ಷೇತ್ರಗಳ ಸ್ಥಾಪನೆ, ಅಥವಾ ಪರ್ಯಾಯವಾಗಿ ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಚುನಾವಣಾ ಕ್ಷೇತ್ರದ ಮಾದರಿಯಲ್ಲಿ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರಿಗಾಗಿ ಪ್ರತ್ಯೇಕ ಅಮೂರ್ತ ಕೊಡವ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿ ಕ್ಷೇತ್ರಗಳನ್ನು ರಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲು ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಭಿಯಾನವನ್ನು ಆರಂಭಿಸಿತು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ತಲಕಾವೇರಿಯಲ್ಲಿ ಧಾರ್ಮಿಕ ಪ್ರಾರ್ಥನೆ ಸಲ್ಲಿಸಿ ನಂತರ ಮಾನವ ಸರಪಳಿ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಸಿಎನ್‍ಸಿ ಬೇಡಿಕೆಗಳ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ಮೇ 12 ರಿಂದ 48 ಗಂಟೆಗಳ ಹಗಲು-ರಾತ್ರಿ ಶಾಂತಿಯುತ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದರು.
ಮುಂಬರುವ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಮಸೂದೆಯಡಿ ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಕೋಟಾ ನೀಡಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ‘ಕೋಡ್ ಮತ್ತು ಕಾಲಂ’ ಅನ್ನು ನಿಗದಿಪಡಿಸಬೇಕು. ಕೊಡವರಿಗೆ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರ ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಭಾರತದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ಭಾರತದ ಮುಖ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಡಲಾಗಿದೆ ಎಂದರು.
ಎನ್‍ಡಿಎ ಸರ್ಕಾರ ರಾಜ್ಯಸಭಾ ಪ್ರಾತಿನಿಧ್ಯ ಸೇರಿದಂತೆ 1200 ಕ್ಕೂ ಹೆಚ್ಚು ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸಲು ಹೊಸ ಸಂಸತ್ತು ಅಂದರೆ ಸೆಂಟ್ರಲ್ ವಿಸ್ಟಾವನ್ನು ನಿರ್ಮಿಸಿದೆ. ಲೋಕಸಭೆಯಲ್ಲಿ 850 ಸದಸ್ಯರನ್ನು ಹೊಂದಲಿದೆ. ಸರಕಾರ ಜನಸಂಖ್ಯೆಯನ್ನು ಮಾತ್ರ ಮಾನದಂಡವಾಗಿ ಪರಿಗಣಿಸಬಾರದು. ಕ್ಷೇತ್ರ ಮರುವಿಂಗಡಣೆಗೆ ಅಗತ್ಯವಿರುವ ಜನಸಂಖ್ಯೆಯ ಆಧಾರದಲ್ಲಿ ನಾವು ಸ್ಪರ್ಧಿಸಲು ಸಾಧ್ಯವಿಲ್ಲ. ವಿಲೀನದ ನಂತರ, ಕೊಡವ ಭೂಪ್ರದೇಶದಲ್ಲಿ ರಾಜ್ಯ ಪ್ರಾಯೋಜಿತ ಜನಸಂಖ್ಯಾ ಬದಲಾವಣೆಗಳು, ಕೊಡವರ ಜನಸಂಖ್ಯಾ ಕುಸಿತ ಮತ್ತು ಹೊರಗಿನವರ ಪುನರ್ವಸತಿ ನಡೆದಿರುವುದು ಆತಂಕಕಾರಿ ವಿಷಯವಾಗಿದೆ. ಬಹುಸಂಖ್ಯಾತ ಸಮುದಾಯದ ನಡುವೆ ಕೊಡವರು ಆಯ್ಕೆಯಾಗಲು ಸಾಧ್ಯವಿಲ್ಲ. ಒಂದು ವೇಳೆ ಆಯ್ಕೆಯಾದರೂ, ನಾವು ನಮ್ಮ ಸ್ವಾಭಿಮಾನದ ಧ್ವನಿಯನ್ನು ಎತ್ತಲು ಸಾಧ್ಯವಿಲ್ಲ ಮತ್ತು ಇತರರ ಇಚ್ಛೆಯಂತೆ ನಡೆಯಬೇಕಾಗುತ್ತದೆ ಎಂದು ತಿಳಿಸಿದರು.
ಕೊಡವಲ್ಯಾಂಡ್ ನ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ-ಆಡಳಿತ, ಆಂತರಿಕ ಸ್ವಯಂ-ನಿರ್ಣಯದ ಹಕ್ಕುಗಳು, ಕೊಡವರನ್ನು ಬುಡಕಟ್ಟು ಪಟ್ಟಿಗೆ ವರ್ಗೀಕರಿಸುವುದು, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡುವುದು, ವಿಶ್ವಸಂಸ್ಥೆಯಿಂದ ಆದಿಮಸಂಜಾತ ನಿವಾಸಿಗಳೆಂದು ಮಾನ್ಯತೆ ಪಡೆಯಲು ಸಿಎನ್‍ಸಿ ಕಳೆದ 36 ವರ್ಷಗಳಿಂದ ಅವಿರತ ಮತ್ತು ಶಾಂತಿಯುತವಾಗಿ ಶ್ರಮಿಸುತ್ತಿದೆ.
ಸಿಕ್ಕಿಂನ ಬೌದ್ಧ ಭಿಕ್ಷುಗಳಿಗಾಗಿ ಇರುವ “ಸಂಘ” ಅದೃಶ್ಯ ಮತಕ್ಷೇತ್ರ ಮಾದರಿಯಲ್ಲಿ, ಪ್ರತ್ಯೇಕ ಕೊಡವ ಸಂಸತ್ತು ಮತ್ತು ವಿಧಾನಸಭಾ ಕ್ಷೇತ್ರವನ್ನು ರಚಿಸಬೇಕು. ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಯನ್ನು ಖಚಿತಪಡಿಸಿಕೊಳ್ಳುವಾಗ, ಕೊಡವ ಮಹಿಳೆಯರಿಗೆ ಪ್ರತ್ಯೇಕ ಆಂತರಿಕ ಕೋಟಾವನ್ನು ನೀಡಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ಮೀಸಲಿಡಬೇಕು ಎಂದು ಒತ್ತಾಯಿಸಿರುವ ಎನ್.ಯು.ನಾಚಪ್ಪ, ನಮ್ಮ ದೊಡ್ಡ ಸಾಂವಿಧಾನಿಕ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕೊಡವರ ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸಲು ಜನಗಣತಿಯೇ ಪ್ರಮುಖ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊಡವ ಧಾರ್ಮಿಕ ಸಂಸ್ಕಾರ “ಗನ್ -ತೋಕ್” ಅನ್ನು ಭಾರತದ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ರಕ್ಷಿಸಲ್ಪಟ್ಟ ಅತ್ಯಗತ್ಯ ಧಾರ್ಮಿಕ ಆಚರಣೆಗಳ ವ್ಯಾಪ್ತಿಗೆ ತರಬೇಕು. ಕೊಡವರ ಮಾತೃಭಾಷೆಯಾದ “ಕೊಡವ ತಕ್”, ಅತ್ಯಂತ ಪ್ರಾಚೀನ ಮತ್ತು ಶಾಸ್ತ್ರೀಯ ಭಾಷೆಯಾಗಿದ್ದು, ಇದನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು.
ತಲಕಾವೇರಿಯನ್ನು ಆದಿಮಸಂಜಾತ ಕೊಡವರ ಪವಿತ್ರ ಯಾತ್ರಾಸ್ಥಳವೆಂದು ಘೋಷಿಸಬೇಕು. ಕೊಡವರ ಪವಿತ್ರ ಆಧ್ಯಾತ್ಮಿಕ ಅಭಯಾರಣ್ಯಗಳಾದ “ಮಂದ್” ಮತ್ತು “ದೇವಕಾಡ್” ಗಳನ್ನು ರಕ್ಷಿಸಿ, ಯುನೆಸ್ಕೋದ ಅಮೂರ್ತ ಸಾಂಸ್ಕøತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಪರಂಪರೆಯನ್ನು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಹತ್ಯಾಕಾಂಡ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು.
ಪರರ ಪಾಲಾದ ಕೊಡವರ ಪಾರಂಪರಿಕ ಭೂಮಿಯ ಮರುಸ್ಥಾಪನೆಯಾಗಬೇಕು. ದೇವಟ್ ಪರಂಬು, ನಾಲ್ನಾಡ್ ಅರಮನೆ ಹಾಗೂ ಮಡಿಕೇರಿ ಕೋಟೆಯಲ್ಲಿ ನಡೆದ ಕೊಡವ ರಾಜಕೀಯ ಹತ್ಯೆಗಳನ್ನು ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಬೇಕು ಮತ್ತು ಅಂತರರಾಷ್ಟ್ರೀಯ ಹತ್ಯಾಕಾಂಡ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು. ಉಲುಗುಲಿ, ಮುಳ್ಳುಸೋಗೆ ಮತ್ತು ಲಕ್ಕಡಿ ಕೋಟೆಯಲ್ಲಿ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು.
ಕಾವೇರಿ ನದಿ ನೀರಿನ ಹಂಚಿಕೆಯನ್ನು ಅಂತರರಾಷ್ಟ್ರೀಯ ನದಿಗಳ ಬಳಕೆ ಕುರಿತ 1966ರ ಹೆಲ್ಸಿಂಕಿ ನಿಯಮಗಳ ಪ್ರಕಾರ ಕೊಡವ ಪ್ರದೇಶಕ್ಕೆ ಹಂಚಿಕೆ ಮಾಡಬೇಕು. ಕೊಡವ ಇತಿಹಾಸವನ್ನು ತಿರುಚಿದ ಇತಿಹಾಸಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದ ಎಲ್ಲಾ ಕಡತಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯದಾದ್ಯಂತ ಇರುವ ಗ್ರಂಥಾಲಯಗಳಲ್ಲಿ ನೈಜ ಕೊಡವ ಇತಿಹಾಸವನ್ನು ಪುನಃಸ್ಥಾಪಿಸಬೇಕು ಮತ್ತು ಲಭ್ಯವಾಗುವಂತೆ ಮಾಡಬೇಕು ಎಂದು ಎನ್.ಯು.ನಾಚಪ್ಪ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಬೊಟ್ಟಂಗಡ ಸವಿತಾ ಗಿರೀಶ್, ಅಪ್ಪಾರಂಡ ನಂದಿನಿ ನಂಜಪ್ಪ, ಅರೆಯಡ ಸವಿತಾ ತಿಮ್ಮಯ್ಯ, ಅಪ್ಪಾರಂಡ ನೀರು ಸೋಮಕ್ಕ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ನಂದೇಟಿರ ರವಿ ಸುಬ್ಬಯ್ಯ, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಮಂದಪಂಡ ಮನೋಜ್ ಮಂದಣ್ಣ, ಅರೆಯಡ ಗಿರೀಶ್ ತಿಮ್ಮಯ್ಯ, ಚಂಬಂಡ ಜನತ್, ಕಿರಿಯಮಾಡ ಶೇರಿನ್, ಅಪ್ಪಾರಂಡ ಶ್ರೀನಿವಾಸ್, ಪುಟ್ಟೀಚಂಡ ಡಾನ್ ದೇವಯ್ಯ, ಚೋಳಪಂಡ ನಾಣಯ್ಯ, ಮಣವಟ್ಟಿರ ಚಿಣ್ಣಪ್ಪ, ಮಣವಟ್ಟಿರ ಜಗದೀಶ್, ಪುದಿಯೋಕ್ಕಡ ಕಾಶಿ ಕರುಂಬಯ್ಯ, ಪಟ್ಟಮಾಡ ಅಶೋಕ್, ಮೇದುರ ಕಂಠಿ ನಾಣಿಯಪ್ಪ, ಮಂಗೇರಿರ ಜಗದೀಶ್, ಕಲ್ಮಾಡಂಡ ಮೋಹನ್, ಕಲ್ಮಾಡಂಡ ವಾಸು ಉತ್ತಯ್ಯ, ಅಪ್ಪಾರಂಡ ತಿಮ್ಮಯ್ಯ, ಅರೆಯಡ ಸಾವನ್, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಕೊಟ್ಟುಕತ್ತಿರ ಗೌತಮ್ ಪೊನ್ನಣ್ಣ, ಸಾದೇರ ರಮೇಶ್, ಚೊಕ್ಕಂಡ ಕಟ್ಟಿ, ಅವರೇಮಾದಂಡ ಚೆಂಗಪ್ಪ ಹಾಗೂ ಅಚ್ಚಕಾಳೇರ ನವೀನ್ ಮೊಣ್ಣಪ್ಪ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು