ಇತ್ತೀಚಿನ ಸುದ್ದಿ
ದೆಹಲಿಯಲ್ಲಿ ಎಸಿ ಸ್ಫೋಟಗೊಂಡು ಭೀಕರ ಬೆಂಕಿ ಅವಘಡ: 9 ಜನರು ಸಜೀವದಹನ
03/05/2026, 18:40
ನವದೆಹಲಿ(reporterkarnataka@gmail.com): ವಸತಿ ಕಟ್ಟಡದಲ್ಲಿ ಎಸಿ ಸ್ಫೋಟಗೊಂಡು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 9 ಜನರು ಸಜೀವದಹನವಾಗಿರುವ ಘಟನೆ ನವದೆಹಲಿಯ ವಿವೇಕ ವಿಹಾರದಲ್ಲಿ ನಡೆದಿದೆ.

ವಿವೇಕ ವಿಹಾರದ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಇಂದು ಮುಂಜಾನೆ 3:47ರ ಸುಮಾರಿಗೆ ಎಸಿ ಸ್ಫೋಟಗೊಂಡ ಪರಿಣಾಮ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 9 ಜನರು ಸಜೀವದಹನವಾಗಿದ್ದಾರೆ. ಘಟನೆಯಲ್ಲಿ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಕಿಯ ಕೆನ್ನಾಲಿಗೆ ಕಟ್ಟಡದ ತುಂಬಾ ವ್ಯಾಪಿಸಿದ್ದು, ಹಲವರು ಹೊರಬರಲಾಗದೇ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ 14 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಚುರುಕುಗೊಂಡಿದೆ.
ಕಟ್ಟಡದ ಒಳಗೆ ಸಿಲುಕಿರುವವರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.












