ಇತ್ತೀಚಿನ ಸುದ್ದಿ
ಪತಿಯ ಅಕ್ಕನ ಮಗನ ಜತೆ ಪತ್ನಿ ಪರಾರಿ: ಇಬ್ಬರು ಮಕ್ಕಳ ಕೊಂದು ಗಂಡ ನೇಣಿಗೆ ಶರಣು
02/05/2026, 19:43
ತುಮಕೂರು(reporterkarnataka.com): ತುಮಕೂರು ಜಿಲ್ಲೆಯ ಕುಣಿಗಲ್ನಲ್ಲಿ ಮನಕಲಕುವ ಘಟನೆ ನಡೆದಿದೆ. ಕೌಟುಂಬಿಕ ಜಗಳದಿಂದ ಪತ್ನಿ ಮನೆ ಬಿಟ್ಟು ಹೋದ ಹಿನ್ನೆಲೆಯಲ್ಲಿ, ನೊಂದ ಅರ್ಚಕನೊಬ್ಬ ತನ್ನ ಹತ್ತು ಮತ್ತು ಐದು ವರ್ಷದ ಇಬ್ಬರು ಹಸುಗೂಸುಗಳ ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ.


ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ಶಿವಣ್ಣ ಹಾಗೂ ಅವರ ಇಬ್ಬರು ಪುತ್ರರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಕೌಟುಂಬಿಕ ಕಲಹವೊಂದು ಭೀಕರ ದುರಂತದಲ್ಲಿ ಅಂತ್ಯಗೊಂಡಿದೆ. ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರಾಗಿದ್ದ ಶಿವಣ್ಣ (40) ಎಂಬುವವರು ತಮ್ಮ ಇಬ್ಬರು ಮಕ್ಕಳಾದ ಜೀವನ್ (10) ಹಾಗೂ ಪ್ರಾಣೇಶ್ (5) ಅವರನ್ನು ಕತ್ತು ಹಿಸುಕಿ ಬಲಿಪಡೆದು, ನಂತರ ತಾವೂ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಶಿವಣ್ಣ ಹಾಗೂ ಅವರ ಪತ್ನಿ ಮಂಜುಳಾ ಅವರ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ಕೌಟುಂಬಿಕ ಕಲಹ ನಡೆಯುತ್ತಿತ್ತು. ಜಗಳದ ಬಳಿಕ ಪತ್ನಿ ಮಂಜುಳಾ ಅವರು ಪತಿಯನ್ನು ಬಿಟ್ಟು ಮನೆ ತೊರೆದಿದ್ದರು. ಇದರಿಂದ ತೀವ್ರವಾಗಿ ಮನನೊಂದಿದ್ದ ಶಿವಣ್ಣ, ಜೀವನದಲ್ಲಿ ಜಿಗುಪ್ಸೆಗೊಂಡು ಮಕ್ಕಳೊಂದಿಗೆ ಈ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದುರ್ಘಟನೆಯು ಇಡೀ ತಾಲ್ಲೂಕನ್ನು ಸ್ತಬ್ದಗೊಳಿಸಿದೆ.
*ಘಟನೆಯ ಸಂಪೂರ್ಣ ವಿವರ:*
ಮೃತ ಶಿವಣ್ಣ ಅವರು ತಮ್ಮ ಅಕ್ಕನ ಸಾವಿನ ನಂತರ ಆಕೆಯ ಮಗ ಹೇಮಂತ್ನನ್ನು ಸ್ವಂತ ಮಗನಂತೆ ಸಾಕಿ ಬೆಳೆಸಿದ್ದರು. ಆದರೆ ಹೇಮಂತ್, ಮಾವನ ಪ್ರೀತಿಯನ್ನೇ ಬಂಡವಾಳ ಮಾಡಿಕೊಂಡು ಶಿವಣ್ಣನ ಪತ್ನಿ ಕಾವ್ಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದನು ಎಂಬುದು ಇದೀಗ ಗೊತ್ತಾಗಿದೆ. ಈ ವಿಷಯ ತಿಳಿದು ಹೇಮಂತ್ನನ್ನು ಮನೆಯಿಂದ ಹೊರಹಾಕಿದಾಗಲೂ, ಗ್ರಾಮಸ್ಥರು ಪಂಚಾಯ್ತಿ ನಡೆಸಿ ಸಂಧಾನ ಮಾಡಿದ್ದರು. ಆದರೂ ಕಾವ್ಯ ಕಳೆದ ವಾರ ಹೇಮಂತ್ ಜೊತೆ ಮನೆ ಬಿಟ್ಟು ಪರಾರಿಯಾಗಿದ್ದಳು. ಬಳಿಕ ಪೊಲೀಸ್ ಠಾಣೆಯಲ್ಲಿ ಕ್ಷಮೆ ಕೇಳಿ ಮರಳಿ ಬಂದವಳು ಮರುದಿನವೇ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣದೊಂದಿಗೆ ಮತ್ತೆ ಓಡಿಹೋಗಿದ್ದಾಳೆ.
*ಮಾನಸಿಕವಾಗಿ ಕುಸಿದಿದ್ದ ಶಿವಣ್ಣ:*
ಪತ್ನಿಯ ಪದೇ ಪದೇ ವಂಚನೆ ಮತ್ತು ಅಕ್ಕನ ಮಗನ ದ್ರೋಹದಿಂದ ಶಿವಣ್ಣ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೆಂಡತಿ ಇಲ್ಲದ ಮನೆಯಲ್ಲಿ ಮಕ್ಕಳ ಭವಿಷ್ಯ ಅಂಧಕಾರವಾಗುತ್ತದೆ ಎಂದು ಭಾವಿಸಿದ ಅವರು, ನಿನ್ನೆ ತಡರಾತ್ರಿ ಇಬ್ಬರು ಗಂಡು ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿ, ತಾವೂ ನೇಣಿಗೆ ಶರಣಾಗಿದ್ದಾರೆ. ಬೆಳಿಗ್ಗೆ ನೆರೆಹೊರೆಯವರು ಗಮನಿಸಿದಾಗ ಮೂರೂ ಶವಗಳು ಕಂಡುಬಂದಿವೆ.
*ಪೊಲೀಸ್ ತನಿಖೆ:*
ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ನಂಬಿಕೆ ದ್ರೋಹ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಾವ್ಯ ಹಾಗೂ ಹೇಮಂತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.












