ಇತ್ತೀಚಿನ ಸುದ್ದಿ
ಕುತ್ತಾರಿನಲ್ಲಿ ಕೊರಗಜ್ಜ ವೃತ್ತಕ್ಕೆ ಸ್ಥಳೀಯರ ವಿರೋಧವಿಲ್ಲ: ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ
09/05/2026, 21:11
ಮಂಗಳೂರು(reporterkarnataka.com): ಕುತ್ತಾರಿನಲ್ಲಿ ಕೊರಗಜ್ಜ ವೃತ್ತಕ್ಕೆ ಸ್ಥಳೀಯರ ಯಾವುದೇ ವಿರೋಧವಿಲ್ಲ. ಹೊರಗಿನಿಂದ ಬಂದ ಒಂದಿಬ್ಬರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದರೆ ಅದನ್ನು ಪ್ರಮುಖವಾಗಿ ತೆಗೆದುಕೊಳ್ಳಬಾರದು ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಅವರು ಇಂದು ನಗರದ ಸರ್ಕಿಟ್ಹೌಸ್ನಲ್ಲಿ ಮಾಧ್ಯಮದವರು ಕುತ್ತಾರಿನಲ್ಲಿ ಕೊರಗಜ್ಜ ವೃತ್ತಕ್ಕೆ ವಿರೋಧ ಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ವಿಷಯಗಳಿಗೆಲ್ಲ ಹೆಚ್ಚು ಗಮನ ಹರಿಸಲಾಗುವುದಿಲ್ಲ. ದಾರಿ ತಪ್ಪಿದವರನ್ನು ಊರಿನವರು ಸರಿಪಡಿಸುತ್ತಾರೆ. ಸದ್ಯದಲ್ಲಿಯೇ ಕೊರಗಜ್ಜ ವೃತ್ತ ಉದ್ಘಾಟನೆಗೊಳ್ಳಲಿದೆ ಎಂದು ಸ್ಪೀಕರ್ ಹೇಳಿದರು.
ಮದನಿ ನಗರದಲ್ಲಿ ಎಲ್ಲಾ ಜಾತಿ-ಮತ, ವರ್ಗದವರು ವಾಸಿರುತ್ತಿದ್ದು, ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಹೊರಗಿನಿಂದ ಬಂದ ಒಬ್ಬ-ಇಬ್ಬರ ಮಾತಿಗೆ ಪ್ರಾಮುಖ್ಯತೆ ನೀಡಬಾರದು ಎಂದು ಖಾದರ್ ನುಡಿದರು.
*ಮಳೆಗಾಲದ ಮೊದಲು ಗುಂಡಿ ಮುಚ್ಚಲು ಸೂಚನೆ:*
ಮಳೆಗಾಲ ಪ್ರಾರಂಭವಾಗುತ್ತಿದ್ದು, ಪಿಡಬ್ಲ್ಯೂಡಿ ರಸ್ತೆಗಳು, ತಾಲೂಕು ರಸ್ತೆಗಳು, ಜಿಲ್ಲಾ ರಸ್ತೆ ಹಾಗೂ ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಿರುವ ಹೊಂಡ-ಗುಂಡಿಗಳನ್ನು ಮುಚ್ಚಬೇಕು. ಮಳೆ ಪ್ರಾರಂಭವಾದ ಮೇಲೆ ಮೂರು ತಿಂಗಳು ಏನನ್ನೂ ಮಾಡಲಾಗುವುದಿಲ್ಲ. ಅದೂ ಅಲ್ಲದೇ ಆಗ ಡಾಂಬಾರು ಸಿಗುವುದಿಲ್ಲ ಎನ್ನುತ್ತಾರೆ. ಈಗ ಸಿಗುತ್ತದೆಯಲ್ಲ ಎಲ್ಲವನ್ನು ಮುಚ್ಚಬೇಕು. ಮಳೆಯಲ್ಲಿ ಯಾವುದೇ ರೀತಿಯಲ್ಲಿ ಹೆಚ್ಚು-ಕಮ್ಮಿ ಆದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ. ಅಧಿಕಾರಿಗಳು ಬೇಗನೇ ಕೃಯಾಶೀಲರಾಗಬೇಕು ಎಂದು ಸ್ಪೀಕರ್ ಸೂಚಿಸಿದರು.













