ಇತ್ತೀಚಿನ ಸುದ್ದಿ
ಐಪಿಎಲ್ ಫೈನಲ್ ಮುಗಿದ ಬೆನ್ನಲ್ಲೇ ಆಘಾತ: ಗುಜರಾತ್ ಟೈಟನ್ಸ್ ತಂಡದ ಬಸ್ಸಿನಲ್ಲಿ ಭೀಕರ ಅಗ್ನಿ ಅವಘಡ, ಆಟಗಾರರು ಪಾರು
01/06/2026, 15:18
ಅಹ್ಮಮದಾಬಾದ್(reporterkarnataka.com): ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯ ಮುಗಿದ ಬೆನ್ನಲ್ಲೇ ಗುಜರಾತ್ ಟೈಟನ್ಸ್ ತಂಡದ ಆಟಗಾರರು ದೊಡ್ಡದೊಂದು ಅಪಾಯದಿಂದ ಕೂದಲೆಳೆಯಿಂದ ಪಾರಾಗಿದ್ದಾರೆ. ಆಟಗಾರರನ್ನು ಹೊತ್ತೊಯ್ಯುತ್ತಿದ್ದ ತಂಡದ ಅಧಿಕೃತ ಬಸ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಭಾನುವಾರ ರಾತ್ರಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧದ ಫೈನಲ್ ಪಂದ್ಯ ಮುಗಿದ ಬಳಿಕ ಈ ಘಟನೆ ಸಂಭವಿಸಿದೆ. ಪಂದ್ಯ ಮುಗಿಸಿ ಆಟಗಾರರು ಕ್ರೀಡಾಂಗಣದಿಂದ ಹೋಟೆಲ್ಗೆ ಮರಳುತ್ತಿದ್ದಾಗ ಬಸ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಬಸ್ನಲ್ಲಿದ್ದ ಎಲ್ಲಾ ಆಟಗಾರರನ್ನು ಶೀಘ್ರವಾಗಿ ಕೆಳಗೆ ಇಳಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಬಸ್ ಒಳಗೆ ಹೊಗೆ ಆವರಿಸಿದ್ದರಿಂದ ಆಟಗಾರರು ರಸ್ತೆಯಲ್ಲೇ ಸುಮಾರು ಒಂದು ಗಂಟೆಯ ಕಾಲ ಕಾಯಬೇಕಾಯಿತು. ಆ ಬಳಿಕ ಗುಜರಾತ್ ಟೈಟನ್ಸ್ ಫ್ರಾಂಚೈಸಿಯು ಆಟಗಾರರನ್ನು ಸುರಕ್ಷಿತವಾಗಿ ಹೋಟೆಲ್ಗೆ ಕರೆದೊಯ್ಯಲು ಮತ್ತೊಂದು ಬಸ್ನ ಪರ್ಯಾಯ ವ್ಯವಸ್ಥೆ ಮಾಡಿತು.
ಭಾನುವಾರ ನಡೆದ ರೋಮಾಂಚಕ ಫೈನಲ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 5 ವಿಕೆಟ್ಗಳ ಸೋಲು ಕಂಡು ನಿರಾಸೆಯಲ್ಲಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ, ಈ ಬೆಂಕಿ ಅವಘಡ ಮತ್ತಷ್ಟು ಆತಂಕ ಮೂಡಿಸಿತು. ಕಳೆದ ಕೆಲವು ದಿನಗಳಿಂದ ಸತತ ಪ್ರಯಾಣದಿಂದಾಗಿ ತಂಡದ ಆಟಗಾರರು ತೀವ್ರ ಆಯಾಸಗೊಂಡಿದ್ದರು. ಮೇ 29 ರಂದು ಪಂಜಾಬ್ನ ಮುಲ್ಲನ್ಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್-2 ಪಂದ್ಯ ಆಡಿದ್ದ ತಂಡ, ಹವಾಮಾನ ವೈಪರೀತ್ಯದ ಕಾರಣ ತಡವಾಗಿ ಶನಿವಾರ ಸಂಜೆಯಷ್ಟೇ ಅಹಮದಾಬಾದ್ ತಲುಪಿತ್ತು.
ಸತತ ಪಂದ್ಯಗಳು ಮತ್ತು ಪ್ರಯಾಣದ ಆಯಾಸವೇ ಫೈನಲ್ನಲ್ಲಿ ತಂಡದ ಸಾಧಾರಣ ಪ್ರದರ್ಶನಕ್ಕೆ ಕಾರಣವೇ ಎಂಬ ಪ್ರಶ್ನೆಗೆ ಉತ್ತರಿಸಿದ ಗುಜರಾತ್ ತಂಡದ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ, “ಸತತ ಪಂದ್ಯಗಳು ಮತ್ತು ಸುದೀರ್ಘ ಪ್ರಯಾಣದಿಂದ ಆಟಗಾರರು ದಣಿದಿದ್ದರು ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಅದನ್ನೇ ನೆಪವಾಗಿಸಿ ಆರ್ಸಿಬಿ ತಂಡದ ಅದ್ಭುತ ಗೆಲುವಿನ ಕ್ರೆಡಿಟ್ ಅನ್ನು ನಾವು ಕಸಿದುಕೊಳ್ಳಲು ಬಯಸುವುದಿಲ್ಲ. ನಮ್ಮ ಮೊತ್ತ ಸ್ವಲ್ಪ ಕಡಿಮೆಯಾಗಿತ್ತು, ಆದರೂ ನಮ್ಮ ತಂಡದವರು ಉತ್ತಮ ಹೋರಾಟ ನೀಡಿದರು. ಎದುರಾಳಿ ತಂಡ ನಮ್ಮಗಿಂತ ಚೆನ್ನಾಗಿ ಆಡಿದ್ದರಿಂದ ಗೆಲುವು ಸಾಧಿಸಿದೆ” ಎಂದು ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.













