ಇತ್ತೀಚಿನ ಸುದ್ದಿ
ನಿಜವಾಯ್ತು ಮಿಥನ್ ರೈ ಭವಿಷ್ಯವಾಣಿ!: ಕೊನೆಗೂ ಡಿಕೆಶಿ ಆದ್ರು ಸಿಎಂ!!; ಇದೀಗ ವೀಡಿಯೊ ವೈರಲ್!
04/06/2026, 20:27
ಮಂಗಳೂರು(reporterkarnataka.com): ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಕಳೆದ ವರ್ಷ ನವರಾತ್ರಿ ಸಂದರ್ಭದಲ್ಲಿ ನೀಡಿದ್ದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅದೇನೆಂದರೆ 2026ರಲ್ಲಿ ತನ್ನ ನೆಚ್ಚಿನ ನಾಯಕ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯವಾಣಿ ನುಡಿದಿದ್ದರು. ಆ ವೀಡಿಯೊ ಇದೀಗ ವೈರಲ್ ಆಗುತ್ತಿದೆ.
ಮಿಥುನ್ ಹೇಳಿದ್ದು ನಿಜವಾಯಿತು ಎಂಬ ಚರ್ಚೆ ಕರಾವಳಿ ಭಾಗದಲ್ಲಿ ಈಗ ಬಿರುಸಾಗಿ ನಡೆಯುತ್ತಿದೆ.



2025ರ ಅಕ್ಟೋಬರ್ನಲ್ಲಿ ಮಂಗಳೂರಿನಲ್ಲಿ ಮಿಥುನ್ ರೈ ನೇತೃತ್ವದಲ್ಲಿ ನಡೆದ 10ನೇ ವರ್ಷದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಆಗ ಉಪಮುಖ್ಯಮಂತ್ರಿಯಾಗಿದ್ದ ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಮಿಥುನ್ ರೈ, “ಈ ಬಾರಿ ಡಿ.ಕೆ. ಶಿವಕುಮಾರ್ ಡಿಸಿಎಂ ಆಗಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಮುಂದಿನ ವರ್ಷ ಇದೇ ವೇದಿಕೆಗೆ ಅವರು ಮುಖ್ಯಮಂತ್ರಿ ಆಗಿ ಆಗಮಿಸಲಿದ್ದಾರೆ. ದೇವಿಯ ಆಶೀರ್ವಾದವೂ ಅವರೊಂದಿಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಅವರ ಈ ಹೇಳಿಕೆಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಿಂದ ಭಾರೀ ಕರತಾಡನ ವ್ಯಕ್ತವಾಗಿತ್ತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹಲವು ಕಾಂಗ್ರೆಸ್ ಮುಖಂಡರು ಕೂಡ ಶಿವಕುಮಾರ್ ಅವರ ನಾಯಕತ್ವವನ್ನು ಕೊಂಡಾಡಿ, ಅವರು ಶೀಘ್ರದಲ್ಲೇ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಬೇಕಾದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಮಿಥುನ್ ರೈ ಆಗಲೇ ಅಭಿಪ್ರಾಯಪಟ್ಟಿದ್ದರು. ಜೊತೆಗೆ, ಹುಲಿ ವೇಷಧಾರಿ ಕಲಾವಿದರ ಕಲ್ಯಾಣ, ಉದ್ಯೋಗಾವಕಾಶ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಯಾವುದೇ ಪೂರ್ವನಿಯೋಜಿತ ಯೋಜನೆಯಿಲ್ಲದೆ ಜನರ ಪ್ರೀತಿ ಮತ್ತು ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ಬಂದಿರುವುದಾಗಿ ಹೇಳಿದ್ದರು. ದಕ್ಷಿಣ ಕನ್ನಡ ಜಿಲ್ಲೆ ದೇಶದ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಅವರು ಪ್ರಶಂಸಿಸಿದ್ದರು.
ಇದೀಗ ಮತ್ತೊಂದು ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಾಗಿದ್ದ ಗೌರವ ಫಲಕದಲ್ಲಿ “2026 ಸಿಎಂ ಡಿ.ಕೆ. ಶಿವಕುಮಾರ್” ಎಂದು ಉಲ್ಲೇಖಿಸಲಾಗಿತ್ತು. ಒಂದು ವರ್ಷದ ಬಳಿಕ ಅದೇ ಮಾತು ವಾಸ್ತವ ರೂಪ ಪಡೆದಿರುವುದರಿಂದ, ಮಿಥುನ್ ರೈ ಅವರ ಹೇಳಿಕೆ ಮತ್ತು ಆ ಫಲಕ ಎರಡೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿವೆ.













