2:10 PM Monday22 - June 2026
ಬ್ರೇಕಿಂಗ್ ನ್ಯೂಸ್
ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ಮಂಗಳೂರು ಸಹಿತ ರಾಜ್ಯದ 6 ಸ್ಮಾರ್ಟ್‌ ಸಿಟಿ ಕಾಮಗಾರಿಗಳ ತನಿಖೆ: ಸಚಿವ ಬೈರತಿ ಸುರೇಶ ಸೂಚನೆ

02/01/2025, 23:17

ಬೆಂಗಳೂರು(reporterkarnataka.com):ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿಯಲ್ಲಿ ರಾಜ್ಯದ 6 ಸ್ಮಾರ್ಟ್‌ ಸಿಟಿ (ಬೆಂಗಳೂರು ಹೊರತುಪಡಿಸಿ) ಯೋಜನೆಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಸಂಪೂರ್ಣ ತನಿಖೆಗೆ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.‌ ಸುರೇಶ (ಬೈರತಿ) ಸೂಚಿಸಿದ್ದಾರೆ.


ಸ್ಮಾರ್ಟ್‌ ಸಿಟಿ ಅಭಿಯಾನದಡಿ ರಾಜ್ಯ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಬೈರತಿ ಸುರೇಶ ಅವರು ಇಂದು ವಿಧಾನಸೌಧದ ಕಚೇರಿಯಲ್ಲಿ ನಡೆಸಿದರು.
ಸ್ಮಾರ್ಟ್‌ ಸಿಟಿ ಅಭಿಯಾನ ಶುರುವಾದಗಿನಿಂದ ಇಲ್ಲಿಯವರೆಗೂ ರಾಜ್ಯದ 7 ಸ್ಮಾರ್ಟ್‌ ಸಿಟಿಗಳಲ್ಲಿ ರೂ. 6415.51 ಕೋಟಿಗಳ ವೆಚ್ಚದ ಕಾಮಗಾರಿಗಳು ನಡೆದಿದ್ದು, ಪೂರ್ಣಗೊಂಡಿರುವ ಹಲವು ಕಾಮಗಾರಿಗಳು ಅಷ್ಟೊಂದು ತೃಪ್ತಿದಾಯಕವಾಗಿಲ್ಲವೆಂದು ತಿಳಿದು ಬಂದ ಕಾರಣ ಸಚಿವ ಬೈರತಿ ಸುರೇಶ ರವರು ಬೆಂಗಳೂರು ಹೊರತುಪಡಿಸಿ (ರೂ.877.82 ಕೋಟಿ ರೂಪಾಯಿಗಳ ಕಾಮಗಾರಿ ಬೆಂಗಳೂರು ಸ್ಮಾರ್ಟ್‌ ಸಿಟಿಯಲ್ಲಿ ಪೂರ್ಣಗೊಂಡಿದ್ದು) ಇತರೆ 6 ಸ್ಮಾರ್ಟ್‌ ಸಿಟಿಗಳ ಯೋಜನೆಗಳ ಬಗ್ಗೆ ಸ್ವತಂತ್ರ ಸಂಸ್ಥೆ ಒಳಗೊಂಡಂತೆ ಸಮಿತಿ ರಚಿಸಿ ತನಿಖೆ ನಡೆಸಿ 3 ತಿಂಗಳ ಕಾಲಮಿತಿಯೊಳಗೆ ವರದಿಯನ್ನು ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ ಸಚಿವ ಬೈರತಿ ಸುರೇಶ ಅವರು ಸೂಚಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ 50:50 ಅನುಪಾತದ ಅನುದಾನದಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ. ನಡೆದಿರುವ ಕಾಮಗಾರಿಗಳಲ್ಲಿ ಬಹುತೇಕ ರಸ್ತೆ ನಿರ್ಮಾಣ, ಒಳಚರಂಡಿ, ಉದ್ಯಾನವನಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳಿಗೆ ಅನುದಾನವನ್ನು ವೆಚ್ಚ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವ ಬೈರತಿ ಸುರೇಶ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಪಾಲು ಅನುದಾನ ಇದಾಗಿದ್ದು, ಇದನ್ನು ಹೆಚ್ಚಿನ ರೀತಿಯಲ್ಲಿ ಸ್ಮಾರ್ಟ್‌ ಶಾಲೆಗಳು, ಆಸ್ಪತ್ರೆ, ಗ್ರಂಥಾಲಯ, ಬಸ್‌ ನಿಲ್ದಾಣ ಸೇರಿದಂತೆ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿತ್ತು ಎಂದು ತಿಳಿಸಿದರು.
ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿಯಲ್ಲಿ ನಡೆದಿರುವ ಕಾಮಗಾರಿಗಳು ಸರ್ಕಾರದ ಆಸ್ತಿಗಳನ್ನು ವೃದ್ಧಿಸುವಂತೆ ಇರಬೇಕೆ ಹೊರತು ರಸ್ತೆ ನಿರ್ಮಾಣ, ಚರಂಡಿ ಹಾಗೂ ಇತರೆ ಕಾಮಗಾರಿಗಳಿಗೆ ಬಳಸಿರುವುದು ಸರಿಯಾದ ಮಾರ್ಗವಲ್ಲವೆಂದು 6 ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸೂಚಿಸಿದರು.
ಪ್ರತಿ ಸ್ಮಾರ್ಟ್‌ ಸಿಟಿಗೂ ಅಂದಾಜು ರೂ. 990 ಕೋಟಿಗಳ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಶೈಕ್ಷಣಿಕ ಶೇ. 2ರಷ್ಟು, ಇಂಧನ ಶೇ. 8ರಷ್ಟು, ಆರೋಗ್ಯ ಶೇ. 2 ರಷ್ಟು, ಮಾಹಿತಿ ತಂತ್ರಜ್ಞಾನಕ್ಕೆ ಶೇ. 8ರಷ್ಟು ಒಟ್ಟಾರೆಯಾಗಿ ಶೇ. 20 ರಷ್ಟು ಅನುದಾನವನ್ನು ಕೆರೆ ಮತ್ತು ಉದ್ಯಾನವನ ಶೇ. 9 ರಷ್ಟು, ಮಾರುಕಟ್ಟೆ ಶೇ. 5 ರಷ್ಟು, ರಸ್ತೆ ನಿರ್ಮಾಣ ಶೇ. 36 ರಷ್ಟು, ಕ್ರೀಡಾ ವಲಯಕ್ಕೆ ಶೇ. 5 ರಷ್ಟು, ಸಾರಿಗೆ ವ್ಯವಸ್ಥೆಗೆ ಶೇ. 8 ರಷ್ಟು, ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಶೇ. 18 ರಷ್ಟು ಅನುದಾನ ಹಂಚಿಕೆಯಾಗಿದ್ದು, ಈ ವಲಯಗಳಲ್ಲಿ ನಡೆದಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಅವುಗಳಲ್ಲಿ ಕೆಲವು ಸಮರ್ಪಕವಾಗಿ ನಡೆದಿಲ್ಲ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರ ಗಮನಕ್ಕೆ ಬಂತು. ಈಗಾಗೀ ಒಟ್ಟಾರೆಯಾಗಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸ ಬೇಕಾಗುತ್ತದೆ ಎಂದು ಸಚಿವ ಬೈರತಿ ಸುರೇಶ ಅವರು ಸಭೆಯಲ್ಲಿ ತಿಳಿಸಿದರು.
2025 ಮಾರ್ಚ್‌ ಅಂತ್ಯಕ್ಕೆ ಸ್ಮಾರ್ಟ್‌ ಸಿಟಿ ಅಭಿಯಾನ ಮುಗಿಯಲಿದ್ದು, ಬರಬೇಕಾಗಿರುವ ಉಳಿಕೆ ಮೊತ್ತ ಹಾಗೂ ಹಾಲಿ ಉಳಿದಿರುವ ಮೊತ್ತದಲ್ಲಿ ಆಧುನಿಕ ತಂತ್ರಜ್ಞಾನದ ಅಂತರ್‌ರಾಷ್ಟ್ರೀಯ ಮಟ್ಟದ ಸ್ಮಾರ್ಟ್‌ ಶಾಲೆಗಳ ನಿರ್ಮಾಣಕ್ಕೆ ವಿನೀಯೋಗಿಸ ಬೇಕು. ಇದರಿಂದಾಗಿ ನಮ್ಮ ಬಡ ಮಕ್ಕಳು ಸಹ ಕಲಿಕೆಯಲ್ಲಿ ಮುಂದುವರೆಯ ಬೇಕು. ಇದಕ್ಕಾಗಿ ಅತ್ಯಾಧುನಿಕ ಕಲಿಕ ಸಾಮಗ್ರಿಗಳು ಸ್ಮಾರ್ಟ್‌ ಶಾಲೆಗಳಲ್ಲಿ ಒಳಗೊಳ್ಳಬೇಕು ಎಂದು ಸಚಿವ ಬೈರತಿ ಸುರೇಶ ರವರು ಅಭಿಪ್ರಾಯಿಸಿದರು.
ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಶಿವಮೊಗ್ಗ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು ಅಸಮಾಧಾನವನ್ನು ವ್ಯಕ್ತಪಡಿಸಿ ನನಗೆ ನೇರವಾಗಿ ಹೇಳಿದ್ದಾರೆ ಎಂದು ಸಚಿವರು ಸಭೆಯಲ್ಲಿ ತಿಳಿಸುತ್ತಾ, ಮುಂದೆ ಈ ರೀತಿ ಆಗಬಾರದೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿಯಲ್ಲಿ ರಾಜ್ಯದ 6 ಸ್ಮಾರ್ಟ್‌ ಸಿಟಿಗಳಲ್ಲಿ ಇಲ್ಲಿಯವರೆಗೂ ನಡೆದಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲು ಸಮಿತಿಯೊಂದನ್ನು ರಚಿಸಲು ಸಚಿವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸುತ್ತಾ, ತನಿಖಾ ಸಮಿತಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆಯಿಂದ ಮುಖ್ಯ ಅಭಿಯಂತರ ದರ್ಜೆಯ ಒರ್ವ ಅಧಿಕಾರಿ ಹಾಗೂ ಆಯಾ ಸ್ಮಾರ್ಟ್‌ ಸಿಟಿ ವ್ಯಾಪ್ತಿಗಳಲ್ಲಿ ಬರುವ ವಿಶ್ವ ವಿದ್ಯಾನಿಲಯದ ತಾಂತ್ರಿಕ ಪರಿಣಿತರು ಮತ್ತು Indian Institute of Science ಸಂಸ್ಥೆಯಿಂದ ಒರ್ವ ಪರಿಣಿತಿ ತಜ್ಞರನ್ನು ಸಮಿತಿ ಒಳಗೊಳ್ಳಬೇಕು, ಅಗತ್ಯ ತನಿಖೆ ನಡೆಸಿ ಸಮಗ್ರವಾದ ವರದಿಯನ್ನು ಮೂರು ತಿಂಗಳ ಕಾಲಮಿತಿಯೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಚಿವರಾದ ಬಿ. ಎಸ್.‌ ಸುರೇಶ (ಬೈರತಿ) ಸೂಚಿಸಿದರು.
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್‌, ಮುಖ್ಯ ಅಭಿಯಂತರ ನಂದೀಶ್‌, 6 ಸ್ಮಾರ್ಟ್‌ ಸಿಟಿಗಳ ವ್ಯವಸ್ಥಾಪಕ ನಿರ್ದೇಶಕರುಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು