6:45 PM Monday22 - June 2026
ಬ್ರೇಕಿಂಗ್ ನ್ಯೂಸ್
ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ವಿಧಾನ ಪರಿಷತ್ ಅಡ್ಡ ಮತದಾನ | ಪ್ರೆಸ್ಟೀಜ್ ಅಪಾರ್ಟ್‌ಮೆಂಟ್’ ರಹಸ್ಯ ಸಭೆ ಬಗ್ಗೆ ಬಿಜೆಪಿ ನಾಯಕರು ಅಸಡ್ಡೆ ಮಾಡಿದ್ದೇ ಸೋಲಿಗೆ ಕಾರಣ: ಮಾಜಿ ಸಿಎಂ ಡಿವಿ

22/06/2026, 17:58

ಬೆಂಗಳೂರು(reporterkarnarnataka.com): ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ವಿಚಾರ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಐದನೇ ಅಭ್ಯರ್ಥಿಯ ಗೆಲುವಿನ ಹಿಂದೆ ನಡೆದಿದ್ದ ‘ಅಪಾರ್ಟ್‌ಮೆಂಟ್ ರಹಸ್ಯ ಸಭೆ’ಗಳ ಕುರಿತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಅತ್ಯಂತ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಪಕ್ಷದ ರಾಜ್ಯ ನಾಯಕರ ಉದಾಸೀನತೆಯೇ ಇಂದಿನ ಸೋಲಿಗೆ ಪ್ರಮುಖ ಕಾರಣ ಎಂದು ಅವರು ನೇರವಾಗಿ ಚಾಟಿ ಬೀಸಿದ್ದಾರೆ.

*’ಪ್ರೆಸ್ಟೀಜ್ ಅಪಾರ್ಟ್‌ಮೆಂಟ್’ ರಹಸ್ಯ ಬಯಲು ಮಾಡಿದ ಡಿವಿಎಸ್!*
“ಕಾಂಗ್ರೆಸ್ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು,” ಎಂದು ಮಾತು ಆರಂಭಿಸಿದ ಸದಾನಂದ ಗೌಡ, ತೆರೆಮರೆಯಲ್ಲಿ ನಡೆದ ರಾಜಕೀಯ ಆಪರೇಷನ್‌ನ ಸಂಪೂರ್ಣ ವಿವರವನ್ನು ಬಿಚ್ಚಿಟ್ಟಿದ್ದಾರೆ.
ಜೂನ್ 13 ರಂದು ನನಗೆ ಹೆಬ್ಬಾಳದ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಿಂದ ಒಂದು ಕರೆ ಬಂದಿತ್ತು. ಕಾಂಗ್ರೆಸ್‌ನ ನಾಲ್ಕು ಪ್ರಮುಖ ನಾಯಕರು ಮತ್ತು ಬಿಜೆಪಿಯ ಕೆಲ ಶಾಸಕರು ಅಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ಆ ವ್ಯಕ್ತಿ ಮಾಹಿತಿ ನೀಡಿದರು. ನಾನು ತಕ್ಷಣವೇ ಅಲರ್ಟ್ ಆಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ಮತ್ತು ಆರ್. ಅಶೋಕ್ ಅವರಿಗೆ ಕರೆ ಮಾಡಿದೆ. ಆದರೆ ಇಬ್ಬರೂ ಸಿಗಲಿಲ್ಲ. ತಕ್ಷಣವೇ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ. ಅವರು ‘ಸರಿ ನೋಡ್ತೇನೆ’ ಎಂದರು. ಆದರೆ ಮರುದಿನವೇ ಅದೇ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಪಕ್ಕದ ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲಿ ಎರಡನೇ ಸಭೆಯೂ ನಡೆಯಿತು! ಆಗಲೂ ನಾನು ಅದೇ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ ಎಚ್ಚರಿಸಿದೆ. ಆದರೆ ನಮ್ಮವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದ್ದಾರೆ.
ವಿಪರ್ಯಾಸ ಎಂದರೆ, ಅಡ್ಡಮತದಾನ ನಡೆದು ಪಕ್ಷಕ್ಕೆ ಭಾರಿ ಮುಖಭಂಗವಾದ ಮೇಲೆ ಅದೇ ಪ್ರಧಾನ ಕಾರ್ಯದರ್ಶಿ ಡಿವಿಎಸ್ ಅವರಿಗೆ ಕರೆ ಮಾಡಿ, “ಅಣ್ಣ ನೀವು ಹೇಳಿದ ಹಾಗೆಯೇ ಆಯ್ತಲ್ಲ!’ ಎಂದಿದ್ದರು. ಅದಕ್ಕೆ ಸದಾನಂದ ಗೌಡರು, “ಹೊಳೆ ದಾಟಿದ ಮೇಲೆ ಮತ್ತೇನು ಚರ್ಚೆ?” ಎಂದು ಬೇಸರದಿಂದಲೇ ಸುಮ್ಮನಾಗಿದ್ದಾರೆ.

*ಧರ್ಮಸ್ಥಳ ಆಣೆ-ಪ್ರಮಾಣಕ್ಕೆ ತೀವ್ರ ಆಕ್ಷೇಪ:*
ಇತ್ತೀಚೆಗೆ ರಾಜಕೀಯ ಜಿದ್ದಾಜಿದ್ದಿಗೆ ಧರ್ಮಸ್ಥಳದ ಹೆಸರನ್ನು ಎಳೆದು ತರುತ್ತಿರುವುದರ ಕುರಿತು ಡಿವಿಎಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಸ್ಪಷ್ಟವಾಗಿ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಧರ್ಮದ ಕ್ಷೇತ್ರಕ್ಕೆ ರಾಜಕೀಯವನ್ನು ತೆಗೆದುಕೊಂಡು ಹೋಗಬೇಡಿ. ದೇವರ ಹತ್ತಿರವೂ ರಾಜಕೀಯ ಹೋಗುವುದಾದರೆ ಎಲ್ಲವನ್ನೂ ದೇವರಿಗೇ ಬಿಟ್ಟುಬಿಡಿ. ದೇವರೇ ರಾಜಕೀಯ ಮಾಡಲಿ! ನಮ್ಮಿಂದ ರಾಜಕೀಯ ಮಾಡಲು ಆಗದಿದ್ದರೆ ದೇವರಿಗೇ ಬಿಟ್ಟುಬಿಡಿ,” ಎಂದು ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.

*ಕಾರ್ಯಕರ್ತರ ಅಸ್ತಿತ್ವ ಉಳಿಸಿ; ನಾಯಕರ ವಿರುದ್ಧ ಆಕ್ರೋಶ:*
“ರಾಜ್ಯ ನಾಯಕರು ಕೇವಲ ತಮ್ಮ ಸ್ವಂತ ಅಸ್ತಿತ್ವ ಉಳಿಸಿಕೊಳ್ಳಲು ಶ್ರಮ ಹಾಕುತ್ತಿದ್ದೀರಿ. ಮೊದಲು ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ಅಸ್ತಿತ್ವ ಉಳಿಸಿ. ಇಂದು ಬೀದಿಯಲ್ಲಿ ನಮಗೆ ಕಾರ್ಯಕರ್ತರು ಬೈಯುತ್ತಿದ್ದಾರೆ,” ಎಂದು ರಾಜ್ಯ ನಾಯಕತ್ವದ ವಿರುದ್ಧ ಸದಾನಂದ ಗೌಡರು ಹರಿಹಾಯ್ದಿದ್ದಾರೆ.
ಪಕ್ಷದ ಒಳಜಗಳದ ಬಗ್ಗೆ ಮಾತನಾಡಿದ ಅವರು, “ಸಮಿತಿಗಳನ್ನೇನೋ ಮಾಡಿದ್ದೀರಿ ಸರಿ. ಆದರೆ ಕೋರ್ ಕಮಿಟಿ ಸದಸ್ಯರ ಜೊತೆ ಚರ್ಚೆ ಮಾಡಿ ತೀರ್ಮಾನ ತಗೊಂಡಿದ್ದೀರಾ? ಕನಿಷ್ಠ ಒಂದು ಅಭಿಪ್ರಾಯವನ್ನಾದರೂ ಕೇಳಿದ್ದೀರಾ? ಯಾರನ್ನೂ ಸಮಾಲೋಚನೆ ಮಾಡದೇ ಎಲ್ಲವನ್ನೂ ಏಕಪಕ್ಷೀಯವಾಗಿ ಮಾಡುತ್ತಿರುವುದರ ಪರಿಣಾಮವೇ ಈ ಇಂದಿನ ಸೋಲು. ನಮ್ಮ ಒಳಜಗಳ ಮತ್ತು ಆಂತರಿಕ ವ್ಯವಸ್ಥೆ ಸರಿ ಇಲ್ಲದ ಕಾರಣಕ್ಕೇ ನಾವು ಸೋತಿದ್ದೇವೆ,” ಎಂದು ಒಪ್ಪಿಕೊಂಡಿದ್ದಾರೆ.

*ಇದು ಡಿಕೆಶಿ ಗೆಲುವೋ? ನಮ್ಮ ವೈಫಲ್ಯವೋ?:*
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯತಂತ್ರವನ್ನು ಉಲ್ಲೇಖಿಸಿದ ಡಿವಿಎಸ್, “ಡಿಕೆ ಶಿವಕುಮಾರ್ ಅಂತಹ ನಾಯಕ ಸಿಎಂ ಆದ ವಾರದಲ್ಲೇ ಇಂತಹ ಭರ್ಜರಿ ಏಟು ಕೊಟ್ಟಿದ್ದಾರೆ. ಇದನ್ನು ಡಿಕೆ ಶಿವಕುಮಾರ್ ಅವರ ಗೆಲುವು ಅನ್ನಬೇಕೋ ಅಥವಾ ನಮ್ಮೊಳಗಿನ ವೈಫಲ್ಯ ಅನ್ನಬೇಕೋ? ಈಗಲಾದರೂ ಸಂಪೂರ್ಣ ವ್ಯವಸ್ಥೆಯನ್ನು ಸರಿಪಡಿಸುವ ಅಗತ್ಯವಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತಿದ್ದರೆ, ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಸಂಪೂರ್ಣವಾಗಿ ಬಂದ್ ಆಗುತ್ತಿತ್ತು. ಆತ್ಮ ಇರುವವರು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ,” ಎಂದು ಸ್ವಪಕ್ಷದ ನಾಯಕರಿಗೆ ತೀಕ್ಷ್ಣವಾಗಿ ಎಚ್ಚರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು