ಇತ್ತೀಚಿನ ಸುದ್ದಿ
ಆತ್ಮಶಕ್ತಿ ಎಲ್ಯಾರ್ ಪದವು ಶಾಖೆಯಿಂದ 17ರಂದು ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಶಿಬಿರ
15/05/2026, 11:41
ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಎಲ್ಯಾರ್ಪದವು ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಮೇ 17ರಂದು ಪೂರ್ವಾಹ್ನ ಸಮಯ 9.30ರಿಂದ ಅಪರಾಹ್ನ12.30 ರವರೆಗೆ ಕೊಣಾಜೆ ಎಲ್ಯಾರ್ ಪದವು,ಹೋಲಿಕ್ರಾಸ್ ಚರ್ಚ್ ಬಳಿಯ ಶರೂನ್ ಸ್ಟ್ರಕ್ಚರ್ (ಶಾಖೆಯ ಆವರಣ)ದಲ್ಲಿ ಆಯೋಜಿಸಲಾಗಿದೆ.
ಈ ವೈದ್ಯಕೀಯ ಶಿಬಿರದಲ್ಲಿ ಎ.ಜೆ. ಇನ್ಸಿಟ್ಯೂಟ್ ಆಫ್ ಡೆಂಟಲ್ ಸಾಯನ್ಸಸ್ ನ ನುರಿತ ವೈದ್ಯರ ತಂಡದಿಂದ ಉಚಿತ ದಂತ ತಪಾಸಣೆ ಮತ್ತು ಸಲಹೆ, ಹಲ್ಲುಗಳ ಶುಚೀಕರಣ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು, ಅನಾರೋಗ್ಯಕರ ಹಲ್ಲುಗಳನ್ನು ಕೀಳಿಸುವುದು, ಮತ್ತು ನಾಟೆಕಲ್ ನ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನುರಿತ ವೈದ್ಯರ ತಂಡದಿಂದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಮಧುಮೇಹ ತಪಾಸಣೆ ,ಬಿಪಿ ತಪಾಸಣೆ , ಚರ್ಮ ರೋಗ, ಕೀಲು ಮತ್ತು ಗಂಟು ನೋವು ತಪಾಸಣೆ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಹೆಚ್ಚಿನ ಚಿಕಿತ್ಸೆಗೆ ಹಸಿರು ಕಾರ್ಡನ್ನು ನೀಡುವುದು ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ. ಅಗತ್ಯವುಳ್ಳವರಿಗೆ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಗುವುದು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಾಮಾನ್ಯ ಸೇವಾ ಕೇಂದ್ರ, ಮಂಗಳೂರು ಇವರ ವತಿಯಿಂದ ಆಯುಷ್ಮಾನ್(ಅಭಾ) ಕಾರ್ಡ್ ಮತ್ತು ಇಶ್ರಮ್ ಕಾರ್ಡ್ ಉಚಿತ ನೋಂದಾವಣೆ ಜರಗಲಿದೆ.
ಈ ವೈದ್ಯಕೀಯ ಶಿಬಿರವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಹಾಗೂ ಮಹಿಳಾ ಸಂಘ ಅಂಬ್ಲಮೊಗರು, ಆದಿಮಾಯೆ ರಾಮ ದತ್ತಾಂಜನೇಯ ಭಜನಾ ಮಂದಿರ ಎಲ್ಯಾರ್ ಪದವು, ಶ್ರೀ ಅರ್ಧನಾರೀಶ್ವರ ಮಹಿಳಾ ಮಂಡಳಿ, ಸಂಪಿಗೆದಡಿ, ಹರೇಕಳ, ಕುತ್ತಿಮುಗೇರು ಸೇವಾ ಸಮಿತಿ, ಹರೇಕಳ, ಸಿ.ಎಸ್.ಐ. ಬೆಥಾನ್ಯ ಚರ್ಚ್ ಬೆಳ್ಮ, ಕೊಣಾಜೆ, ಹೋಲಿ ಕ್ರಾಸ್ ಚರ್ಚ್ ಎಲ್ಯಾರ್ ಪದವು ಹಾಗೂ ಹಾಲು ಉತ್ಪಾದಕರ ಸಂಘ, ಎಲ್ಯಾರ್ ಪದವು ಇವರುಗಳ ಜಂಟಿ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












