ಇತ್ತೀಚಿನ ಸುದ್ದಿ
ಕಾಕ್ರೋಚ್ ಜನತಾ ಪಾರ್ಟಿಗೆ ಬರೋಬ್ಬರಿ 14 ಮಿಲಿಯನ್ ಫಾಲೋವರ್ಸ್: ಶರ್ಟ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
21/05/2026, 18:45
ಬೆಂಗಳೂರು(reporterkarnataka.com): ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಭಾರತದಲ್ಲಿ ಝೆನ್ ಜಿ ಪ್ರತಿಭಟನೆಯ ರೂಪ ತಾಳುವಂತೆ ಮಾಡುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಇನ್ ಸ್ಟಾ ಗ್ರಾಂ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಫಾಲೋವರ್ಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಿಜೆಪಿ ಸ್ಥಾಪನೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ ಗಳನ್ನು ಮೀರಿಸಿ ಫಾಲೋವರ್ಸ್ ಗಳನ್ನು ಹೊಂದಿದೆ. ಇನ್ ಸ್ಟಾಗ್ರಾಂ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಗೆ ಬರೋಬ್ಬರಿ 14 ಮಿಲಿಯನ್ ಫಾಲೋವರ್ಸ್ ಗಳಾಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ವಿಪಕ್ಷಗಳೆಲ್ಲವೂ ಈ ಪಕ್ಷವನ್ನು ಬೆಂಬಲಿಸಿದ್ದು, ಕರ್ನಾಟಕದಲ್ಲಿಯೂ ಕಾಂಗ್ರೆಸ್ ನಾಯಕರು ಕಾಂಕ್ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸಿದ್ದಾರೆ.
ರಾತ್ರೋರಾತ್ರಿ ಜನ್ಮತಾಳಿದ ಕಾಕ್ರೋಚ್ ಪಾರ್ಟಿ, ಭಾರಿ ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಕ್ರೋಚ್ ಪಕ್ಷದ ಟೀ ಶರ್ಟ್ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕರು ಕಾಕ್ರೋಚ್ ಜನತಾ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ, ಅಲ್ಲದೇ ಸಿಎಂ ಸಿದ್ದರಾಮಯ್ಯ, ಐ ಆಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ ಮಾದಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರನ್ನು ಜಿರಳಗಳಿದ್ದಂತೆ ಎಂದು ಟೀಕಿಸಿದ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಯಾಗಿ ಆರಂಭವಾದ ಪಕ್ಷವೇ ‘ಕಾಕ್ರೋಚ್ ಜನತಾ ಪಾರ್ಟಿ’. ಪ್ರಮುಖ ಪ್ರಕರಣವೊಂದರ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ನಿರುದ್ಯೋಗಿ ಯುವಕರನ್ನು ಉದ್ದೇಶಿಸಿ ನ್ಯಾಯಮೂರ್ತಿ ಸೂರ್ಯಕಾಂತ್ ಮಾತನಾಡಿದ್ದರು. ಮಾತಿನ ಭರದಲ್ಲಿ ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ. ಉದ್ಯೋಗ ಮತ್ತು ಸ್ಥಾನಮಾನ ಸಿಗದಿದ್ದಾಗ ಅವರು ಆರ್ಟಿಐ ಕಾರ್ಯಕರ್ತರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರ ಸೋಗಿನಲ್ಲಿ ಇಡೀ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ ಎಂದು ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ಅಭಿಜೀತ್ ದೀಪ್ಕೆ ಕಾಕ್ರೋಚ್ ಜನತಾ ಪಾರ್ಟಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕವೇ ಹುಟ್ಟುಹಾಕಿದ್ದಾರೆ. ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿದ್ಯಾರ್ಥಿಯಾಗಿರುವ ಅಭಿಜೀತ್ ದೀಪ್ಕೆ ಈ ಹಿಂದೆ 2020 ಮತ್ತು 2023 ರ ನಡುವೆ ಆಮ್ ಆದ್ಮಿ ಪಕ್ಷದೊಂದಿಗೆ ಸಂಬಂಧಿಸಿದ ರಾಜಕೀಯ ಪ್ರಚಾರಗಳು ಮತ್ತು ಸಾಮಾಜಿಕ ಮಾಧ್ಯಮ ಸ್ಥಳಗಳಲ್ಲಿ ಕೆಲಸ ಮಾಡಿದ್ದರು.












