10:19 PM Sunday17 - May 2026
ಬ್ರೇಕಿಂಗ್ ನ್ಯೂಸ್
ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ…

ಇತ್ತೀಚಿನ ಸುದ್ದಿ

ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

17/05/2026, 22:18

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಪ್ರಕೃತಿಯ ಸೌಂದರ್ಯ ಹಾಗೂ ಕಾಫಿ ನಾಡು ಎಂದೇ ಪ್ರಸಿದ್ಧವಾಗಿರುವ ಕೊಡಗು ಜಿಲ್ಲೆಯಲ್ಲಿರುವ ಉದ್ಯಮ ಲೋಕದ ದೈತ್ಯ ಹಾಗೂ ಮಹೀಂದ್ರಾ & ಮಹೀಂದ್ರಾ ಗ್ರೂಪ್‌ ಚೇರ್ಮನ್‌ ಆನಂದ್ ಮಹೀಂದ್ರಾ ಅವರ ಕೌಟುಂಬಿಕ ಕಾಫಿ ಎಸ್ಟೇಟ್‌ಗೆ ಗಜಪಡೆ ಲಗ್ಗೆ ಇಟ್ಟಿದೆ.
ನಿನ್ನೆ ಮುಂಜಾನೆ ಆನೆಗಳ ಹಿಂಡೊಂದು ಎಸ್ಟೇಟ್‌ನ ಆವರಣದೊಳಗೆ ರಾಜಗಾಂಭೀರ್ಯದಿಂದ ಉಲ್ಲಾಸವಾಗಿ ಹೆಜ್ಜೆ ಹಾಕುತ್ತಾ ಸಾಗಿರುವ ಅಪರೂಪದ ದೃಶ್ಯದ ವಿಡಿಯೋ ತುಣುಕನ್ನು ಆನಂದ್ ಮಹೀಂದ್ರಾ ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಕೊಡಗಿನಲ್ಲಿರುವ ನಮ್ಮ ಕುಟುಂಬದ ಕಾಫಿ ತೋಟದ (ಕಾಫಿ ಎಸ್ಟೇಟ್) ಕುರಿತು ನಾನು ಈ ಹಿಂದೆಯೂ ಪೋಸ್ಟ್ ಮಾಡಿದ್ದೆ. ಈ ಎಸ್ಟೇಟನ್ನು ನನ್ನ ಕಿರಿಯ ತಂಗಿ ನಿರ್ವಹಿಸುತ್ತಿದ್ದಾಳೆ. ನಮ್ಮ ಇಡೀ ಕುಟುಂಬವು ಇದನ್ನು ನಮ್ಮದೇ ಆದ ಒಂದು ‘ಪಾರಂಪರಿಕ ಮನೆ’ ಎಂದೇ ಭಾವಿಸಿದೆ,” ಎಂದು ಆನಂದ್ ಮಹೀಂದ್ರಾ ನೆನಪಿಸಿಕೊಂಡಿದ್ದಾರೆ.
ತಮ್ಮ ಸಹೋದರಿ ಇಂದು ಮುಂಜಾನೆ ಕಳುಹಿಸಿದ್ದ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿರುವ ಅವರು, ” ಮುಂಜಾನೆ ಆನೆಗಳ ಹಿಂಡೊಂದು ಎಸ್ಟೇಟ್‌ನ ಒಂದು ಮುಖ್ಯ ಗೇಟ್‌ನಿಂದ (ಅರೆಬಿಕಾ ಕಾಫಿ ಗಿಡಗಳು ಇರುವ ಭಾಗದಿಂದ) ರಸ್ತೆಯ ಆಚೆಗಿರುವ ಮತ್ತೊಂದು ಗೇಟ್‌ಗೆ (ರೋಬಸ್ಟಾ ಕಾಫಿ ಗಿಡಗಳು ಇರುವ ಭಾಗಕ್ಕೆ) ಅತ್ಯಂತ ಗಾಂಭೀರ್ಯದಿಂದ ದಾಟಿಕೊಂಡು ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು,” ಎಂದು ಬರೆದುಕೊಂಡಿದ್ದಾರೆ.

*’ಇದು ಕಾಡಿನ ಅತಿಕ್ರಮಣದಿಂದ ಆದದ್ದಲ್ಲ:*
ಸಾಮಾನ್ಯವಾಗಿ ಕಾಡಿನ ಅತಿಕ್ರಮಣದಿಂದಾಗಿ ವನ್ಯಜೀವಿಗಳು ನಾಡಿಗೆ ಬರುತ್ತವೆ ಎಂಬ ವಾದವನ್ನು ತಳ್ಳಿಹಾಕಿರುವ ಮಹೀಂದ್ರಾ, “ಇದೇನೂ ಕಾಡಿನ ಅತಿಕ್ರಮಣದಿಂದಾಗಿ ಇತ್ತೀಚೆಗೆ ಸೃಷ್ಟಿಯಾಗಿರುವ ಹೊಸ ವಿದ್ಯಮಾನವಲ್ಲ. ಈ ಭವ್ಯ ಅತಿಥಿಗಳು ಕಳೆದ ಹಲವಾರು ದಶಕಗಳಿಂದಲೂ ನಮ್ಮ ಎಸ್ಟೇಟ್‌ಗೆ ನಿರಂತರವಾಗಿ ಭೇಟಿ ನೀಡುತ್ತಲೇ ಇವೆ. ಸಾಮಾನ್ಯವಾಗಿ ತೋಟದಲ್ಲಿರುವ ಹಲಸಿನ ಮರಗಳ ಹಣ್ಣುಗಳನ್ನು ತಿನ್ನುವ ಸಲುವಾಗಿ ಇವು ಇಲ್ಲಿಗೆ ಲಗ್ಗೆ ಇಡುತ್ತವೆ,” ಎಂದು ಬರೆದುಕೊಂಡಿದ್ದಾರೆ.

*ಆಮಂತ್ರಣ ಕೊಟ್ಟಂತೆ ಬಂದಿವೆ ಆನೆಗಳು!:*
ಆನೆಗಳ ಆತ್ಮವಿಶ್ವಾಸದ ನಡಿಗೆಯನ್ನು ಕಂಡು ಆನಂದ್ ಮಹೀಂದ್ರಾ ಅವರು ಹಾಸ್ಯದ ಚಟಾಕಿ ಹಾರಿಸಿದ್ದು, “ಆದರೆ ಈ ಬಾರಿ ಈ ಆನೆಗಳು ಎಸ್ಟೇಟ್‌ನ ಮುಖ್ಯ ಗೇಟ್‌ಗಳ ಮೂಲಕ ಎಷ್ಟು ಭರಪೂರ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಾ ಸಾಗುತ್ತಿವೆ ಎಂದರೆ, ಇವುಗಳಿಗೆ ನಾವೇನಾದರೂ ಅಧಿಕೃತವಾಗಿ ಚಹಾ ಮತ್ತು ತಿಂಡಿಯ ಕೂಟಕ್ಕೆ ಆಮಂತ್ರಣ ನೀಡಿದ್ದೇವೇನೋ ಎನ್ನುವಂತೆ ಭಾಸವಾಗುತ್ತಿದೆ…” ಎಂದು ಬಣ್ಣಿಸಿದ್ದಾರೆ.
ಮುಂದುವರಿದು ಭಾವನಾತ್ಮಕ ಸಾಲುಗಳನ್ನು ಬರೆದಿರುವ ಉದ್ಯಮಿ, “ಈ ಕಾಫಿ ತೋಟವು ಮೊದಲಿನಿಂದಲೂ ತಮಗೇ ಸೇರಿದ್ದು ಹಾಗೂ ನಾವಿಲ್ಲಿ ಕೇವಲ ತಾತ್ಕಾಲಿಕ ಬಾಡಿಗೆದಾರರು ಮಾತ್ರ ಎಂಬ ಸತ್ಯ ಈ ಮೂಕ ಪ್ರಾಣಿಗಳಿಗೆ ಚೆನ್ನಾಗಿ ಗೊತ್ತಿದೆ ಅನಿಸುತ್ತದೆ…” ಎಂದು ಪ್ರಕೃತಿ ಮತ್ತು ವನ್ಯಜೀವಿಗಳ ಮೇಲಿರುವ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಪ್ರಕೃತಿ ಮತ್ತು ಮಾನವನ ನಡುವಿನ ಈ ಅಪರೂಪದ ಸಹಬಾಳ್ವೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಗೆದ್ದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು