ಇತ್ತೀಚಿನ ಸುದ್ದಿ
ಪೋಸ್ಟಿಂಗ್ಗಾಗಿ ಲಕ್ಷಾಂತರ ರೂ. ಡೀಲ್ ಆರೋಪ: ಪಿಎಸ್ಐಗಳ ಆಡಿಯೋ ಸಂಭಾಷಣೆ ವೈರಲ್; ಮೂವರು ಖಾಕಿಗಳ ತಲೆದಂಡ
01/09/2026, 15:49
ಕಾರವಾರ(reporterkarnataka.com): ಪೊಲೀಸ್ ಠಾಣೆಯ ಪ್ರಮುಖ ಪೋಸ್ಟಿಂಗ್ಗಾಗಿ ಲಕ್ಷಾಂತರ ರೂ ಡೀಲ್ ಹಾಗೂ ಮೇಲಾಧಿಕಾರಿಗಳಿಗೆ ಮಾಸಿಕ ಹಫ್ತಾ ನೀಡುವ ಕುರಿತು ಸ್ವತಃ ಪಿಎಸ್ಐಗಳೇ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಕರ್ತವ್ಯಲೋಪ ಹಾಗೂ ಶಿಸ್ತು ಉಲ್ಲಂಘನೆ ಆರೋಪದಡಿ ಮೂವರು ಪಿಎಸ್ಐಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
*ಏನಿದು ಪ್ರಕರಣ?*
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ ಒಂದು ಹುದ್ದೆ ಇದೀಗ ಇಡೀ ಪೊಲೀಸ್ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದೆ. ಹಳಿಯಾಳ ಠಾಣೆಯ ಲಾ ಆ್ಯಂಡ್ ಆರ್ಡರ್ ಪಿಎಸ್ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್ಐ ಕೃಷ್ಣ ಅರಿಕೆರೆ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್ಐ ಆಗಿದ್ದ ಮುಂಡಗೋಡ ಪಿಎಸ್ಐ ವಿನೋದ್ ರೆಡ್ಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ಈ ಆಡಿಯೋವನ್ನು ಜೆಡಿಎಸ್ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಆಡಿಯೋದಲ್ಲಿ ಪೊಲೀಸ್ ಇಲಾಖೆಯೊಳಗಿನ ಪೋಸ್ಟಿಂಗ್ಗಾಗಿ ಹಣ ನೀಡುವ ಬಗ್ಗೆ ಮಾತನಾಡಲಾಗಿದೆ. ಅಷ್ಟೇ ಅಲ್ಲದೆ ಮೇಲಾಧಿಕಾರಿಗಳಿಗೆ ತಿಂಗಳಾ ಹಪ್ತಾ ವಸೂಲಿ ಮಾಡಿಕೊಡಬೇಕು ಎಂಬ ವಿಚಾರವೂ ಚರ್ಚೆಯಾಗಿದೆ.
*ಕಾನ್ಫರೆನ್ಸ್ ಕಾಲ್ನಲ್ಲಿ ಮಾತುಕತೆ:*
ಇನ್ನು ಈ ಪ್ರಕರಣದ ಹಿನ್ನೆಲೆಯೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಿಂದೆ ಹಳಿಯಾಳ ಪೊಲೀಸ್ ಠಾಣೆಯ PSI ಆಗಿದ್ದ ಬಸವರಾಜ್ ಮದನೂರು ಅವರನ್ನು ರೌಡಿಶೀಟರ್ ಮಚ್ ಮಂಜಾ ರಂಪಾಟದ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದಡಿ ಅಮಾನತು ಮಾಡಲಾಗಿತ್ತು. ಸುಮಾರು ಎರಡು ತಿಂಗಳ ಹಿಂದೆ ನಡೆದ ಈ ಅಮಾನತಿನಿಂದ ಹಳಿಯಾಳ ಠಾಣೆಯ PSI ಹುದ್ದೆ ತೆರವಾಗಿತ್ತು. ಈ ಸ್ಥಾನಕ್ಕೆ ಈ ಹಿಂದೆ ಹಳಿಯಾಳ ಠಾಣೆಯ ಕ್ರೈಂ ವಿಭಾಗದಲ್ಲಿ PSI ಆಗಿ ಕೆಲಸ ಮಾಡಿದ್ದ ವಿನೋದ್ ರೆಡ್ಡಿ ಮತ್ತೆ ಬರಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ ಅಂತಿಮವಾಗಿ ದಾಂಡೇಲಿ ಠಾಣೆಯ PSI ಆಗಿದ್ದ ಕಿರಣ್ ಪಾಟೀಲ್ ಅವರನ್ನು ಹಳಿಯಾಳ ಠಾಣೆಗೆ ನಿಯೋಜನೆ ಮಾಡಲಾಗಿತ್ತು.












