ಇತ್ತೀಚಿನ ಸುದ್ದಿ
ಸರ್ಕಾರಿ ಕೆಲಸ ಸಮಾಜದ ಋಣ ಸಂದಾಯ ಮಾಡಲು ಸಿಗುವ ವಿಶೇಷ ಅವಕಾಶ: ನೌಕರರ ಸಂಘದ ಅಧ್ಯಕ್ಷ ಸತೀಶ ಟಿ. ವಿ.
02/11/2025, 19:25
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnata@gmail.com
ಏಮ್ಸ್ ನಂತಹ ಪ್ರತಿಷ್ಟಿತ ಸಂಸ್ಥೆಗಳ ಹುದ್ದೆಗಳಿಗೆ ಆಯ್ಕೆಯಾಗುವುದು ಸಾಮಾನ್ಯ ಸಂಗತಿಯಲ್ಲ. ಪ್ರತಿಭೆಯ ಜೊತೆಗೆ ಗುರಿ ಸಾಧಿಸುವ ಛಲವಿರಲೇ ಬೇಕು. ಸರ್ಕಾರಿ ಕೆಲಸ ಸಮಾಜದ ಋಣ ಸಂದಾಯ ಮಾಡಲು ಸಿಗುವ ವಿಶೇಷ ಅವಕಾಶ. ಅಹಂ ತಲೆಗೇರಿಸಿಕೊಳ್ಳದೆ, ವಿನಮ್ರತೆಯಿಂದ ಜನರ ನೋವು ಸಂಕಷ್ಟಗಳಿಗೆ ಸ್ಪಂದಿಸುತ್ತಾ ಪರರಿಗೆ ಉಪದ್ರ ಕೊಡದೆ ಸಾಧ್ಯವಾಗುವ ಪರೋಪಕಾರಗಳಿಂದ ಸಮಾಜದ ಋಣ ಸಂದಾಯ ಮಾಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಸತೀಶ ಟಿ ವಿ ತಿಳಿಸಿದರು.
ಅವರು ಸರ್ಕಾರಿ ಆರೋಗ್ಯ ಅಧಿಕಾರಿಗಳಾಗಿದ್ದ ಕೈಲಾಶ್ ಏಮ್ಸ್ ಸಂಸ್ಥೆಗೆ ಹಾಗೂ ರಾಘವೇಂದ್ರ ಜರ್ಮನಿಯಲ್ಲಿ ಶುಶ್ರಷಾಣಾಧಿಕಾರಿ ಹುದ್ದೆಗೆ ಆಯ್ಕೆಯಾದ ಬಗ್ಗೆ ಆರೋಗ್ಯ ಇಲಾಖಾ ನೌಕರರ ಸಂಘದಿಂದ ಮೇಗರವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಶುಭ ಹಾರೈಸಿ ಮಾತನಾಡಿದರು.
ಬದುಕಿಗೆ ವೃತ್ತಿ ಆಸರೆಯಾದರೆ ಪ್ರವೃತ್ತಿ ಅರಿವಿಗೆ ಆಸರೆ, ಪ್ರಕೃತಿ ಸ್ಪೂರ್ತಿಗೆ ಆಸರೆ. ಪ್ರಕೃತಿ ಪರಿಸರಕ್ಕೆ ಸಣ್ಣ ತೊಂದರೆಯೂ ಆಗದಂತಹ ಸಹಜ ಒಡನಾಟಗಳು, ಪರೋಪಕಾರಗಳು ನಿಜಕ್ಕೂ ನೆಮ್ಮದಿ ಖುಷಿ ಹೆಚ್ಚಿಸುವ ಸಂಗತಿಗಳು. ಹಣದ ಹಿಂದೆ ಬಿದ್ದವರಿಗೆ ಇವು ಮರೀಚಿಕೆಗಳು. ಇಂತಹ ಅರಿವು ಇವರಿಗಿರುವುದರಿಂದ ಸಮಾಜಕ್ಕೆ ಇವರಿಂದ ಹೆಚ್ಚಿನ ಒಳಿತಿನ ನಿರೀಕ್ಷಣೆ ಸಾಧ್ಯ ಎಂದರು.
ಆರೋಗ್ಯ ಇಲಾಖಾ ನೌಕರರ ಸಂಘದ ಖಜಾಂಚಿ ರಾಘವೇಂದ್ರ ಸಿ ಡಿ ಮಾತನಾಡಿ, ಉತ್ತಮ ಆಸಕ್ತಿ ಅಭಿರುಚಿಗಳ ಜೊತೆಗೆ ಸಂಘಟನಾತ್ಮಕವಾಗಿಯೂ ನಮ್ಮೆಲ್ಲ ಚಟುವಟಿಕೆಗಳ ಜೊತೆಗಿದ್ದವರಿಗೆ ಉತ್ತಮ ಸ್ಥಾನಮಾನಗಳ ಅವಕಾಶ ದೊರೆತಿರುವುದು ಖುಷಿಯಾಗಿದೆ. ಅವರ ಭವಿಷ್ಯತ್ತಿಗೆ ಹಾರ್ದಿಕವಾಗಿ ಶುಭ ಹಾರೈಸುವುದಾಗಿ ತಿಳಿಸಿದರು.
ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ವೀಣಾ ಎಂ ಪಿ, ನಾಗರತ್ನ ಎ ಜಿ, ನಿವೃತ್ತ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮ, ಅಧಿಕಾರಿ ಶೈಲ, ಆಶಾ ಕಾರ್ಯಕರ್ತೆಯರಾದ ಸುಧಾ, ಪ್ರಭಾವತಿ ಮತ್ತಿತರರು ಮಾತನಾಡಿ ಶುಭ ಹಾರೈಸಿದರು.
ನಂತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೈಲಾಶ್, ಕಲ್ಯಾಣ ಕರ್ನಾಟಕ ಭಾಗದಿಂದ ಇಲ್ಲಿಗೆ ಬರುವಾಗ ನನ್ನಲ್ಲಿದ್ದ ಬದುಕಿನ ನೋಟಗಳೇ ಬೇರೆಯಾಗಿತ್ತು. ಆದರೆ ಇಲ್ಲಿನ ಆರೋಗ್ಯ ಇಲಾಖಾ ತಂಡದೊಡಗಿನ ಒಡನಾಟ ಅವರ ಸಮಾಜಮುಖಿ,ಪರಿಸರಾತ್ಮಕ ಕಾಳಜಿ ಬದ್ದತೆಗಳು,ಮಲೆನಾಡಿನ ಪರಿಸರ ನನ್ನ ಮೇಲೆ ಅಪಾರ ಪ್ರಭಾವ ಬೀರಿ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸಿತು. ಅದಕ್ಕಾಗಿ ನಾನು ಈ ತಂಡಕ್ಕೆ ಮತ್ತು ಇಲ್ಲಿನ ಪರಿಸರಕ್ಕೆ ಅಭಾರಿ ಎಂದರು.
ಈ ಕಾರ್ಯಕ್ರಮದಲ್ಲಿ ರಾಘವೇಂದ್ರ, ಉಪಾಧ್ಯಕ್ಷರಾದ ಅನುಸೂಯ, ತಿಲಕಮ್ಮ, ಪದಾಧಿಕಾರಿಗಳಾದ ಸನ್ನಿಧಿ, ನವೀನ್ ಕುಮಾರ್, ನಿರ್ಮಲ,
ಆರೋಗ್ಯ ಇಲಾಖಾ ಸಂಘದ ಸದಸ್ಯರು,ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.












