ಇತ್ತೀಚಿನ ಸುದ್ದಿ
ರಜತ ಮಹೋತ್ಸವ ಸಂಭ್ರಮದಲ್ಲಿರುವ ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸಂಸ್ಥೆಯ ಮಾನ್ಯತೆ
07/08/2025, 20:45

ಮಂಗಳೂರು(reporterkarnataka.com): ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ೨೦೩೪-೩೫ನೇ ಶೈಕ್ಷಣಿಕ ವರ್ಷದವರೆಗೆ ಸ್ವಾಯತ್ತ ಸಂಸ್ಥೆಯ ಮಾನ್ಯತೆ ನೀಡಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಹೇಳಿದರು.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಸ್ವಾಯತ್ತ ಸಂಸ್ಥೆಯ ಮಾನ್ಯತೆಯಿಂದ ಕಾಲೇಜು ತನ್ನದೇ ತಾಂತ್ರಿಕ ಪಠ್ಯ ವಸ್ತು, ಪರೀಕ್ಷೆ, ಫಲಿತಾಂಶ ನೀಡಲು ಸಾಧ್ಯವಾಗಲಿದೆ. ಕಾಲೇಜು ರಜತ ಮಹೋತ್ಸವ ಸಂಭ್ರಮದ ಸಿದ್ಧತೆಯಲ್ಲಿರುವಾಗಲೇ ದೊರೆತ ಈ ಸ್ಥಾನಮಾನ ಶೈಕ್ಷಣಿಕ ಅನ್ವೇಷಣೆ, ಸರಳೀಕೃತ ದಕ್ಷತೆಯ ಹೊಸ ಅಧ್ಯಾಯ ಆರಂಭಿಸಲಿದೆ. ಕಾಲೇಜಿನ ಸ್ವಾಯತ್ತ ಸ್ಥಾನಮಾನದಿಂದಾಗಿ ಇದೀಗ ವಿದ್ಯಾರ್ಥಿಗಳ ಪಠ್ಯದಲ್ಲಿ ಅನ್ವೇಷಣಾ ವಿಷಯಗಳು, ಕೈಗಾರಿಕಾ ಸ್ನೇಹಿ ಕೌಶಲಗಳು, ಉನ್ನತ ಶೈಕ್ಷಣಿಕ ಆಡಳಿತ ಸಾಧ್ಯವಾಗಲಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯ ಪರಂಪರೆ ಮತ್ತು ಮೂಲ ಆಶಯವನ್ನು ಇನ್ನಷ್ಟು ಬಲಗೊಳಿಸಿದಂತಾಗಿದೆ. ಕಾಲೇಜಿನ ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯ, ಆಡಳಿತ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಸಾಧನೆ ಪರಿಶೀಲಿಸಿ ಯುಜಿಸಿ ಈ ಮಾನ್ಯತೆ ಮಂಜೂರು ಮಾಡಿದೆ ಎಂದರು.
ಕೆನರಾ ಇಂಜಿನಿಯರಿಂಗ್ ಕಾಲೇಜು ಪ್ರಸ್ತುತ ಏಳು ಯುಜಿ ಇಂಜಿನಿಯರಿಂಗ್ ಕೋರ್ಸುಗಳನ್ನು ನೀಡುತ್ತಿದೆ. ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಂಡ್ ಮೆಶಿನ್ ಲರ್ನಿಂಗ್, ಇನಾರ್ಮೆಶನ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಆಂಡ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆಂಡ್ ಡಿಸೈನ್, ಕಂಪ್ಯೂಟರ್ ಸೈನ್ಸ್ ಆಂಡ್ ಬ್ಯುಸಿನೆಸ್ ಸಿಸ್ಟಮ್, ಮೆಕ್ಯಾನಿಕಲ್ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಕೋರ್ಸ್ಗಳಿವೆ ಎಂದು ಹೇಳಿದರು.
೨೬ ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಕಾಲೇಜು ಪ್ರಸ್ತುತ ೨,೧೭೧ ವಿದ್ಯಾರ್ಥಿಗಳನ್ನು ಹೊಂದಿದ್ದು ೧೨೬ ಬೋಧಕರ ಪೈಕಿ ೩೦ ಮಂದಿ ಪಿ.ಎಚ್. ಡಿ ಪದವೀಧರರಿದ್ದಾರೆ. ಕೆನರಾ ಇಂಜಿನಿಯರಿಂಗ್ ಕಾಲೇಜು ತನ್ನ ಪ್ಲೇಸ್ ಮೆಂಟ್ಗಾಗಿ ಖ್ಯಾತಿ ಹೊಂದಿದ್ದು ೨೦೨೪-೨೫ರ ಸಾಲಿನಲ್ಲಿ ೧೫೨ ಪ್ರತಿಷ್ಠಿತ ಕಂಪೆನಿಗಳ ಪ್ಲೇಸ್ ಮೆಂಟ್ ಡ್ರೈವ್ ಮೂಲಕ ಶೇ. ೭೩ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ೨೦೨೪-೨೫ರ ಸಾಲಿನಲ್ಲಿ ಶೇ. ೧೦೦ ಫಲಿತಾಂಶ ವನ್ನು ಪಡೆದಿರುವ ಕಾಲೇಜು ಚಿನ್ನದ ಪದಕ ಸಹಿತ ಹತ್ತು ರ್ಯಾಂಕ್ಗಳನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ. ಕಾಲೇಜು ಸುಸಜ್ಜಿತ ಲ್ಯಾಬ್ಗಳು, ೭೦೫ ಕಂಪ್ಯೂಟಿಂಗ್ ಸಿಸ್ಟಂ, ೬೦೦ ಎಂಬಿಪಿಎಸ್ ನೆಟ್ವರ್ಕ್ ಹೊಂದಿದೆ ಎಂದು ವಿವರಿಸಿದರು.
ಕಾಲೇಜು ನ್ಯಾಕ್ನಿಂದ ಎ ಗ್ರೇಡ್ ಮಾನ್ಯತೆ ಹೊಂದಿದೆ. ಕಂಪ್ಯೂಟರ್ ಸೈನ್ಸ್, ಇನಾರ್ಮೇಶನ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಕೋರ್ಸುಗಳು ೨೦೨೮ರ ಜೂನ್ ೩೦ರವರೆಗೆ ಎನ್.ಬಿ.ಎ ಮಾನ್ಯತೆ ಹೊಂದಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಉಪಾಧ್ಯಕ್ಷ ಕೆ. ಸುರೇಶ್ ಕಾಮತ್, ಕೋಶಾಽಕಾರಿ ಎಂ. ಜಗನ್ನಾಥ ಕಾಮತ್, ಕೆನರಾ ವಿಕಾಸ್ ಸಮೂಹ ಸಂಸ್ಥೆಗಳ ಸಂಯೋಜಕ ಬಸ್ತಿ ಪುರುಷೋತ್ತಮ ಶೆಣೈ, ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ನಾಗೇಶ್ ಎಚ್.ಆರ್., ಪ್ರಮುಖರಾದ ಡಿ. ವಿಕ್ರಮ್ ಪೈ, ರಾಘವೇಂದ್ರ ಕುಡ್ವ, ಎಂ. ನರೇಶ್ ಶೆಣೈ ಉಪಸ್ಥಿತರಿದ್ದರು.