8:29 PM Sunday25 - May 2025
ಬ್ರೇಕಿಂಗ್ ನ್ಯೂಸ್
Bangalore | ವಿಧಾನ ಸೌಧ ಇನ್ನು ಮುಂದೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ: ಸಚಿವ… ಮಂಗಳೂರು:ಧರೆಗುರುಳಿದ ನಾಲ್ಕು ಮರಗಳು, ಜಖಂಗೊಂಡ ವಾಹನಗಳು ; ಸ್ಮಾರ್ಟ್ ಸಿಟಿಯೊಳಗಿನ ಅವೈಜ್ಞಾನಿಕ ಕಾಮಗಾರಿಗೆ… Kolara | ಶ್ರೀನಿವಾಸಪುರ ಮಾವಿನ ಸೀಸನ್ ಪ್ರಾರಂಭ: ಆರ್ಥಿಕ ಚಟುವಟಿಕೆಗೆ ಚುರುಕು, ಸ್ವಚ್ಛತೆಗೆ… New Delhi | ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಕೇಂದ್ರ… ಕಾವೇರಿ ಆರತಿಗಾಗಿ ವಿಶೇಷ ಗೀತೆ ರಚನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಖ್ಯಾತ ಸಂಗೀತ… Bangalore | ಗಾರ್ಡನ್ ಸಿಟಿ ವಿಶ್ವವಿದ್ಯಾಲಯ: ಸಾಧಕರಿಗೆ 14ನೇ ಜಿಸಿಯು ಪುರಸ್ಕಾರ Mangaluru | ಮದುವೆ ಸಂಬಂಧದ ಬಗ್ಗೆ ಮನಸ್ತಾಪ ; ಚಿಕ್ಕಪ್ಪನನ್ನೆ ಕೊಂದ ಮುಸ್ತಾಫ Bangalore | ಯಜಮಾನಿಯರಿಂದ “ಗೃಹಲಕ್ಷ್ಮೀ ಸಂಘ” ರಚನೆಗೆ ಕಾರ್ಯಯೋಜನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಗಳೂರಿನಲ್ಲಾದ ಮಳೆ ಹಾನಿಗೆ 25,000 ರೂ. ನಿಂದ 1 ಲಕ್ಷ ರೂ. ವರೆಗೆ… Karnataka Police | ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಎಂ.ಎ. ಸಲೀಂ ನೇಮಕ

ಇತ್ತೀಚಿನ ಸುದ್ದಿ

Bangalore | ವಿಧಾನ ಸೌಧ ಇನ್ನು ಮುಂದೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ: ಸಚಿವ ಎಚ್.ಕೆ.ಪಾಟೀಲ್

25/05/2025, 19:19

ಬೆಂಗಳೂರು (reporterkarnataka.com): ವಿಧಾನ ಸೌಧವು ನಮ್ಮ ರಾಜ್ಯದ ಪ್ರಜಾಪ್ರಭುತ್ವದ ಜೀವಂತ ಕಥೆಯಾಗಿದ್ದು, ಇದನ್ನು ಸಾರ್ವಜನಿಕರಿಗೆ ತೆರೆದಿರುವುದು ಪಾರದರ್ಶಕತೆ, ಪರಂಪರೆ ಮತ್ತು ನಾಗರಿಕ ಹೆಮ್ಮೆಯ ಕಾರ್ಯಕ್ರಮವಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಕರ್ನಾಟಕ ವಿಧಾನ ಸಭೆಯ ಸಚಿವಾಲಯದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಮಾರ್ಗದರ್ಶಿ ನಡಿಗೆ ಪ್ರವಾಸ (Walking Guided Tour) ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿಧಾನ ಸೌಧವು ಇನ್ನು ಮುಂದೆ ಸಾರ್ವಜನಿಕರಿಗೂ ಮುಕ್ತವಾಗಲಿದೆ. ಕಲಾಕೌಶಲ್ಯದ ವಿರಳ ದಾಖಲೆಯಾಗಿ ಇತಿಹಾಸದಲ್ಲಿ ದಾಖಲಾಗಿರುವ ಆಡಳಿತಸೌಧವನ್ನು ದೂರದಿಂದಲೇ ನೋಡಿ ಫೊಟೋ ತೆಗೆದು ಸಂತಸ ಪಡುತ್ತಿದ್ದ ಜನರಿಗೆ ಈಗ ಇದನ್ನ ಹತ್ತಿರದಿಂದ ನೋಡುವ ಸದವಕಾಶ ಲಭ್ಯವಿದೆ ಎಂದರು.
ಇದು ಕೇವಲ ಕಟ್ಟಡವಲ್ಲ. ಜಗತ್ತಿನ ಅತ್ಯಂತ ಸುಂದರವಾದ ಕಟ್ಟಡ, ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಇದರ ದರ್ಶನ ಮಾಡಿಸುವ ದೃಷ್ಟಿಯಿಂದ ಅವಕಾಶವನ್ನು ಕಲ್ಪಸಿಕೊಡಲಾಗುತ್ತಿದೆ. ಇಲ್ಲಿಯವರಿಗೆ ಕೇವಲ ಆಡಳಿತ ಕಾರ್ಯಗಳಿಗಷ್ಟೇ ಸೀಮಿತವಾಗಿದ್ದ ವಿಧಾನಸೌಧವು ಇನ್ನು ಮುಂದೆ ಪ್ರವಾಸಿ, ಪ್ರೇಕ್ಷಣೀಯ ಸ್ಥಳದ ಸಾಲಿಗೆ ಸೇರ್ಪಡೆಯಾಗಲಿದೆ. ಜೂನ್ 1ರಿಂದ ಸೀಮಿತ ದಿನಗಳಲ್ಲಿ ವಿಧಾನಸೌಧವು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ವಿಧಾನಸೌಧ ಪ್ರವಾಸ ಕಾರ್ಯಕ್ರಮವು ಮನೋರಂಜನೆಯ ಪ್ರವಾಸವಾಗಬಾರದು, ಶೈಕ್ಷಣಿಕ ಅಧ್ಯಯನದ ಪ್ರವಾಸವಾಗಬೇಕು. ಪ್ರಜಾಪ್ರಭುತ್ವದ ಮಹತ್ವವನ್ನು ಸಾರ್ವಜನಿಕರು ತಿಳಿದುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ಮುಂದೆ ರಾಜಕೀಯ ಕ್ಷೇತ್ರಕ್ಕೂ ಬರಬೇಕು, ಉತ್ತಮ ರಾಜಕೀಯ ಪಟುಗಳಾಗಲು ಶಕ್ತಿಸೌಧ ಸ್ಪೂರ್ತಿ ನೀಡುವಂತಾಗಲಿದೆ ಎಂದು ಹೇಳಿದರು.
ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮಾತನಾಡಿ ವಿಧಾನಸೌಧದ ಕಟ್ಟಡದಲ್ಲಿ ಓಡಾಡಿದ್ರೆ ಅನೇಕ ಪಾರಂಪರಿಕ ಕಟ್ಟಡಗಳು ಕಣ್ಣಿಗೆ ಕಟ್ಟುವಂತೆ ಮಾಡಲಿದೆ. 75 ವರ್ಷಗಳ ಕಾಲ ವಿಧಾನಸೌಧದ ಒಳಗೆ ಯಾರನ್ನೂ ಬಿಟ್ಟಿರಲಿಲ್ಲ. ಸಾರ್ವಜನಿಕರು ಪಾಸ್ ಪಡೆದುಕೊಂಡು ಬರಬೇಕಿತ್ತು. ಆದರೆ ಈಗ ಕರ್ನಾಟಕ ಮಾತ್ರವಲ್ಲ ದೇಶದ ಜನತೆಗೆ ತೋರಿಸುವ ಕೆಲಸ ಮಾಡಿದ್ದೇವೆ ಎಂದರು.
ಮಾರ್ಗದರ್ಶಿ ಪ್ರವಾಸದ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಇತಿಹಾಸ ಅರ್ಥಮಾಡಿಸುವ ಕೆಲಸವಾಗಲಿದೆ. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದವರು ದೇಶದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ವಿಧಾನಸೌಧ ನಮ್ಮದು ಎಂಬ ಭಾವನೆಯನ್ನು ನಮ್ಮ ರಾಜ್ಯದ ಜನರಲ್ಲಿ ಮೂಡುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಸೌಧ, ಬೆಂಗಳೂರಿನ ಪ್ರಮುಖ ಐತಿಹಾಸಿಕ ಮತ್ತು ಆಡಳಿತದ ಸಂಕೇತವಾಗಿದ್ದು. ಮಾರ್ಗದರ್ಶಿ ಪ್ರವಾಸಿ ನಡಿಗೆಯು ಈ ಕಟ್ಟಡದ ಐತಿಹಾಸಿಕದ ಮಹತ್ವ, ಶಿಲ್ಪಕಲೆಯ ವೈಭವ ಮತ್ತು ಅದರ ಪ್ರಮುಖ ಭಾಗಗಳನ್ನು ಪರಿಚಯಿಸುತ್ತದೆ. ಸಾರ್ವಜನಿಕರು ಇದರ ವೀಕ್ಷಣೆ ಮಾಡಬಹುದಾಗಿದೆ. ನುರಿತ ಗೈಡ್‌ಗಳು ವಿಧಾನಸೌಧ ಆವರಣದ ಕುರಿತು ಸಮಗ್ರ ಪರಿಚಯ ಸಹಿತ ಮಾಹಿತಿಯನ್ನು ಪ್ರವಾಸಿಗರಿಗೆ ಒದಗಿಸಲಿದ್ದಾರೆ ಎಂದು ಹೇಳಿದರು.
ರಾಜಕೀಯ ಅಕಾಡೆಮಿ ತೆರೆಯಲು ಚಿಂತಿಸಲಾಗುತ್ತಿದೆ, ರಾಜಕೀಯ ಕಾಲೇಜು ಆರಂಭಿಸಿ ತರಬೇತಿ ನೀಡುವ ಬಗ್ಗೆ ಕಾನೂನಾತ್ಮಕವಾಗಿ ಚರ್ಚಿಸಿ ಅನುಷ್ಟಾನದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.
ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಬಸವರಾಜ ಎಸ್ ಹೊರಟ್ಟಿ ಮಾತನಾಡಿ ಸಾರ್ವಜನಿಕರಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ. ಶಕ್ತಿ ಸೌಧದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಕೆಲಸವಾಗಲಿದೆ ಎಂದು ಹೇಳಿದರು.

*ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸದ ವಿಶೇಷತೆಗಳು:*
ಪ್ರತೀ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ವಿಧಾನಸೌಧ ಪ್ರವಾಸ ನಡಿಗೆ ಇರಲಿದೆ. ಇದಕ್ಕಾಗಿ ಆನ್‌ಲೈನ್ ನಲ್ಲಿ ಮುಂಚಿತವಾಗಿ ಟಿಕೆಟ್ ಮಾಡಿಕೊಳ್ಳಬೇಕು. ಜೂನ್ 1 ರಿಂದ ಅಧಿಕೃತ ವಿಧಾನಸೌಧ ಪ್ರವಾಸ ಆರಂಭವಾಗಲಿದೆ. ಪ್ರಾರಂಭಿಕ ದರವು 16 ವರ್ಷ ಮೇಲ್ಪಟ್ಟವರಿಗೆ 50 ರೂಪಾಯಿ ದರ ನಿಗದಿಯಾಗಿದ್ದು. 15 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ ಉಚಿತ. ಟಿಕೆಟ್‌ಗಳನ್ನು https://kstdc.co/activities ವೆಬ್‌ಸೈಟ್ ನಲ್ಲಿ ಬುಕ್ ಮಾಡಿಕೊಳ್ಳಬೇಕು. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಹಾಗೂ ಎಲ್ಲಾ ಭಾನುವಾರಗಳು ವೀಕ್ಷಿಸಬಹುದು. ಪ್ರವಾಸವು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಇರಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು