ಇತ್ತೀಚಿನ ಸುದ್ದಿ
ನಂಜನಗೂಡು ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯದ ಹೆಸರಿನಲ್ಲಿ ಭಾರೀ ವಂಚನೆ: ಸಾರ್ವಜನಿಕರ ಆರೋಪ
21/11/2024, 18:47

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರ ಗ್ರಾಮದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಕೆಲವು ಕಿಡಿಗೇಡಿಗಳು ದೇವರ ಹೆಸರಿನಲ್ಲಿ ಭಾರಿ ವಂಚನೆ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗ್ರಾಮದ ಮುಖಂಡ ಸಿಎನ್ ಚಂದ್ರು ಗಂಭೀರ ಆರೋಪ ಮಾಡಿದ್ದಾರೆ.
ನಂಜನಗೂಡು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯವು ನೂರಾರು ವರ್ಷಗಳ ಐತಿಹಾಸಿಕ ಪ್ರಸಿದ್ಧಿ ಹೊಂದಿದ್ದರೂ ನಿರ್ವಹಣೆ ಇಲ್ಲದೆ ಸಂಪೂರ್ಣ ಶಿಥಿಲ ಗೊಂಡಿತ್ತು. ಇತ್ತೀಚಿನ ಕೆಲವು ವರ್ಷಗಳ ಹಿಂದೆ ಗ್ರಾಮಸ್ಥರು ಮುಖಂಡರು ಸೇರಿ ಸುತ್ತಮುತ್ತಲಿನ ಕಾರ್ಖಾನೆಗಳು ಹಾಗೂ ಸರ್ಕಾರ ಮತ್ತು ರಾಜಕಾರಣಿಗಳ ಸಹಕಾರದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಅಲ್ಲದೇ ಕಾರ್ತಿಕ ಮಾಸ ಸೇರಿದಂತೆ ವಿಶೇಷ ದಿನಗಳು ಹಾಗೂ ದಿನದ ಪೂಜೆ, ಅನ್ನ ಸಂತರ್ಪಣೆ, ಉತ್ಸವಾದಿಗಳು ಸೇರಿದಂತೆ ಎಲ್ಲಾ ದಾರ್ಮಿಕ
ಕಾರ್ಯಕ್ರಮಗಳನ್ನು ಗ್ರಾಮದ ಮುಖಂಡರು ದಾನಿಗಳಿಂದ ಕಾರ್ಖಾನೆಗಳಿಂದ ಚಂದ ವಸೂಲಿ ಮಾಡಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು.
ಇತ್ತೀಚೆಗೆ ಜೀರ್ಣೋ ದ್ದಾರಗೊಂಡ ದೇವಾಲಯಕ್ಕೆ ಉತ್ತಮ ಆದಾಯ ಬರುವಂತಾದ ಕಾರಣ ಮುಜರಾಯಿ ಇಲಾಖೆಗೆ ಸೇರಿದ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ದತ್ತು ನೀಡಿ ದೇವಾಲಯದ ಆಡಳಿತ ಮಂಡಳಿ ಸುಪರ್ದಿಗೆ ನೀಡಲಾಗಿದೆ. ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಸುಪರ್ದಿಗೆ ಒಳಪಟ್ಟ ಮೇಲೆ ದೇವಾಲಯದ ಎಲ್ಲಾ ಆದಾಯ ಮತ್ತು ಖರ್ಚು ಸೇರಿದಂತೆ ಧಾರ್ಮಿಕ ಕಾರ್ಯಗಳನ್ನು ದೇವಾಲಯದ ವತಿಯಿಂದಲೇ ನಿರ್ವಹಿಸಲಾಗುತ್ತಿದೆ.
ಆದರೆ ಗ್ರಾಮದ ಕೆಲವು ಕಿಡಿ ಗೇಡಿಣಗಳು ಈಗಲೂ ಹಿಂದಿನ ಚಂದ ವಸೂಲಿಯನ್ನೇ ಕರಗತ ಮಾಡಿಕೊಂಡು ನಕಲಿ ರಸೀದಿ ಬಳಸಿಕೊಂಡು ಲಕ್ಷಾಂತರ ರೂಪಾಯಿ ಚಂದ ವಸೂಲಿ ಮಾಡಿ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಹಣ ವಸೂಲಿಗೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಜಿಲ್ಲಾಧಿಕಾರಿಗಳು ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದೇನೆ ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿ ಕಾರಿದರು.
ಈಗಲೂ ಕಾರ್ತಿಕ ಮಾಸದ ಹೆಸರಿನಲ್ಲಿ ಅಕ್ರಮವಾಗಿ ಹಣ ವಸೂಲಿ ದಂಧೆ ಮಾಡುತ್ತಿದ್ದಾರೆ. ಹಾಗಾಗಿ ಯಾರೇ ದಾನಿಗಳು ಅವರಿಗೆ ಚಂದ ನೀಡದೆ ತಾವೇ ಖುದ್ದು ದೇವಾಲಯಕ್ಕೆ ಬಂದು ತಾವು ನೀಡುವ ಹಣ ಮತ್ತು ದವಸ ಧಾನ್ಯಗಳಿಗೆ ರಶೀದಿ ಪಡೆದುಕೊಳ್ಳುವ ಮೂಲಕ ಅಕ್ರಮ ಹಣ ವಸೂಲಿಗೆ ಖಡಿವಾಣ ಹಾಕಬೇಕು ಎಂದು ಮನವಿ ಮಾಡಿಕೊಂಡರು.
ಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಸುನಿಲ್ ಮತ್ತು ಮಂಜುನಾಥ್ ಉಪಸ್ತಿತರಿದ್ದರು.