ಇತ್ತೀಚಿನ ಸುದ್ದಿ
*10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ*
04/08/2026, 15:06
ಮೈಸೂರು:(reporterkatnataka.com):ಅದೆಷ್ಟೋ ಸರ್ಕಾರಿ ಅಧಿಕಾರಿಗಳು ಜನಸಾಮಾನ್ಯರಿಂದ ಲಂಚ ಪಡೆದು ಸಿಕ್ಕಿಬೀಳ್ತಾರೆ. ವಿವಿಧ ಇಲಾಖೆಗಳ ಅದೆಷ್ಟೋ ಅಧಿಕಾರಿಗಳು ಲಂಚ ಪಡೆಯುವಾಗಲೇ ಲೋಕಾಯುಕ್ತ ಅವರನ್ನ ರೆಡ್ಹ್ಯಾಂಡ್ ಆಗಿ ಹಿಡಿದಿದೆ. ಇದೀಗ ಆ ಸಾಲಿಗೆ ಮೈಸೂರು ಜಿಲ್ಲೆ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ ಸೇರಿದ್ದಾರೆ.
ಕಾವ್ಯಾರಾಣಿ ಮತ್ತು ಅವರ ಆಪ್ತ ಸಹಾಯಕ ಶಿವಕುಮಾರ್ ಇಬ್ಬರೂ ಲಂಚ ಸ್ವೀಕರಿಸುತ್ತಿದ್ದರು. ಸರಿಯಾಗಿ ಅದೇ ಸಮಯಕ್ಕೆ ಅಲ್ಲಿಗೆ ಬಂದ ಲೋಕಾಯುಕ್ತ ಅಧಿಕಾರಿಗಳು, ಅವರನ್ನ ಹಿಡಿದಿದ್ದಾರೆ. ಕಾವ್ಯಾರಾಣಿ ಅವರು ಯಾರ ಬಳಿ ಹಣ ಕೇಳಿದ್ದರೋ, ಅವರು ನೀಡಿದ ದೂರಿನ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
*ಏನಿದು ಪ್ರಕರಣ?:*
ಎಚ್.ಡಿ.ಕೋಟೆ ತಾಲೂಕಿನ ಸರ್ವೇ ನಂಬರ್ 17, 26ರ 4 ಎಕರೆ 20 ಗಂಟೆ ಭೂಮಿಗೆ ಸಂಬಂಧಪಟ್ಟ ಪ್ರಕರಣದ ವಿಚಾರಣೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಇದು ಬೆಂಗಳೂರು ಮೂಲದ ಡಾ. ರೂಪಾ ಅವರಿಗೆ ಸಂಬಂಧಪಟ್ಟಿದ್ದಾಗಿತ್ತು. ಈ ಪ್ರಕರಣವನ್ನ ಇತ್ಯರ್ಥ ಪಡಿಸಿಕೊಡಬೇಕು ಎಂದರೆ ನೀವು ನನಗೆ 10.50 ಲಕ್ಷ ರೂಪಾಯಿ ಕೊಡಬೇಕು ಎಂದು ರೂಪಾ ಬಳಿ ಕಾವ್ಯಾರಾಣಿ ಅವರು ಬೇಡಿಕೆ ಇಟ್ಟಿದ್ದರು. ಅದರ ಮೊದಲ ಕಂತಾದ 5 ಲಕ್ಷ ರೂಪಾಯಿಯನ್ನ ಈಗಾಗಲೇ ತೆಗೆದುಕೊಂಡಿದ್ದರು. ಹಾಗೇ, 2 ಕಂತು 5.50 ಲಕ್ಷ ರೂಪಾಯಿಯನ್ನ ರೂಪಾ ಅವರಿಂದ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನು ಈ ದಾಳಿ ವೇಳೆ ಲೋಕಾಯುಕ್ತ ತನಿಖಾಧಿಕಾರಿ ರವಿಕುಮಾರ್, ಮಡಿಕೇರಿ ಡಿವೈಎಸ್ಪಿ ದಿನಕರ ಶೆಟ್ಟಿ, ಇನ್ಸ್ಪೆಕ್ಟರ್ ವೀಣಾ ನಾಯಕ್ ಮತ್ತಿತರರು ಪಾಲ್ಗೊಂಡಿದ್ದರು.












