ಇತ್ತೀಚಿನ ಸುದ್ದಿ
ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ ಶಾಂತೇಗೌಡ ಔಟ್
03/08/2026, 20:05
ಬೆಂಗಳೂರು(reporterkarnataka.com): ಕಾಂಗ್ರೆಸ್ ಸರ್ಕಾರದ ಮಟ್ಟದಲ್ಲಿ ಹಾಗೂ ಪಕ್ಷದ ಹೈಕಮಾಂಡ್ ಹಂತದಲ್ಲಿ ಕೊನೆ ಕ್ಷಣದವರೆಗೂ ಬಾರೀ ಕಸರತ್ತು ನಡೆದಿದ್ದು, ಕೇವಲ ಕೆಲವೇ ಗಂಟೆಗಳಲ್ಲಿ ಮೂರು ಬಾರಿ ಸಚಿವರ ಮತ್ತು ಸ್ಪೀಕರ್ ಅಭ್ಯರ್ಥಿಗಳ ಪಟ್ಟಿ ಬದಲಾಗಿದೆ. ಅವರ ಬದಲಿಗೆ ವಿಧಾನ ಪರಿಷತ್ ಸದಸ್ಯ ಭೋಸರಾಜು ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನುವ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆರಂಭದಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಕಾಣಿಸಿಕೊಂಡಿದ್ದರಿಂದ ಅವರ ಬೆಂಬಲಿಗರಲ್ಲಿ ಸಂಭ್ರಮ ಮನೆಮಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಪಟ್ಟಿಯಲ್ಲಿ ಬದಲಾವಣೆ ನಡೆದಿದ್ದು, ಭೋಸರಾಜು ಅವರಿಗೆ ಅವಕಾಶ ದೊರೆತಿದೆ. ಈ ಬೆಳವಣಿಗೆಯಿಂದ ಗಾಯತ್ರಿ ಶಾಂತೇಗೌಡ ಅವರ ಬೆಂಬಲಿಗರು ಗೊಂದಲ ಮತ್ತು ನಿರಾಸೆಗೆ ಒಳಗಾಗಿದ್ದಾರೆ. ಮೂಲಗಳ ಪ್ರಕಾರ, ಕೊನೆಯ ಕ್ಷಣದಲ್ಲಿ ನಡೆದ ರಾಜಕೀಯ ಸಮೀಕರಣಗಳು ಹಾಗೂ ಪಕ್ಷದ ಹೈಕಮಾಂಡ್ ಮಟ್ಟದ ಚರ್ಚೆಗಳ ಬಳಿಕ ಸಚಿವರ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಆದರೆ ಈ ಕುರಿತು ಕಾಂಗ್ರೆಸ್ ನಾಯಕತ್ವದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಿದ್ದಿಲ್ಲ. ಸಂಪುಟ ವಿಸ್ತರಣೆಯ ನಂತರ ಈಗಾಗಲೇ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹಲವು ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವರು ಬಹಿರಂಗವಾಗಿಯೇ ತಮ್ಮ ಬೇಸರ ಹೊರಹಾಕಿದ್ದಾರೆ. ಈ ಬೆಳವಣಿಗೆಗಳ ನಡುವೆ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೈಬಿಟ್ಟು ಭೋಸರಾಜು ಅವರಿಗೆ ಅವಕಾಶ ನೀಡಿರುವುದು ಪಕ್ಷದೊಳಗೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್ ನಾಯಕತ್ವ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಹಾಗೂ ಗಾಯತ್ರಿ ಶಾಂತೇಗೌಡ ಅವರನ್ನು ಸಮಾಧಾನಪಡಿಸಲು ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇನ್ನೂ ಎಐಸಿಸಿ ಬಿಡುಗಡೆ ಮಾಡಿದ ಮೊದಲ ಸಚಿವರ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಪ್ರಕಟವಾಗಿತ್ತು. ಆದರೆ ನಂತರದ ಕೈ ಪಾಳಯದಲ್ಲಿ ಆದ ಬೆಳವಣಿಗೆಯಲ್ಲಿ, ಮಂಕಾಳು ವೈದ್ಯ ಅವರ ಸ್ಥಾನದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಅವಕಾಶ ಕಲ್ಪಿಸಿ ಎರಡನೇ ಪಟ್ಟಿಯನ್ನು ಹೊರಡಿಸಲಾಯಿತು.












