ಇತ್ತೀಚಿನ ಸುದ್ದಿ
ಕಡೂರು | ತೆಂಗಿನಕಾಯಿ ಕದ್ದ ಆರೋಪ: ಮಹಿಳೆಯ ಬಟ್ಟೆ ಹರಿದು ಮೂವರು ಪುರುಷರಿಂದ ಹಲ್ಲೆ
23/07/2026, 19:00
ಚಿಕ್ಕಮಗಳೂರು(reporterkarnataka.com): ತೋಟದಲ್ಲಿ ತೆಂಗಿನಕಾಯಿ ಕದ್ದಳು ಎಂದು ಆರೋಪ ಮಾಡಿದ ಜಮೀನಿನ ಮಾಲೀಕ ಮಹಿಳೆಗೆ ಅಮಾನುಷವಾಗಿ ಥಳಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಾತೇನಗಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂವರು ಪುರುಷರು ಸೇರಿ ಮಹಿಳೆಯ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಕಡೂರು ತಾಲೂಕಿನ ಪಾತೇನಗಳ್ಳಿ ಗ್ರಾಮದಲ್ಲಿ ಶಿವಮ್ಮ (32) ಎಂಬ ಮಹಿಳೆ ಮೇಲೆ ತೆಂಗಿನಕಾಯಿ ಕದ್ದ ಆರೋಪ ಕೇಳಿ ಬಂದಿದೆ. ಮಾಲೀಕ ನವೀನ್ ತೋಟದ ಮಾರ್ಗವಾಗಿಯೇ ಮಹಿಳೆ ಬೇರೆ ಸ್ಥಳಕ್ಕೆ ಹೋಗುತ್ತಿದ್ದಳು. ಈ ವೇಳೆ ತೆಂಗಿನಕಾಯಿ ಹಿಡಿದುಕೊಂಡಿದ್ದಳಂತೆ. ಇದು ನಮ್ಮ ತೋಟದ ತೆಂಗಿನ ಕಾಯಿ ಎಂದು ಜಗಳ ತೆಗೆದ ಮಾಲೀಕ ನವೀನ್ ಏಕಾಏಕಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗ್ತಿದೆ.
*ಮಹಿಳೆಯ ಬಟ್ಟೆ ಹರಿದು ಹಲ್ಲೆ:*
ನವೀನ್, ಕಲ್ಲೇಶ್ ಹಾಗೂ ದೀಪು ಎಂಬುವರು ಸೇರಿಕೊಂಡು ಮಹಿಳೆಯನ್ನ ಥಳಿಸಿದ್ದಾರೆ ಎಂಬ ಆರೋಪವಿದೆ. ಒಂದು ತೆಂಗಿನ ಕಾಯಿ ವಿಚಾರಕ್ಕೆ ಮಹಿಳೆಯ ಬಟ್ಟೆ ಹರಿದು, ನೆಲಕ್ಕೆ ಹಾಕಿ ತುಳಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
*ಮಹಿಳೆ ಆಸ್ಪತ್ರೆಗೆ ದಾಖಲು:*
ತೆಂಗಿನ ಕಾಯಿ ಕದ್ದ ಆರೋಪದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಶಿವಮ್ಮ ಆರೋಪ ಮಾಡಿದ್ದಾರೆ. ಗಾಯಾಳು ಶಿವಮ್ಮ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾತೇನಹಳ್ಳಿ ಗ್ರಾಮದ ಪಾಳುಬಿದ್ದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಶಿವಮ್ಮ ಮೇಲೆ ತೋಟದಲ್ಲಿ ತೆಂಗಿನಕಾಯಿ ಕದ್ದಿರುವ ಆರೋಪ ಮಾಡಿ ಮೂವರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.












