ಇತ್ತೀಚಿನ ಸುದ್ದಿ
ಬಿಜೆಪಿ ಶಾಸಕರಿಗೆ ಧರ್ಮಸ್ಥಳದಲ್ಲಿ ‘ಅಗ್ನಿ ಪರೀಕ್ಷೆ’?: ಅಡ್ಡ ಮತದಾನ ಮಾಡಿದವರ ಕಂಡು ಹಿಡಿಯಲು ಮಂಜುನಾಥನಿಗೆ ಮೊರೆ?
21/06/2026, 13:22
ಬೆಂಗಳೂರು(reporterkarnataka.com):ವಿಧಾನ ಪರಿಷತ್ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಕ್ರಾಸ್ ವೋಟಿಂಗ್ ಬಿರುಗಾಳಿ ಎಬ್ಬಿಸಿದೆ. ಅಡ್ಡ ಮತದಾನವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಇದೀಗ ಅಡ್ಡ ಮತದಾನದ ಮಾಡಿದವರನ್ನ ಕಂಡು ಹಿಡಿಯಲು ಧರ್ಮಸ್ಥಳ ಮಂಜುನಾಥನ ಮೊರೆ ಹೋಗ್ತಿದ್ದಾರೆ.ಧರ್ಮಸ್ಥಳದಲ್ಲೇ ಶಾಸಕಾಂಗ ಸಭೆ ಆಯೋಜಿಸಿದ್ದು, ತಮ್ಮ ಪಕ್ಷದ ಶಾಸಕರಿಂದ ಆಣೆ ಪ್ರಮಾಣ ಮಾಡಿಸಲು ಬಿಜೆಪಿ ನಾಯಕರು ಮುಂದಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
*ಕ್ರಾಸ್ ವೋಟಿಂಗ್ ಮಾಡಿದ್ಯಾರು?:*
ಶಾಸಕರ ಅಡ್ಡ ಮತದಾನ ರಾಜ್ಯ ಬಿಜೆಪಿ ನಾಯಕರಿಗೆ ದೊಡ್ಡ ತಲೆಬಿಸಿ ತಂದಿದೆ. ಕ್ರಾಸ್ ವೋಟಿಂಗ್ ಮಾಡುವವರನ್ನ ಪತ್ತೆ ಹಚ್ಚಲು ಸಮಿತಿ ರಚಿಸಲಾಗಿದೆ. ಇದರ ನಡುವೆಯೇ ಪಕ್ಷದಲ್ಲೇ ಇದ್ದುಕೊಂಡು ಕ್ರಾಸ್ ವೋಟಿಂಗ್ ಮಾಡಿದವರು ಯಾರು ಅನ್ನೋದನ್ನ ಕಂಡು ಹಿಡಿಯಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಕಸರತ್ತು ನಡೆಸಿದ್ದಾರೆ.
*ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ:*
ಅಡ್ಡ ಮತದಾನದ ಬಗ್ಗೆ ಹೈಕಮಾಂಡ್ ವರದಿ ಕೇಳಿದ್ದು, ರಾಜ್ಯ ನಾಯಕರು ಟೆನ್ಷನ್ ಆಗಿದ್ದಾರೆ. ಹೀಗಾಗಿ ಗೆರೆ ದಾಟಿದವರು ಯಾರು ಅಂತ ಕಂಡು ಹಿಡಿಯಲು ಬಿಜೆಪಿ ನಾಯಕರು ಧರ್ಮಸ್ಥಳ ಮಂಜುನಾಥನ ಮೊರೆ ಹೋಗ್ತಿದ್ದಾರೆ. ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿ ಮಾಡಿದ್ದಾರೆ.
*ಅಡ್ಡ ಮತದಾನ ಮಾಡಿಲ್ಲ ಅಂತ ಆಣೆ ಮಾಡಿ*
ಎಲ್ಲಾ ಶಾಸಕರನ್ನ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಲು ಬಿಜೆಪಿ ನಾಯಕರು ಮುಂದಾಗಿದ್ದು, ಅಲ್ಲೇ ಅಡ್ಡ ಮತದಾನ ಮಾಡಿಲ್ಲ ಅಂತ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
*ಕ್ರಾಸ್ ವೋಟಿಂಗ್ ಬಗ್ಗೆ ಒಪ್ಪಿಕೊಳ್ತಿಲ್ಲ:*
ಅಡ್ಡ ಮತದಾನ ಮಾಡಿರೋ ಬಗ್ಗೆ ಬಿಜೆಪಿ ನಾಯಕರು ಕೆಲ ಶಾಸಕರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಆ ಶಾಸಕರು ಮಾತ್ರ ನಾವು ಅಡ್ಡಮತದಾನ ಮಾಡಿಲ್ಲ ಎಂದು ವಾದ ಮಾಡ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಮಂಜುನಾಥಸ್ವಾಮಿ ಮೇಲೆ ಆಣೆ ಮಾಡಿಸಿ ಕ್ರಾಸ್ ವೋಟಿಂಗ್ ಮಾಡಿದ ಶಾಸಕರ ಪತ್ತೆ ಹಚ್ಚಲು ಬಿಜೆಪಿ ಮುಂದಾಗಿದೆ.













