ಇತ್ತೀಚಿನ ಸುದ್ದಿ
Mangaluru | ಕುಕ್ಕರ್ ಬಾಂಬ್ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ ಪುರುಷೋತ್ತಮ್ ಪೂಜಾರಿ ಅಭಿಪ್ರಾಯ
28/04/2026, 21:21
ಮಂಗಳೂರು(reporterkarnataka.com): ನಗರದ ನಾಗುರಿಯಲ್ಲಿ 2022ರ ನ.19ರಂದು ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮೊಹಮ್ಮದ್ ಶಾರಿಕ್ಗೆ ಜೀವಾವಧಿ ಶಿಕ್ಷೆ ಆಗಬೇಕಿತ್ತು ಎಂದು ಈ ಸ್ಫೋಟದ ಸಂತ್ರಸ್ತ ಆಟೊ ಚಾಲಕ ಪುರುಷೋತ್ತಮ ಪೂಜಾರಿ ಅಭಿಪ್ರಾಯಪಟ್ಟರು.

ಅಪರಾಧಿ ಶಾರಿಕ್ಗೆ ಎನ್ಐಎ ವಿಶೇಷ ನ್ಯಾಯಾಲಯವು 10 ವರ್ಷ ಕಠಿಣ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಈಗಾಗಲೇ ಮೂರೂವರೆ ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ಇನ್ನೂ ಆರೂವರೆ ವರ್ಷ ಜೈಲಿನಲ್ಲಿರುವುದು ಆತನಿಗೆ ಅದು ದೊಡ್ಡ ಶಿಕ್ಷೆಯಾಗದು,ಆತ ಜೈಲಿನಿಂದ ಹೊರಗೆ ಬಂದ ಬಳಿಕ ಇಂತಹದ್ದೇ ಕೃತ್ಯ ನಡೆಸುವುದಿಲ್ಲ ಎನ್ನಲಾಗದು. ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು ಎಂದರು.
ಪುರುಷೋತ್ತಮ ಪೂಜಾರಿ
‘ಯಾವ ತಪ್ಪೂ ಮಾಡದ ನಾನು, 70 ದಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು, ಬಳಿಕ ಒಂದು ತಿಂಗಳು ಆಸ್ಪತ್ರೆಯಲ್ಲಿ ವಿಶ್ರಾಂತಿಯಲ್ಲಿದ್ದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ಮೊದಲಿನ ಸ್ಥಿತಿಗೆ ಮರಳಿಲ್ಲ. ಜೀವಮಾನ ಇಡೀ ನರಳಬೇಕಾಗಿದೆ. ನನಗೆ ಮೊದಲಿನ ಹಾಗೆ ಆಟೊ ರಿಕ್ಷಾ ಓಡಿಸಲು ಆಗುತ್ತಿಲ್ಲ. ಎರಡು ಬೆರಳು ಸ್ವಲ್ಪ ಸರಿಯಾಗಿವೆ. ಇನ್ನುಳಿದ ಬೆರಳುಗಳು ಸ್ವಾಧೀನ ಕಳೆದುಕೊಂಡಿವೆ. ಅವು ಮೊದಲಿನ ಸ್ಥಿತಿಗೆ ತರಲು ₹ 50 ಸಾವಿರ ವೆಚ್ಚವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ನನ್ನ ಬಳಿ ಅಷ್ಟೊಂದು ಹಣ ಇಲ್ಲ’ ಎಂದು ಅಳಲು ತೋಡಿಕೊಂಡರು.
*ಕುಕ್ಕರ್ ಬಾಂಬ್ ಸ್ಫೋಟ:* ಉಗ್ರ ಶಾರೀಕ್ಗೆ 10 ವರ್ಷ ಜೈಲು, ದಂಡ
‘ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ₹9.50 ಲಕ್ಷ ವೆಚ್ಚವಾಗಿದ್ದನ್ನು ನನ್ನ ಮಗಳ ಇಎಸ್ಐ ನಿಂದ ಭರಿಸಲಾಗಿದೆ. ಅದು ಬಿಟ್ಟರೆ ಸರ್ಕಾರದಿಂದ ನನಗೆ ಯಾವ ಪರಿಹಾರವೂ ಸಿಕ್ಕಿಲ್ಲ. ಶಾಸಕ ವೇದವ್ಯಾಸ ಕಾಮತ್ ಹೊಸ ಆಟೊರಿಕ್ಷಾ ಹಾಗೂ ₹5 ಲಕ್ಷ ನೀಡಿದ್ದರು. ಗುರುಬೆಳದಿಂಗಳು ಟ್ರಸ್ಟ್ನ ಪದ್ಮರಾಜ ಪೂಜಾರಿ ಅವರು ಸುಮಾರು ₹6.5 ಲಕ್ಷ ವೆಚ್ಚದಲ್ಲಿ ನನ್ನ ಮನೆ ದುರಸ್ತಿಪಡಿಸಿಕೊಟ್ಟರು. ನಾನು ಈಗಲೂ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಆಟೋ ಓಡಿಸುತ್ತೇನೆ. ಜಾಸ್ತಿ ಹೊತ್ತು ಓಡಿಸಿದರೆ ಕೈ ನೋವು ಬರುತ್ತದೆ. ಔಷಧಕ್ಕೆ ಪ್ರತಿ 15 ದಿನಗಳಿಗೊಮ್ಮೆ ₹1 ಸಾವಿರ ವೆಚ್ಚವಾಗುತ್ತದೆ ಎಂದು ಅಳಲು ತೋಡಿಕೊಂಡರು.













