ಇತ್ತೀಚಿನ ಸುದ್ದಿ
ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ ಆಕ್ರೋಶ
24/03/2026, 17:56
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡಲ್ಲಿ ಮತ್ತೆ ತಲೆದೋರಿದ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ ದತ್ತಪೀಠದ ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಸರ್ಕಾರದ ವಿರುದ್ಧ ಮುಸ್ಲಿಂ ಸಮುದಾಯದ ಆಕ್ರೋಶ ವ್ಯಕ್ತವಾಗಿದೆ.
ಜಿಯಾರತ್ ಹಾಗೂ ಫಾತೇಹಾ ಸಲ್ಲಿಸಲು ಅವಕಾಶ ನೀಡದ ಜಿಲ್ಲಾಡಳಿತದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ದರ್ಗಾ ಮತ್ತು ಖಬರಸ್ಥಾನ್ನಲ್ಲಿ ಜಿಯಾರತ್ ಮಾಡಲು ಅವಕಾಶ ನಿರಾಕರಿಸಿರುವುದರಿಂದ ಮುಸ್ಲಿಂ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದೆ. ಜಿಯಾರತ್ ಅಂದರೆ ಸಮಾಧಿಗಳಿಗೆ ಪ್ರಾರ್ಥನೆ ಸಲ್ಲಿಸುವುದು, ಫಾತೇಹಾ ಅಂದರೆ ಸಮಾಧಿ ಬಳಿ ಸಿಹಿ ಇಟ್ಟು ಪೂಜೆ ಮಾಡುವ ಪದ್ಧತಿ. ಮುಂಚಿತವಾಗಿ ಮಾಹಿತಿ ನೀಡಿದ್ದರೂ ಜಿಲ್ಲಾಡಳಿತ ಅವಕಾಶ ನೀಡಿಲ್ಲ ಎಂದು ಆರೋಪಿಸಲಾಗಿದೆ. ಈ ಆಚರಣೆಗಳು ಹೊಸದು ಎಂದು ಹೇಳಿ ಅನುಮತಿ ನಿರಾಕರಿಸಲಾಗಿದೆ ಎನ್ನಲಾಗಿದೆ. ಈ ಹಿಂದೆ ತೆರೆಯುತ್ತಿದ್ದ ಖಬರಸ್ಥಾನ್ ಗೇಟ್ ಈ ಬಾರಿ ಸಂಪೂರ್ಣ ಬಂದ್ ಮಾಡಲಾಗಿದೆ.
ದೂರದಿಂದಲೇ ಖಬರಸ್ಥಾನ್ ನೋಡಿ ಹಿಂತಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ವಿರೋಧವಾಗಿ ದತ್ತಪೀಠದಲ್ಲಿ ಸುಮಾರು 3 ಗಂಟೆಗಳ ಕಾಲ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಯಿತು.


ಮುಂದಿನ ದಿನಗಳಲ್ಲಿ ಯಾವುದೇ ಅಡಚಣೆ ಇಲ್ಲದೆ ಜಿಯಾರತ್ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂಬಂಧ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ, ಸಿಎಂ ಹಾಗೂ ಜಮೀರ್ ಅಹಮದ್ ಖಾನ್ ಅವರಿಗೆ ದೂರು ನೀಡಲಾಗಿದೆ.
ಚಿಕ್ಕಮಗಳೂರು ತಾಲೂಕಿನ ವಿವಾದಿತ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಈ ಘಟನೆ ನಡೆದಿದೆ.












