ಇತ್ತೀಚಿನ ಸುದ್ದಿ
ಲೇಡಿಗೋಶನ್ ಆಸ್ಪತ್ರೆಯ ಸೌಲಭ್ಯ: ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧುರಿ ಫಿದಾ
07/03/2026, 21:25
ಮಂಗಳೂರು(reporterkarnataka.com): ನಗರದ ಲೇಡಿಗೋಷನ್ ತಾಯಿ-ಮಕ್ಕಳ ಆಸ್ಪತ್ರೆಯ ಸೌಲಭ್ಯಗಳು ಮತ್ತು ವ್ಯವಸ್ಥೆಗೆ ಶಹಬ್ಬಾಸ್ ಹೇಳಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಇಂಥ ಮಾದರಿಯನ್ನು ಬೇರೆ ಕಡೆ ಅನುಸರಿಸಲು ಆರೋಗ್ಯ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ನಾಗಲಕ್ಷ್ಮಿ ಪ್ರತಿಯೊಂದು ಕಡೆಯೂ ಅಚ್ಚುಕಟ್ಟು, ಶಿಸ್ತು ಮತ್ತು ತಾಯಿ-ಮಗುವಿನ ಬಗ್ಗೆ ವಹಿಸುತ್ತಿರುವ ಕಾಳಜಿಯನ್ನು ಕಂಡು ಆಸ್ಪತ್ರೆಯ ನಿರ್ದೇಶಕ ಡಾ. ದುರ್ಗಾಪ್ರಸಾದ್ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಮ್ಯಾಟರ್ನ್ ತ್ರೇಸ್ಯಮ್ಮ ಸೇರಿದಂತೆ ಕೆಲ ಸಿಬ್ಬಂದಿಯನ್ನು ಬಿಗಿದಪ್ಪಿಕೊಂಡು ‘ನಿಮ್ಮ ಸೇವೆ ಶ್ಲಾಘನೀಯ’ ಎಂದರು.
ಒಳಗೆ ಪ್ರವೇಶಿಸುತ್ತಿದ್ದಂತೆ ಎ.ಜೆ ದಂತ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಸ್ಥಾಪಿಸಿರುವ ದಂತ ಚಿಕಿತ್ಸಾಲಯವನ್ನು ಕಂಡು ‘ಇದ್ಯಾಕೆ ಇಲ್ಲಿ’ ಎಂದು ಅಧ್ಯಕ್ಷರು ಕೇಳಿದರು. ‘ಗರ್ಭಿಣಿಯರಿಗೆ ಹಲ್ಲುನೋವಿನ ಸಮಸ್ಯೆಗಳು ಕಾಡುವುದು ಸಹಜ. ಅದಕ್ಕಾಗಿ ಇದನ್ನು ಇಲ್ಲಿ ಆರಂಭಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು. ‘ಯಾರಿಗೂ ಹೊಳೆಯದ ಈ ಯೋಚನೆ ಜಾರಿಗೊಳಿಸಬೇಕಾದರೆ ದೂರದೃಷ್ಟಿ ಇರಬೇಕು. ಅದು ಇಲ್ಲಿನ ವೈದ್ಯರಲ್ಲಿ ಇದೆ’ ಎಂದು ದಂತ ವೈದ್ಯೆಯೂ ಆಗಿರುವ ನಾಗಲಕ್ಷ್ಮಿ ಅಭಿಪ್ರಾಯಪಟ್ಟರು.
ಔಷಧಿ ಸಂಗ್ರಹಾಲಯದಲ್ಲಿ ಔಷಧಿಗಳ ಬಾಕ್ಸ್ಗಳನ್ನು ನೆಲ ಮುಟ್ಟಿ ಹಾಳಾಗದಂತೆ ಇರಿಸಲಾಗಿತ್ತು. ಒಂದೊಂದು ವಿಭಾಗಕ್ಕೆ ಒಂದೊಂದು ಪ್ಲ್ಯಾಟ್ಫಾರ್ಮ್ ನಿರ್ಮಿಸಿರುವುದರ ಬಗ್ಗೆ ವಿವರಿಸಿದ ಅಧಿಕಾರಿಗಳು ಔಷಧಿ ಲಭ್ಯತೆಯ ಬಗ್ಗೆ ಪ್ರತಿ ತಿಂಗಳು ಮಾಹಿತಿ ಪಡೆಯಲಾಗುತ್ತದೆ, ಮೂರು ತಿಂಗಳಿಗಾಗುವಷ್ಟು ಬಫರ್ ಸ್ಟಾಕ್ ಇರಿಸಲಾಗುತ್ತದೆ. ಒಂದೊಂದು ವಿಭಾಗದಲ್ಲಿ ಔಷಧಿ ಖಾಲಿಯಾಗುತ್ತಿದ್ದಂತೆ ಮಾಹಿತಿ ಬರುತ್ತದೆ. ಆ ಪ್ರಕಾರ ಇಲ್ಲಿ ಇರಿಸಲಾಗುತ್ತದೆ. ಅದನ್ನು ವಿಭಾಗದವರು ತೆಗೆದುಕೊಂಡು ಹೋಗುತ್ತಾರೆ ಎಂದರು.
ಔಷಧಿ ಕೊರತೆಯಿಂದ ತಾಯಂದಿರಿಗೆ ತೊಂದರೆ ಆಗಬಾರದು ಎಂಬ ಕಾಳಜಿ ಅನುಕರಣೀಯ ಎಂದು ಅಧ್ಯಕ್ಷರು ಹೇಳಿದರು.
ಆಸ್ಪತ್ರೆಯ ಸಿಬ್ಬಂದಿಗೆ ಯೋಗದ ಮೂಲಕ ಪುನಶ್ಚೇತನ ತುಂಬುವ ಕೇಂದ್ರ ಹಾಗೂ ಓದಿಗಾಗಿ ಇರುವ ‘ಅಕ್ಷರ ದೀವಿಗೆ’ ಬಗ್ಗೆಯೂ ಶ್ಲಾಘನೆ ವ್ಯಕ್ತವಾಯಿತು. ಪತ್ರಕರ್ತರ ಜೊತೆ ಮಾತನಾಡಿದ ಅಧ್ಯಕ್ಷರು ‘ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಎನ್ಐಸಿಯುಗೆ ಸ್ಥಳಾಂತರಿಸಬೇಕಾದರೆ ಇಂಕ್ಯುಬೇಟರ್ ಬಳಸಲಾಗುತ್ತದೆ. ಇಂಥ ಸೂಕ್ಷ್ಮ ವಿಷಯಗಳ ಬಗ್ಗೆಯೂ ಕಾಳಜಿ ವಹಿಸುತ್ತಿರುವುದು ವಿಶೇಷ’ ಎಂದರು.
ಸಖಿ ಆಡಳಿತಾಧಿಕಾರಿ ಪ್ರಿಯಾ, ಆರ್ಎಂಒ ಡಾ.ಜಗದೀಶ್, ಡಾ.ದಯಾನಂದ್ ಮತ್ತು ಡಾ. ರವಿಕುಮಾರ್ ಇದ್ದರು. ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಜೊತೆ ಮಾತನಾಡಿದರು.
*ಮೀನು ಸಾರು ಸ್ಪೆಷಲ್*
ಆಸ್ಪತ್ರೆಯಲ್ಲಿ ದಾಖಲಾಗಿರುವ ಮಹಿಳೆಯರಿಗೆ ಮೀನು ಸಾರು ಕೊಡುವುದರ ಬಗ್ಗೆ ನಾಗಲಕ್ಷ್ಮಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ಯಾರು ತಿನ್ನುತ್ತಾರೆಯೋ ಅವರಿಗೆ ಇಲ್ಲಿ ಮೀನು-ಸಾರು ಕೊಡಲಾಗುತ್ತದೆ. ಆ ಮೂಲಕ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶ ನೀಡುತ್ತಿರುವುದು ಸಂತೋಷದ ವಿಷಯ’ ಎಂದು ಅವರು ಹೇಳಿದರು.
ಸಖಿ ಕೇಂದ್ರಕ್ಕೆ ಭೇಟಿ ನೀಡಿ ರಾಜ್ಯದ ಅತ್ಯುತ್ತಮ ಸಖಿ ಕೇಂದ್ರವಿದು ಎಂದರು.












