ಇತ್ತೀಚಿನ ಸುದ್ದಿ
ಮುಲ್ಕಿ ಹರೀಶ್ ಸಾಲ್ಯಾನ್ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ, 10 ಸಾವಿರ ದಂಡ
05/03/2026, 21:32
ಮಂಗಳೂರು(reporterkarnataka.com): ಮುಲ್ಕಿ ಪೇಟೆಯ ಟೂರಿಸ್ಟ್ ಕಾರು ಪಾರ್ಕಿಂಗ್ ಬಳಿಯ ಉಲ್ಲಂಜೆ ಎಂಬಲ್ಲಿಯ ಹರೀಶ್ ಸಾಲ್ಯಾನ್ ಎಂಬವರನ್ನು ಕೊಲೆಗೈದ ಪ್ರಕರಣ ಸಂಬಂಧಿಸಿದಂತೆ ಆರೋಪಿ ಮುರುಗನ್ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
2023 ಮಾರ್ಚ್ 19ರಂದು ರಾತ್ರಿ ಸುಮಾರು 9-45 ಗಂಟೆಗೆ ಬಪ್ಪನಾಡು ಗ್ರಾಮದ ಮುಲ್ಕಿ ಪೇಟೆಯ ಟುರಿಸ್ಟ್ ಕಾರು ಪಾರ್ಕಿಂಗ್ ಬಳಿ ಉಲ್ಲಂಜೆ ಎಂಬಲ್ಲಿಯ ಆರೋಪಿ ಮುರುಗನ್ ಎಂಬಾತ ಹರೀಶ್ ಸಾಲ್ಯಾನ್(47)ಎಂಬವರನ್ನು ಹಣಕಾಸಿನ ದ್ವೇಷದಿಂದ ಕೆಂಪು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದಾಗಿ ಮುಲ್ಕಿಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರಾದ ಜಗದೀಶ್ ವಿ. ಎನ್ . ಅವರು ಆರೋಪಿ ಮುರುಗನ್ ಎಂಬಾತನಿಗೆ ಕಲಂ 302 ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.












