ಇತ್ತೀಚಿನ ಸುದ್ದಿ
ಕೊನೆಗೂ ಸೋನಿಯಾ ಗಾಂಧಿ ಭೇಟಿಯಾದ ಡಿಸಿಎಂ ಡಿ.ಕೆ. ಶಿವಕುಮಾರ್: ನಡೆಯದ ಸಿಎಂ ಕುರ್ಚಿ ಚರ್ಚೆ?
12/02/2026, 18:46
ನವದೆಹಲಿ(reporterkarnataka.com): ರಾಜ್ಯದ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಯಾದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ರಾಜ್ಯ ನಾಯಕತ್ವ ವಿಚಾರ ಚರ್ಚೆಯಲ್ಲಿರುವಾಗಲೇ ಶಿವಕುಮಾರ್ ದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಅಸ್ಸಾಂ ಚುನಾವಣೆ ತಯಾರಿಗೆ ಸಭೆ ನಡೆಸಲು ದೆಹಲಿಗೆ ತೆರಳಿದ್ದರು. ಸ್ವತಃ ಎಐಸಿಸಿಯಿಂದ ಡಿಕೆಶಿಗೆ ಬುಲಾವ್ ಬಂದಿತ್ತು. ಆದರೆ ದೆಹಲಿಗೆ ಹೋದ ಡಿಕೆಶಿ ಅಸ್ಸಾಂ ಚುನಾವಣೆ ಜೊತೆಗೆ ರಾಜ್ಯ ನಾಯಕತ್ವದ ವಿಚಾರವನ್ನೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ನಿನ್ನೆ ತಡರಾತ್ರಿ ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಸೋನಿಯಾ ಗಾಂಧಿಯವರನ್ನೂ ಕೊನೆಗೂ ಡಿಕೆಶಿ ಭೇಟಿ ಮಾಡಿದ್ದಾರೆ. ಅಸ್ಸಾಂ ಕಾಂಗ್ರೆಸ್ ನಾಯಕರೊಂದಿಗೆ ಡಿಕೆಶಿ, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಆದರೆ ಈ ವೇಳೆ ಕೇವಲ ಅಸ್ಸಾಂ ಚುನಾವಣೆ ವಿಚಾರವಾಗಿಯೇ ಮಾತುಕತೆ ನಡೆಸಿಲ್ಲ ಎನ್ನಲಾಗಿದೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ದೆಹಲಿಗೆ ಬಂದ ಮೇಲೆ ರಾಜಕೀಯ ಚರ್ಚೆ ಮಾಡೇ ಮಾಡ್ತೇವೆ. ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಆದರೆ ಏನು ಚರ್ಚೆ ಮಾಡಿದ್ದೇನೆ ಎಂಬುದನ್ನೆಲ್ಲಾ ಇಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.












