ಇತ್ತೀಚಿನ ಸುದ್ದಿ
ಗ್ಯಾರಂಟಿಗಳಿಗೆ ದಲಿತರ 39 ಸಾವಿರ ಕೋಟಿ ರೂಪಾಯಿ ಬಳಕೆ: ಸಚಿವ ಮಹದೇವಪ್ಪ ರಾಜೀನಾಮೆಗೆ ಛಲವಾದಿ ಒತ್ತಾಯ
19/12/2025, 18:08
ಬೆಳಗಾವಿ(reporterkarnataka.com): ದಲಿತರ ಉದ್ಧಾರ ಮಾಡದೇ ವಂಚನೆಗೆ ಕಾರಣರಾದ ಸಚಿವ ಮಹದೇವಪ್ಪ ಅವರು ತಕ್ಷಣ ರಾಜೀನಾಮೆ ಕೊಡಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಇಂದು ಇಲ್ಲಿ ಮಾತನಾಡಿದ ಅವರು, ಸಚಿವ ಮಹದೇವಪ್ಪ ಅವರು ದಲಿತ ವಿರೋಧಿ ಎಂದು ಆಕ್ಷೇಪಿಸಿದರು. ಇವರು ಕೇವಲ ತಮ್ಮ ಬಾಸ್ಗಳನ್ನು ಓಲೈಕೆ ಮಾಡಿಕೊಂಡು ಲೂಟಿ ಮಾಡಿ, ಇವರ ಕುಟುಂಬಗಳನ್ನು ಉದ್ಧಾರ ಮಾಡುತ್ತಿದ್ದಾರೆ; ಸಮುದಾಯಗಳ ಉದ್ಧಾರ ಇವರಿಂದ ಆಗುತ್ತಿಲ್ಲ ಎಂದು ಟೀಕಿಸಿದರು.
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ನೀವು ಇವತ್ತು ಅಧಿಕಾರ ನಡೆಸುತ್ತಿದ್ದೀರಿ ಎಂದು ಆರೋಪಿಸಿದರು. ಡಾ. ಅಂಬೇಡ್ಕರ್ ಅವರು ಬದುಕಿದ್ದರೆ ಇಂಥವರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತಿದ್ದರು ಎಂದು ತಿಳಿಸಿದರು. ಇವರು ದಲಿತರ ಸರ್ವನಾಶ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಎಸ್ಇಪಿ, ಟಿಎಸ್ಪಿ ಹಣದ ಲೂಟಿ, ಜನರಿಗೆ ವಂಚನೆ ಕಾರ್ಯ ನಡೆಯುತ್ತಿದೆ. ಅವರಿಗೆ ಏನೂ ಸಿಗದಂತೆ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಒಳ ಮೀಸಲಾತಿಯಲ್ಲೂ ಸಂಪೂರ್ಣ ತಾರತಮ್ಯ
ಒಳ ಮೀಸಲಾತಿಯಲ್ಲೂ ಸಂಪೂರ್ಣ ತಾರತಮ್ಯ ಮಾಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು. ಯಾರಿಗೂ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ. ಈ ಕುರಿತ ಮಸೂದೆ ಬರಲಿದೆ ಎಂದು ತಿಳಿಸಿದರು.
ಎಸ್ಇಪಿ, ಟಿಎಸ್ಪಿ ಹಣವನ್ನು ಅನ್ಯಕಾರ್ಯಗಳಿಗೆ ಬಳಸಿ ಪರಿಶಿಷ್ಟ ಜಾತಿ, ವರ್ಗ- ದಲಿತ ಸಮುದಾಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ; ಸರಕಾರದ ಈ ಕ್ರಮ ಖಂಡನೀಯ ಎಂದು ತಿಳಿಸಿದರು. ಸಚಿವ ಮಹದೇವಪ್ಪ ಅವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಈ ವರ್ಷದಲ್ಲಿ ಪರಿಶಿಷ್ಟ ಜಾತಿಗಳ ಶ್ರೇಯೋಭಿವೃದ್ಧಿಗೆ 42 ಸಾವಿರ ಕೋಟಿ ಎಸ್ಇಪಿ, ಟಿಎಸ್ಪಿ ಮೊತ್ತವನ್ನು ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಇದುವರೆಗೆ ಈ 3 ವರ್ಷಗಳಲ್ಲಿ 39 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಎಸ್ಇಪಿ, ಟಿಎಸ್ಪಿ ಹಣ ದಲಿತರ ಶ್ರೇಯೋಭಿವೃದ್ಧಿಗಾಗಿ ಇದೆ. ಮನೆ ಕಟ್ಟಿ ಕೊಡುವುದು, ಯುವಕರಿಗೆ ಕಾರು ಖರೀದಿಸಿ ಕೊಟ್ಟು ಸ್ವಂತ ಉದ್ಯೋಗಕ್ಕೆ ಪ್ರೋತ್ಸಾಹ, ವ್ಯಾಪಾರಕ್ಕೆ ಸಾಲ ಸಹಾಯ, ಗಂಗಾ ಕಲ್ಯಾಣ ಅನುಷ್ಠಾನ, ಅವರ ಮನೆಗೆ ರಸ್ತೆಯಂಥ ಚಟುವಟಿಕೆ ಮಾಡಬೇಕಿತ್ತು. ಗ್ಯಾರಂಟಿ ಕೊಡುವಾಗ ನನಗೂ ಫ್ರೀ, ನಿನಗೂ ಫ್ರೀ ಎಂದರು ಎಂದು ದೂರಿದರು.
ಆದರೆ, ಇಲ್ಲಿ ಮಾಡಿದ್ದೇನು? ಎಲ್ಲರಿಗೂ ಖಜಾನೆ ಹಣ ಕೊಟ್ಟು, ದಲಿತರಿಗೆ ಅನ್ಯಾಯ, ಮೋಸ ಮಾಡಿ, ಎಸ್ಇಪಿ, ಟಿಎಸ್ಪಿ ಹಣವನ್ನು ಇದೇ ಗ್ಯಾರಂಟಿ ಹಣ ಎಂದು ಕೊಡಲಾಗಿದೆ ಎಂದು ಟೀಕಿಸಿದರು. ಸರಕಾರವು ಗ್ಯಾರಂಟಿ ಯೋಜನೆ ತಾರದೇ ಇದ್ದರೆ 42 ಸಾವಿರ ಕೋಟಿಯನ್ನು ಯಾರಿಗೆ ಕೊಡುತ್ತಿದ್ದರು? ದಲಿತ ಸಮುದಾಯದ ಅಭಿವೃದ್ಧಿಗೇ ಅದು ಹೋಗುತ್ತಿತ್ತು. ಗ್ಯಾರಂಟಿಗೆ ದಲಿತರಿಗೆ ಖಜಾನೆ ಹಣ ಕೊಡದೇ ಇರುವುದು ಮೋಸವಲ್ಲವೇ ಎಂದು ಕೇಳಿದರು. ಆದರೆ, ಇದು ದಲಿತ ಸಮುದಾಯಗಳಿಗೆ ಅರ್ಥ ಆಗಿಲ್ಲ ಎಂದು ನುಡಿದರು.
ಕೆಲವು ದಲಿತ ಸಂಘಟನೆಗಳ ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್
ಅನೇಕ ದಲಿತ ಸಂಘಟನೆಗಳಿವೆ. ದಲಿತರಿಗೆ ಅನ್ಯಾಯ ಆದಾಗ ಅವು ಹೊರಕ್ಕೆ ಬಂದು ಹೋರಾಟ ಮಾಡುತ್ತವೆ. ಈಚೆಗೆ ಕೆಲವು ಸಂಘಟನೆಗಳು ಕಾಂಗ್ರೆಸ್ ಜೊತೆ ಮಾರಾಟ ಆಗಿ ಹೋಗಿವೆ ಎಂದು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಎಲ್ಲ ಸಂಘಟನೆಗಳು ಎಂದು ನಾನು ಹೇಳಿಲ್ಲ; ಮಾರಾಟ ಆದ ಕಾರಣದಿಂದ ಅವರು ಏನೇ ಆದರೂ ಕಾಂಗ್ರೆಸ್ ಜೊತೆ ಉಳಿಯುತ್ತಾರೆ. ಹೊರತು ಹೊರಗಡೆ ಬಂದಿಲ್ಲ. ಕಾಂಗ್ರೆಸ್ ಪಕ್ಷವು ಅವರ ಮೂಗಿಗೆ ತುಪ್ಪ ಸವರಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಎಸ್. ಕೇಶವ್ ಪ್ರಸಾದ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.












