ಇತ್ತೀಚಿನ ಸುದ್ದಿ
ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಮಹಿಳೆ: ಕಾರು ಹರಿದು ವಿದ್ಯುತ್ ಗುತ್ತಿಗೆದಾರ ದುರಂತ ಸಾವು
10/06/2026, 13:12
ಹಾವೇರಿ(reporterkarnataka.com): ಮಹಿಳೆಯೊಬ್ಬರು ಕಾರು ನಿಲ್ಲಿಸುವಾಗ ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಪರಿಣಾಮ ಎದುರಿಗಿದ್ದ ವ್ಯಕ್ತಿ ಮೇಲೆ ಕಾರು ಹರಿದು ದುರ್ಮರಣ ಹೊಂದಿದ ಘಟನೆ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದಿದೆ.
ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಅಜ್ಜಪ್ಪ ಶಿವಪ್ಪ ಕಳಸಣ್ಣನವರ (40) ಮೃತ ದುರ್ದೈವಿ. ಬೆಂಗಳೂರಿನ ಸುಜಾತಾ ಕೆ.ಎಂ. ಕಾರು ಹಾಯಿಸಿದ ಮಹಿಳೆ. ಅಜ್ಜಪ್ಪ ವಿದ್ಯುತ್ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದ. ಸುಜಾತಾಳ ಜಮೀನಿನಲ್ಲಿ ವಿದ್ಯುತ್ ಪರಿವರ್ತಕದ ಕೆಲಸವಿದ್ದ ಕಾರಣ ಅವರ ಜಮೀನಿನ ಬಳಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಕಾರಿನಲ್ಲಿ ಬಂದ ಸುಜಾತಾ ಅಜ್ಜಪ್ಪನನ್ನು ಮಾತನಾಡಿಸುವ ಸಲುವಾಗಿ ಕಾರು ನಿಲ್ಲಿಸಲು ಮುಂದಾದಾಗ ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ್ದಾಳೆ. ಇದರಿಂದ ಕಾರು ಎದುರಿಗೆ ನಿಂತಿದ್ದ ಅಜ್ಜಪ್ಪನ ಮೈ ಮೇಲೆ ಹರಿದಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಆತನನ್ನು ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಆದರೆ, ದಾರಿ ಮಧ್ಯೆಯೆ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












