9:24 AM Friday16 - January 2026
ಬ್ರೇಕಿಂಗ್ ನ್ಯೂಸ್
ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಡಿಸಿಎಂ ಡಿಕೆಶಿ ರಾಜೀನಾಮೆಗೆ ಹೈಕಮಾಂಡ್‌ ಸೂಚಿಸಲಿ: ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

07/06/2025, 00:00

* ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊರಲಿ

* ಹೈಕೋರ್ಟ್‌ ಸುಪರ್ದಿಯಲ್ಲೇ ಇದರ ವಿಚಾರಣೆ ಆಗಬೇಕು
* ಆರ್‌ಸಿಬಿ ತಂಡಕ್ಕೆ ವಿಮಾನ ಬುಕ್‌ ಮಾಡಿದ್ದು ಯಾರು?

* ಪೊಲೀಸರ ಅಮಾನತ್ತು ಕ್ರಮ ಮತ್ಯಾರನ್ನು ರಕ್ಷಿಸಲು?

ಮೈಸೂರು,(reporterkarnataka.com): ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಘಟಿಸಿದ ದುರಂತವನ್ನು ಕಾಂಗ್ರೆಸ್‌ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿ ಡಿಸಿಎಂ ಡಿ.ಕೆ. ಶಿವಕುಮಾರ್‌ ರಾಜೀನಾಮೆಗೆ ಸೂಚನೆ ನೀಡಬೇಕೆಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನನಾಡಿ, ಡಿ.ಕೆ. ಶಿವಕುಮಾರ್‌ ಒಂದು ಕ್ಷಣವೂ ಕಾಯದೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಎಂ ಸಿದ್ದರಾಮಯ್ಯ ಅವರೇ ಇದರ ನೈತಿಕೆ ಹೊಣೆ ಹೊರಬೇಕು ಎಂದರು.
ವಿಧಾನಸೌಧ ಮುಂಭಾಗ ಕಾರ್ಯಕ್ರಮ ನಡೆಯುತ್ತಿರುವಾಗಲೇ ʼಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಮೂವರ ಸಾವುʼ ಸುದ್ದಿ ಹರಡಿತ್ತು. ಹಾಗಿದ್ದರೂ ಡಿಸಿಎಂ ಕ್ರೀಡಾಂಗಣಕ್ಕೆ ತೆರಳಿ ಸಂಭ್ರಮಿಸಿದ್ದಾರೆ. ಇದು ಅಕ್ಷಮ್ಯ ಅಪರಾಧವಲ್ಲವೇ? ಎಂದರು.
ಇಷ್ಟು ದೊಡ್ಡ ದುರಂತ ಘಟಿಸಿದರೂ ತಕ್ಷಣಕ್ಕೆ ಒಂದೇ ಒಂದು ಎಫ್‌ಐಆರ್‌ ಹಾಕದ ಸರ್ಕಾರ, ಹೈಕೋರ್ಟ್‌ ಸ್ವಯಂ ಪ್ರಕರಣ ದಾಖಲಿಸಿಕೊಳ್ಳುತ್ತಲೇ ಪೊಲೀಸ್‌ ಅಧಿಕಾರಿಗಳನ್ನು ಹೊಣೆಯಾಗಿಸುವ ರೀತಿ ಅಮಾನತ್ತು ಮಾಡಿದ್ದೀರಿ. ಹಾಗಾದರೆ, ಡಿಕೆ ಶಿವಕುಮಾರ್‌ ಅವರನ್ನೂ ಡಿಸಿಎಂ ಸ್ಥಾನದಿಂದ ತೆಗೆದುಹಾಕಿ ವಿಚಾರಣೆಗೆ ಒಳಪಡಿಸುತ್ತೀರಾ? ಎಂದು ಪ್ರಶ್ನಿಸಿದರು.

*ಸಿಎಂ ಅದ್ಯಾವಾಗ ನೈತಿಕ ಹೊಣೆ ಹೊತ್ತಿದ್ದಾರೆ?:* ಸಿಎಂ ಸಿದ್ದರಾಮಯ್ಯ ಅವರು ಮೂಡಾ ಹಗರಣದಲ್ಲೂ ಆಯುಕ್ತ, ಅಧಿಕಾರಿಗಳನ್ನು ಗುರಿ ಮಾಡಿದರು. ವಾಲ್ಮೀಕಿ ಹಗರಣದಲ್ಲೂ ಅಷ್ಟೇ. ಈಗ ಈ ದುರಂತದಲ್ಲೂ ಅದೇ ವರ್ತನೆ ತೋರಿದ್ದಾರೆ. ತಮ್ಮ ರಾಜಕೀಯ ಪ್ರತಿಷ್ಠೆಯನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

*ಯಾರನ್ನು ರಕ್ಷಿಸಲು ಪೊಲೀಸರ ಅಮಾನತ್ತು:?* ಹೈಕೋರ್ಟ್‌ ಪ್ರಕರಣ ದಾಖಲಿಸಿಕೊಂಡ ಬಳಿಕ ಆರ್‌ಸಿಬಿ ದುರ್ಘಟನೆ ತನಿಖೆಗೆ ಸಿಎಂ ಬುದ್ಧಿ ಇಲ್ಲದವರಂತೆ ನಡೆದುಕೊಂಡಿದ್ದಾರೆ. ತರಾತುರಿಯಲ್ಲಿ ನಿವೃತ್ತ ನ್ಯಾಯಾಧೀಶರ ಏಕಸದಸ್ಯ ಆಯೋಗ ನೇಮಿಸಿದ್ದಾರೆ. ಪೊಲೀಸರನ್ನು ಅಮಾನತ್ತು ಮಾಡಿದ್ದಾರೆ. ಇದು ಯಾರನ್ನು ರಕ್ಷಿಸಲು? ವಾಸ್ತವವಾಗಿ ಹೈಕೋರ್ಟ್‌ ಸಮ್ಮತಿಸುವ ನ್ಯಾಯಾಧೀಶರನ್ನು ತನಿಖೆಗೆ ನೇಮಿಸಬೇಕು ಎಂದು ಹೇಳಿದರು.

*ಹೈಕೋರ್ಟ್‌ ಸುಪರ್ದಿಯಲ್ಲೇ ವಿಚಾರಣೆ ಆಗಬೇಕು:* ಈ ದುರಂತ ಈಗ ಹೈಕೋರ್ಟ್‌ ಅಂಗಳದಲ್ಲಿದೆ. ಹಾಗಾಗಿ ಹೈಕೋರ್ಟ್‌ ಮಾನಿಟರಿಯಲ್ಲೇ ತನಿಖೆಯಾಗಬೇಕು. ಹೈಕೋರ್ಟ್‌ ಸಪರ್ದಿಯಲ್ಲೇ ವಿಚಾರಣೆ ಆಗಬೇಕು. ಹೈಕೋರ್ಟ್‌ ನ್ಯಾಯಾಧೀಶರನ್ನೇ ನೇಮಿಸಬೇಕು ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು.

*ಎರೆದುಕೊಳ್ಳುವವರ ಬುಡಕ್ಕೆ ಬಗ್ಗಿದ ಸರ್ಕಾರ:* ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಆರ್‌ಸಿಬಿ ತಂಡ ಮುಂದಾಗಿರಲಿಲ್ಲ. ಅಲ್ಲದೇ, ಪೊಲೀಸ್‌ ಇಲಾಖೆ ಸಹ ಅನುಮತಿ ಕೊಡಲು ಸಿದ್ಧವಿರಲಿಲ್ಲ. ಹಾಗಿದ್ದರೂ ಸರ್ಕಾರವೇ ಒತ್ತಡ ಹಾಕಿದೆ. ʼಎರೆದುಕೊಳ್ಳುವವರ ಬುಡಕ್ಕೆ ಬಗ್ಗಿದರುʼ ಎನ್ನುವಂತೆ ಆರ್‌ಸಿಬಿ ಟ್ರೋಫಿ ಗೆದ್ದ ವಿಜಯೋತ್ಸವದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪ್ರತಿಷ್ಠೆ ಮೆರೆಯಲು, ಕ್ರೆಡಿಟ್‌ ತೆಗೆದುಕೊಳ್ಳಲು ಹೋಗಿದೆ. ಅದೂ ಯಾವೊಂದೂ ಪೂರ್ವ ತಯಾರಿ ಇಲ್ಲದೇ ಎಂದು ಸಚಿವ ಪ್ರಲ್ಹಾದ ಕಿಡಿ ಕಾರಿದರು.

*ಆರ್‌ಸಿಬಿ ತಂಡಕ್ಕೆ ವಿಮಾನ; ತನಿಖೆಯಾಗಲಿ:* ಆರ್‌ಸಿಬಿ ತಂಡವನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ವಿಮಾನ ಕಳಿಸಿ ಕೊಟ್ಟವರು ಯಾರು? ಸರ್ಕಾರದಲ್ಲಿ ಇರುವವರೇ ವಿಮಾನ ಬುಕ್​ ಮಾಡಿದಂತಿದೆ. ಈ ಕುರಿತು ತನಿಖೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲೆತ್ನಿಸದೆ ನೈತಿಕ ಹೊಣೆ ಹೊರಬೇಕು. ಕೂಡಲೇ, ದಾದಾಗಿರಿ ಎಂಬಂತೆ ವರ್ತಿಸುವ ಡಿಸಿಎಂ ಡಿಕೆ ಶಿವಕುಮಾರ್‌ ರಾಜೀನಾಮೆ ಪಡೆಯಬೇಕು ಎಂದು ಜೋಶಿ ಆಗ್ರಹಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನ ಕಾಲ್ತುಳಿಕ್ಕೆ ಬಲಿಯಾಗಿದ್ದು ಗೊತ್ತಾದರೂ ವಿಧಾನಸೌಧದೆದುರು ಡಿಸಿಎಂ, ಸಚಿವರು, ಅಧಿಕಾರಿಗಳು ಕುಟುಂಬ ಸಮೇತ ಆರ್‌ಸಿಬಿ ಆಟಗಾರರೊಂದಿಗೆ ಸೆಲ್ಫಿಯಲ್ಲಿ ಮುಳುಗಿದರು. ಸಂಜೆ 5 ಗಂಟೆವರೆಗೂ ಸಂಭ್ರಮಿಸಿದ್ದಾರೆ. ಈ ಸರ್ಕಾರಕ್ಕೇನಾದರೂ ಮಾನವೀಯತೆ, ಮನುಷ್ಯತ್ವ ಇದೆಯೇ? ಜನರ ಬಗ್ಗೆ ಕಳಕಳಿ ಇದೆಯೇ? ಎಂದು ತರಾಟೆಗೆ ತೆಗೆದುಕೊಂಡರು.

*ಟ್ವೀಟ್‌ ಕರೆ ಕೊಟ್ಟವರು ಯಾರು?:* ವಿಧಾನಸೌಧ ಮುಂಭಾಗ ಭವ್ಯ ಸಂಭ್ರಮಾಚರಣೆಗೆ ಸಂಜೆ 4 ಗಂಟೆಗೆ ಬನ್ನಿ ಎಂದು ಟ್ವೀಟ್‌ ಕರೆ ಕೊಟ್ಟಿದ್ದು ತಾವೇ ಅಲ್ಲವೇ? ಹಾಗಾಗಿ ಅಷ್ಟು ಜನ ಬಂದಿದ್ದಾರೆ. ಇನ್ನು ವಿಮಾನ ನಿಲ್ದಾಣದಲ್ಲಿ ಆರ್‌ಸಿಬಿ ಆಟಗಾರರನ್ನು ಖುದ್ದು ಡಿಸಿಎಂ ಡಿಕೆ ಶಿವಕುಮಾರ್‌ ಅವರೇ ಹೋಗಿ ಸ್ವಾಗತಿಸಿದ್ದಾರೆ. ಸಾಲದ್ದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ತೆರಳಿದ್ದಾರೆ. ಪೊಲೀಸ್‌ ಕಮಿಷನರ್‌ ಅನುಮತಿ ಕೊಡದಿದ್ದರೂ ಡಿಸಿಎಂ ಹೇಗೆ ಹೋದರು? ಡಿಸಿಎಂ ತಮ್ಮನ್ನೇನು ಕ್ರಿಕೆಟ್‌ ಕೋಚ್‌ ಅಂದುಕೊಂಡಿದ್ದಾರಾ ಹೇಗೆ? ಎಂದು ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.

*ರಾಹುಲ್‌ ಗಾಂಧಿ ಸಹ ಜವಾಬ್ದಾರಿ:* ರಾಹುಲ್‌ ಗಾಂಧಿಯೂ ಇದಕ್ಕೆ ಜವಾಬ್ದಾರರಾಗುತ್ತಾರೆ. ಅವರಿಗೆ ನೈತಿಕತೆ ಇದ್ದರೆ, ಕಾಂಗ್ರೆಸ್‌ ಹೈಕಮಾಂಡ್‌ಗೆ ಕಮಾಂಡ್‌ ಅನ್ನೋದು ಇದ್ದರೆ ಮೊದಲು ಡಿಸಿಎಂ ಡಿಕೆಶಿ ರಾಜೀನಾಮೆ ಪಡೆಯಲಿ ಮತ್ತು ಸಿಎಂರನ್ನು ಹೊಣೆಯಾಗಿಸಿ ಕ್ರಮ ಕೈಗೊಳ್ಳಲಿ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು