ಇತ್ತೀಚಿನ ಸುದ್ದಿ
ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..!
07/05/2026, 22:21
ಚಿಕ್ಕಬಳ್ಳಾಪುರ(reporterkarnataka.com): ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಕ್ತಸಂಬಂಧದ ಮನ್ನಣೆಯನ್ನೇ ಮರೆತು ಅಕ್ಕ-ತಮ್ಮ ಹಸೆಮಣೆ ಏರಿರುವ ವಿಲಕ್ಷಣ ಘಟನೆ ನಡೆದಿದೆ. ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಿದ್ದ ಜೋಡಿ ಈಗ ಸಪ್ತಪದಿ ತುಳಿಯುವ ಮೂಲಕ ಸಾಮಾಜಿಕ ಚರ್ಚೆಗೆ ಗ್ರಾಸವಾಗಿದ್ದಾರೆ.ದೇವನಹಳ್ಳಿಯ ಸಾವಕನಹಳ್ಳಿ ಮೂಲದ ಶಶಿಕಲಾ ಹಾಗೂ ಹೊಸಕೋಟೆಯ ಪ್ರವೀಣ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿಶೇಷವೆಂದರೆ, ಇವರಿಬ್ಬರ ತಾಯಂದಿರು ಸ್ವಂತ ಅಕ್ಕ-ತಂಗಿಯರು. ಅಂದರೆ ವರಸೆಯಲ್ಲಿ ಶಶಿಕಲಾ ಮತ್ತು ಪ್ರವೀಣ್ ಅಕ್ಕ-ತಮ್ಮನಾಗಬೇಕು. ಆದರೆ ಈ ಸಂಬಂಧದ ಗಡಿಯನ್ನು ಮೀರಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.
ಶಶಿಕಲಾಗೆ ಪೋಷಕರು ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯಿಸಿ, ಲಗ್ನಪತ್ರಿಕೆಯನ್ನೂ ಹಂಚಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಶಶಿಕಲಾ ತನ್ನ ಪ್ರಿಯಕರ ಪ್ರವೀಣ್ ಜೊತೆ ಪರಾರಿಯಾಗಿದ್ದಳು. ನಂತರ ಇಬ್ಬರೂ ಅಂಗಟ್ಟದ ಶಿವನ ಗುಡಿಯಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ಮದುವೆಯ ನಂತರ ಪೋಷಕರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ನವಜೋಡಿ, ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಧಾವಿಸಿದ್ದಾರೆ. ಈ ವೇಳೆ ಕಚೇರಿ ಆವರಣದಲ್ಲಿ ಹೈಡ್ರಾಮಾ ನಡೆದಿದ್ದು, ಮಗಳ ಮದುವೆಯನ್ನು ಕಂಡು ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು. ಅಕ್ಕನ ಮಗಳಾಗಿ ತಮ್ಮನನ್ನೇ ಮದುವೆಯಾಗಿದ್ದೀಯಲ್ಲಾ, ಈ ಸಂಬಂಧ ಸಮಾಜ ಒಪ್ಪುತ್ತದೆಯೇ?” ಎಂದು ತಾಯಿ ಮಗಳನ್ನು ಪ್ರಶ್ನಿಸಿ ಕಣ್ಣೀರಿಟ್ಟರು.
ಆದರೆ, ಯಾವುದಕ್ಕೂ ಮಣಿಯದ ಶಶಿಕಲಾ, ನನಗೆ ಪ್ರಿಯಕರನೇ ಸರ್ವಸ್ವ, ನಾನು ಪೋಷಕರ ಜೊತೆ ಹೋಗುವುದಿಲ್ಲ” ಎಂದು ಪಟ್ಟು ಹಿಡಿದಿದ್ದಾಳೆ. ಪ್ರಸ್ತುತ ಈ ವಿಲಕ್ಷಣ ಮದುವೆ ಪ್ರಕರಣ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.












