3:01 AM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಸಾಲ ಖಾತೆಗೆ ಕೊರೊನಾ ಪರಿಹಾರ ಧನ ವರ್ಗಾಯಿಸಿದ ಕೆನರಾ ಬ್ಯಾಂಕ್: ಆಟೋ ಚಾಲಕನ ಕಣ್ಣೀರ ಕಥೆ ವೈರಲ್ ಆಗುತ್ತಿದ್ದಂತೆ ಹಣ ಮರು ವರ್ಗಾವಣೆ !!

25/06/2021, 15:03

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಬಡಪಾಯಿ ಆ ಆಟೋ ಚಾಲಕನ ಬ್ಯಾಂಕ್ ಅಕೌಂಟ್ ನಲ್ಲಿದ್ದ ಒಟ್ಟು 5700 ರೂಪಾಯಿ ಮಂಗಮಾಯವಾಗಿತ್ತು. ಕೊರೊನಾದ ಕಷ್ಟ ಕಾಲಕ್ಕೆ ಅಂತ ಮಡಗಿಟ್ಟ ಆ ಹಣ ಇದ್ದಕ್ಕಿದ್ದ ಹಾಗೆ ಮಾಯವಾಗಿ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಕಾಣಿಸುತ್ತಿತ್ತು. ಹಾಗೆಂತ ಆ ಬಡಪಾಯಿಯ ಖಾತೆಯಿಂದ ನೈಜಿರಿಯನ್ ಫ್ರಾಡ್ ಗಳಾಗಲಿ, ದೇಶದೊಳಗಿನ ಹ್ಯಾಕರ್ ಗಳಾಗಲಿ ಹಣ ಲಪಟಾಯಿಸಿಲ್ಲ. ಬದಲಿಗೆ ಆಟೋ ಚಾಲಕ

ಖಾತೆ ಹೊಂದಿದ್ದ ರಾಷ್ಟ್ರೀಕೃತ ಬ್ಯಾಂಕ್ ನ ಅಧಿಕಾರಿಗಳೇ ಹಣ ವರ್ಗಾಯಿಸಿದ್ದರು. ದಿನದ ತುತ್ತು ಕೂಳಿಗೆ ಅಂತ ಜೋಪಾನ ಮಾಡಿಟ್ಟ ಆ ಹಣವನ್ನು ಮನೆ ಕಂತು ಬಾಕಿ ಇದೆ ಅಂತ ಸಾಲದ ಖಾತೆಗೆ ಬ್ಯಾಂಕ್ ಸಿಬ್ಬಂದಿಗಳು ವರ್ಗಾಯಿಸಿದ್ದರು.

ಇದೆಲ್ಲ ನಡೆದದ್ದು ಮಂಗಳೂರು ಹೊರವಲಯದ ಬೈಕಂಪಾಡಿಯ ಕೆನರಾ ಬ್ಯಾಂಕ್ ಬ್ರಾಂಚ್ ನಲ್ಲಿ. ಬಶೀರ್ ಎಂಬ ಆಟೋ ಚಾಲಕನ ಎಸ್ ಬಿ ಖಾತೆಯಿಂದ ಹಣವನ್ನು ಸಾಲ ಖಾತೆಗೆ ವರ್ಗಾಯಿಸಲಾಗಿತ್ತು.

ಸುರತ್ಕಲ್ ಸಮೀಪದ ಕುಳಾಯಿಯ (ಸದ್ಯ ಸೂರಿಂಜೆ ನಿವಾಸಿ) ಆಟೋ ಚಾಲಕನಾದ ಬಶೀರ್ ಅವರು ಬೈಕಂಪಾಡಿಯ ಕೆನರಾ ಬ್ಯಾಂಕ್ ನಿಂದ ಮನೆ ಸಾಲ ಪಡೆದಿದ್ದರು. ಕೊರೊನಾ ಲಾಕ್ ಡೌನ್ ನಿಂದ ಬಾಡಿಗೆಯಿಲ್ಲದೆ ಅವರಿಗೆ ಮೇ ತಿಂಗಳ ಕಂತು ಕಟ್ಟಲು ಸಾಧ್ಯವಾಗಲಿಲ್ಲ. ಸಾಲ ಕೊಟ್ಟ ಕೆನರಾ ಬ್ಯಾಂಕ್ ಅಧಿಕಾರಿಗಳಲ್ಲಿ ಮೂರ್ನಾಲ್ಕು ತಿಂಗಳು ಕಂತು ಪಾವತಿಗೆ ವಿನಾಯಿತಿ ಕೇಳಿದ್ದರು. ಆದರೆ ಬ್ಯಾಂಕ್ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಬದಲಿಗೆ ಬ್ಯಾಂಕ್ ಸಿಬ್ಬಂದಿಗಳು ಬಶೀರ್  ಅವರ ಎಸ್ ಬಿ ಖಾತೆಯಲ್ಲಿದ್ದ 2700 ರೂಪಾಯಿ ಹಾಗೂ ಆಟೋ ಚಾಲಕರಿಗೆ ರಾಜ್ಯ ಸರಕಾರ ಕೊರೊನಾ ಪರಿಹಾರವಾಗಿ ನೀಡಿದ 3,000 ರೂಪಾಯಿಯನ್ನು ಮನೆ ಸಾಲಕ್ಕೆ ಜಮಾ ಮಾಡಿದ್ದರು. ಇದರಿಂದ ಬಶೀರ್ ಅವರಿಗೆ ಆಕಾಶವೇ ಕಳಚಿದಂತಾಯಿತು. ವೃದ್ದ ತಾಯಿ ಸಹಿತ 6 ಮಂದಿಯ ಕುಟುಂಬವನ್ನು ಸಾಕುವ ಜವಾಬ್ದಾರಿ ಹೊತ್ತ ಬಶೀರ್ ಅವರು ದಿಕ್ಕೇ ಕಾಣದಂತಾಗಿ ತಲೆ ಮೇಲೆ ಕೈಹೊತ್ತು ಕುಳಿತರು.

ಬಶೀರ್ ಅವರ ಕಣ್ಣೀರ ಕಥೆ ಗೊತ್ತಾಗುತ್ತಿದ್ದಂತೆ ಡಿವೈಎಫ್ ಐ ನಾಯಕ ಮುನೀರ್ ಕಾಟಿಪಳ್ಳ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದು ಬಿಟ್ಟರು. ಇದು ವ್ಯಾಪಕ ಪ್ರಚಾರ ಪಡೆಯಿತು. ಬ್ಯಾಂಕ್  ಅಧಿಕಾರಿಗಳ ಕ್ರಮದ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಬ್ಯಾಂಕ್ ಅಧಿಕಾರಿಗಳ ವಲಯದಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಯೂನಿಯನ್ ಪದಾಧಿಕಾರಿಗಳು ಬಶೀರ್ ಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು. 

ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಕೆನರಾ ಬ್ಯಾಂಕ್ ಅಧಿಕಾರಿಗಳು ಸರಕಾರದಿಂದ ಪರಿಹಾರವಾಗಿ ಬಂದಿದ್ದ 3 ಸಾವಿರ ರೂಪಾಯಿಗಳನ್ನು ಬಶೀರ್ ಖಾತೆಗೆ ಮರಳಿಸಿದ್ದಾರೆ. ಜತೆಗೆ ಮನೆ ಸಾಲ ರೀಷೆಡ್ಯೂಲ್ ಆಫರನ್ನೂ ನೀಡಿದ್ದಾರೆ. 

ಇಷ್ಟೇ ಅಲ್ಲದೆ ಬಶೀರ್  ಅವರ ನೆರವಿಗೆ ಕೆಲವರು ಮುಂದೆ ಬಂದಿದ್ದಾರೆ. ಪುಣೆಯ ವಿನುತಾ ಮಲ್ಯ ಮತ್ತವರ ಗೆಳೆಯರು ಬಶೀರ್ ಅವರ 5-6 ತಿಂಗಳ ಮನೆ ಸಾಲದ ಕಂತು ಪಾವತಿಸಲು ಮುಂದೆ ಬಂದಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಇನ್ನಾದರೂ ಮಹಾನ್ ಚೇತನ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಯಾವ ಉದ್ದೇಶವಿಟ್ಟು ಕೊಂಡು ಕೆನರಾ ಬ್ಯಾಂಕ್ ಸ್ಥಾಪಿಸಿದ್ದರು ಎನ್ನುವುದು ಸ್ವಲ್ಪ ಮಟ್ಟಿಗಾದರೂ ಅರ್ಥ ಮಾಡಿಕೊಳ್ಳುವುದು ಉತ್ತಮ.

ಇತ್ತೀಚಿನ ಸುದ್ದಿ

ಜಾಹೀರಾತು