12:15 AM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಸಾಲ ಖಾತೆಗೆ ಕೊರೊನಾ ಪರಿಹಾರ ಧನ ವರ್ಗಾಯಿಸಿದ ಕೆನರಾ ಬ್ಯಾಂಕ್: ಆಟೋ ಚಾಲಕನ ಕಣ್ಣೀರ ಕಥೆ ವೈರಲ್ ಆಗುತ್ತಿದ್ದಂತೆ ಹಣ ಮರು ವರ್ಗಾವಣೆ !!

25/06/2021, 15:03

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಬಡಪಾಯಿ ಆ ಆಟೋ ಚಾಲಕನ ಬ್ಯಾಂಕ್ ಅಕೌಂಟ್ ನಲ್ಲಿದ್ದ ಒಟ್ಟು 5700 ರೂಪಾಯಿ ಮಂಗಮಾಯವಾಗಿತ್ತು. ಕೊರೊನಾದ ಕಷ್ಟ ಕಾಲಕ್ಕೆ ಅಂತ ಮಡಗಿಟ್ಟ ಆ ಹಣ ಇದ್ದಕ್ಕಿದ್ದ ಹಾಗೆ ಮಾಯವಾಗಿ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಕಾಣಿಸುತ್ತಿತ್ತು. ಹಾಗೆಂತ ಆ ಬಡಪಾಯಿಯ ಖಾತೆಯಿಂದ ನೈಜಿರಿಯನ್ ಫ್ರಾಡ್ ಗಳಾಗಲಿ, ದೇಶದೊಳಗಿನ ಹ್ಯಾಕರ್ ಗಳಾಗಲಿ ಹಣ ಲಪಟಾಯಿಸಿಲ್ಲ. ಬದಲಿಗೆ ಆಟೋ ಚಾಲಕ

ಖಾತೆ ಹೊಂದಿದ್ದ ರಾಷ್ಟ್ರೀಕೃತ ಬ್ಯಾಂಕ್ ನ ಅಧಿಕಾರಿಗಳೇ ಹಣ ವರ್ಗಾಯಿಸಿದ್ದರು. ದಿನದ ತುತ್ತು ಕೂಳಿಗೆ ಅಂತ ಜೋಪಾನ ಮಾಡಿಟ್ಟ ಆ ಹಣವನ್ನು ಮನೆ ಕಂತು ಬಾಕಿ ಇದೆ ಅಂತ ಸಾಲದ ಖಾತೆಗೆ ಬ್ಯಾಂಕ್ ಸಿಬ್ಬಂದಿಗಳು ವರ್ಗಾಯಿಸಿದ್ದರು.

ಇದೆಲ್ಲ ನಡೆದದ್ದು ಮಂಗಳೂರು ಹೊರವಲಯದ ಬೈಕಂಪಾಡಿಯ ಕೆನರಾ ಬ್ಯಾಂಕ್ ಬ್ರಾಂಚ್ ನಲ್ಲಿ. ಬಶೀರ್ ಎಂಬ ಆಟೋ ಚಾಲಕನ ಎಸ್ ಬಿ ಖಾತೆಯಿಂದ ಹಣವನ್ನು ಸಾಲ ಖಾತೆಗೆ ವರ್ಗಾಯಿಸಲಾಗಿತ್ತು.

ಸುರತ್ಕಲ್ ಸಮೀಪದ ಕುಳಾಯಿಯ (ಸದ್ಯ ಸೂರಿಂಜೆ ನಿವಾಸಿ) ಆಟೋ ಚಾಲಕನಾದ ಬಶೀರ್ ಅವರು ಬೈಕಂಪಾಡಿಯ ಕೆನರಾ ಬ್ಯಾಂಕ್ ನಿಂದ ಮನೆ ಸಾಲ ಪಡೆದಿದ್ದರು. ಕೊರೊನಾ ಲಾಕ್ ಡೌನ್ ನಿಂದ ಬಾಡಿಗೆಯಿಲ್ಲದೆ ಅವರಿಗೆ ಮೇ ತಿಂಗಳ ಕಂತು ಕಟ್ಟಲು ಸಾಧ್ಯವಾಗಲಿಲ್ಲ. ಸಾಲ ಕೊಟ್ಟ ಕೆನರಾ ಬ್ಯಾಂಕ್ ಅಧಿಕಾರಿಗಳಲ್ಲಿ ಮೂರ್ನಾಲ್ಕು ತಿಂಗಳು ಕಂತು ಪಾವತಿಗೆ ವಿನಾಯಿತಿ ಕೇಳಿದ್ದರು. ಆದರೆ ಬ್ಯಾಂಕ್ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಬದಲಿಗೆ ಬ್ಯಾಂಕ್ ಸಿಬ್ಬಂದಿಗಳು ಬಶೀರ್  ಅವರ ಎಸ್ ಬಿ ಖಾತೆಯಲ್ಲಿದ್ದ 2700 ರೂಪಾಯಿ ಹಾಗೂ ಆಟೋ ಚಾಲಕರಿಗೆ ರಾಜ್ಯ ಸರಕಾರ ಕೊರೊನಾ ಪರಿಹಾರವಾಗಿ ನೀಡಿದ 3,000 ರೂಪಾಯಿಯನ್ನು ಮನೆ ಸಾಲಕ್ಕೆ ಜಮಾ ಮಾಡಿದ್ದರು. ಇದರಿಂದ ಬಶೀರ್ ಅವರಿಗೆ ಆಕಾಶವೇ ಕಳಚಿದಂತಾಯಿತು. ವೃದ್ದ ತಾಯಿ ಸಹಿತ 6 ಮಂದಿಯ ಕುಟುಂಬವನ್ನು ಸಾಕುವ ಜವಾಬ್ದಾರಿ ಹೊತ್ತ ಬಶೀರ್ ಅವರು ದಿಕ್ಕೇ ಕಾಣದಂತಾಗಿ ತಲೆ ಮೇಲೆ ಕೈಹೊತ್ತು ಕುಳಿತರು.

ಬಶೀರ್ ಅವರ ಕಣ್ಣೀರ ಕಥೆ ಗೊತ್ತಾಗುತ್ತಿದ್ದಂತೆ ಡಿವೈಎಫ್ ಐ ನಾಯಕ ಮುನೀರ್ ಕಾಟಿಪಳ್ಳ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದು ಬಿಟ್ಟರು. ಇದು ವ್ಯಾಪಕ ಪ್ರಚಾರ ಪಡೆಯಿತು. ಬ್ಯಾಂಕ್  ಅಧಿಕಾರಿಗಳ ಕ್ರಮದ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಬ್ಯಾಂಕ್ ಅಧಿಕಾರಿಗಳ ವಲಯದಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಯೂನಿಯನ್ ಪದಾಧಿಕಾರಿಗಳು ಬಶೀರ್ ಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು. 

ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಕೆನರಾ ಬ್ಯಾಂಕ್ ಅಧಿಕಾರಿಗಳು ಸರಕಾರದಿಂದ ಪರಿಹಾರವಾಗಿ ಬಂದಿದ್ದ 3 ಸಾವಿರ ರೂಪಾಯಿಗಳನ್ನು ಬಶೀರ್ ಖಾತೆಗೆ ಮರಳಿಸಿದ್ದಾರೆ. ಜತೆಗೆ ಮನೆ ಸಾಲ ರೀಷೆಡ್ಯೂಲ್ ಆಫರನ್ನೂ ನೀಡಿದ್ದಾರೆ. 

ಇಷ್ಟೇ ಅಲ್ಲದೆ ಬಶೀರ್  ಅವರ ನೆರವಿಗೆ ಕೆಲವರು ಮುಂದೆ ಬಂದಿದ್ದಾರೆ. ಪುಣೆಯ ವಿನುತಾ ಮಲ್ಯ ಮತ್ತವರ ಗೆಳೆಯರು ಬಶೀರ್ ಅವರ 5-6 ತಿಂಗಳ ಮನೆ ಸಾಲದ ಕಂತು ಪಾವತಿಸಲು ಮುಂದೆ ಬಂದಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಇನ್ನಾದರೂ ಮಹಾನ್ ಚೇತನ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಯಾವ ಉದ್ದೇಶವಿಟ್ಟು ಕೊಂಡು ಕೆನರಾ ಬ್ಯಾಂಕ್ ಸ್ಥಾಪಿಸಿದ್ದರು ಎನ್ನುವುದು ಸ್ವಲ್ಪ ಮಟ್ಟಿಗಾದರೂ ಅರ್ಥ ಮಾಡಿಕೊಳ್ಳುವುದು ಉತ್ತಮ.

ಇತ್ತೀಚಿನ ಸುದ್ದಿ

ಜಾಹೀರಾತು