ಇತ್ತೀಚಿನ ಸುದ್ದಿ
ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ ಸಚಿವ ಮುನಿಯಪ್ಪ!
05/06/2026, 21:29
ಬೆಂಗಳೂರು(reporterkarnataka.com): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೊದಲ ಸಚಿವ ಸಂಪುಟದ ಸಚಿವರಿಗೆ ಹಂಚಿಕೆಯಾಗಿರುವ ಖಾತೆ ಬಗ್ಗೆ ರಾಮಲಿಂಗಾರೆಡ್ಡಿ ಅಸಮಾಧಾನಗೊಂಡು ಈಗಾಗಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅದಿನ್ನು ಅಂಗೀಕಾರವಾಗಿಲ್ಲ. ಇದರ ಬೆನ್ನಲ್ಲೇ ಮೂಲ ಕಾಂಗ್ರೆಸ್ಸಿಗ ಹಾಗೂ ಹಿರಿಯ ನಾಯಕರಾದ ಕೆ.ಎಚ್. ಮುನಿಯಪ್ಪನವರೂ ತಮಗೆ ನೀಡಿರುವ ಆಹಾರ ಇಲಾಖೆ ಖಾತೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಕೆಲವೇ ಗಂಟೆಗಳಲ್ಲಿ ಯೂಟರ್ನ್ ಹೊಡೆದಿದ್ದಾರೆ.
ಐ ಆಯಮ್ ಹ್ಯಾಪಿ ಎಂದ ಮುನಿಯಪ್ಪ
ತಮಗೆ ಯಾವುದೇ ಬೇಸರವಿಲ್ಲ. ನಾನು ಖುಷಿಯಾಗಿದ್ದೇನೆ. ಐ ಆಯಮ್ ವೇರೀ ಹ್ಯಾಪಿ.. ರಾಹುಲ್ ಗಾಂಧಿ ಮತ್ತು ಸುರ್ಜೇವಾಲ ಅವರನ್ನು ಭೇಟಿಯಾಗಿ ಮಾತನಾಡಿದ್ದು, ವರಿಷ್ಠರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದ ಕಾರಣ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಲ್ಲ ಎಂದು ಹೇಳಿಕೆ ನೀಡಿರುವ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಹಸನ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಬಂಡಾಯವನ್ನು ಶಮನ ಮಾಡಲು ಒಂದು ಸಾಲಿನ ಎಚ್ಚರಿಕೆ ನೀಡಿದ್ದಾರೆ. ಸಾಧ್ಯವಾದರೆ ಮನವೊಲಿಸಿ.. ಆಗದಿದ್ದರೆ ಮುಲಾಜಿಲ್ಲದೇ ರಾಜೀನಾಮೆ ಅಂಗೀಕರಿಸಿ ಎಂದು ಸಂದೇಶ ರವಾನಿಸಿದ್ದಾರೆ. ರಾಹುಲ್ ಗಾಂಧಿಯ ಈ ವಾರ್ನಿಂಗ್ ಬೆನ್ನಲ್ಲೇ ಅವರನ್ನು ಭೇಟಿ ಮಾಡಿದ ಮುನಿಯಪ್ಪ ಅವರು ತಮಗೆ ಯಾವುದೇ ಅಸಮಾಧನ ಇಲ್ಲವೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ತಮಗೆ ಸಮಾಜ ಕಲ್ಯಾಣ ಇಲಾಖೆ ಹಂಚಿಕೆಯಾಗುವ ನಿರೀಕ್ಷೆ ಇತ್ತು ಎಂದು ಮುನಿಯಪ್ಪನವರು ಹೇಳಿಕೆ ನೀಡಿದ್ದರು.












