ಇತ್ತೀಚಿನ ಸುದ್ದಿ
ತಡರಾತ್ರಿ ಸರ್ಕಾರಿ ಆಸ್ಪತ್ರೆಗೆ ಯು.ಟಿ. ಖಾದರ್ ಭೇಟಿ: ಗರ್ಭಿಣಿಯನ್ನ ನೆಲದ ಮೇಲೆ ಕೂರಿಸಿದ್ದ ಕಂಡು ಆರೋಗ್ಯ ಸಚಿವ ಕೆಂಡಾಮಂಡಲ
05/06/2026, 10:19
ಬೆಂಗಳೂರು(reporterkarnataka.com): ನೂತನ ಸಚಿವರಿಗೆ ಖಾತೆ ಹಂಚಿಕೆಯಾಗ್ತಿದ್ದಂತೆ ಫುಲ್ ಅಲರ್ಟ್ ಆಗಿದ್ದಾರೆ. ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು ಟಿ ಖಾದರ್ ಅವರು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ.


ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಜಯನಗರ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಯುಟಿ ಖಾದರ್ ಅವರು, ಆಸ್ಪತ್ರೆ ಸಿಬ್ಬಂದಿ ಬಗ್ಗೆ ಪರಿಶೀಲನೆ, ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ವಿಧಾನ, ತುರ್ತು ಚಿಕಿತ್ಸಾ ಘಟಕದಲ್ಲಿ ಪರಿಶೀಲನೆ ನಡೆಸಿದ್ದಾರೆ.
*ಸಿಬ್ಬಂದಿಗಳಿಗೆ ಚಾಟಿ ಬೀಸಿದ ಖಾದರ್:*
ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಪರಿಶೀಲನೆ ನೂತನ ಸಚಿವ ಖಾದರ್ ಇಳಿದಿದ್ದಾರೆ. ಹಾಜರಾತಿಯಲ್ಲಿ ಗೈರಾಗಿರುವ ಸಿಬ್ಬಂದಿಗಳಿಗೆ ಖಾದರ್ ಚಾಟಿ ಬೀಸಿದ್ದಾರೆ. ಅಲ್ಲದೇ ರೋಗಿಗಳ ಬಳಿಯೂ ತೆರಳಿ ಸಚಿವ ಖಾದರ್ ಮಾಹಿತಿ ನೀಡಿದ್ದಾರೆ. ತಡರಾತ್ರಿ ಆಸ್ಪತ್ರೆ ಆವರಣದಲ್ಲಿದ್ದ ಪ್ರತಿಯೊಬ್ಬರಿಂದಲೂ ಖಾದರ್ ಮಾಹಿತಿ ಪಡೆದಿದ್ದಾರೆ.
*ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ:*
ಸಚಿವ ಖಾದರ್ ಭೇಟಿ ವೇಳೆ ಗರ್ಭಿಣಿ ನೆಲದ ಮೇಲೆ ಕುಳಿತಿರುವುದನ್ನ ಕಂಡು ಖಾದರ್ ಗರಂ ಆಗಿದ್ದಾರೆ. ಮೇಲೆ ಕೂರಿಸಿ ಎಂದು ವೈದ್ಯರು ಹಾಗೂ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ್ರು. ಹೆರಿಗೆ ಕೊಠಡಿ, ಸಿಸೇರಿಯನ್ ವಾರ್ಡ್ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಸಿದ ಖಾದರ್ ಅವ್ರು ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
*ಇಂದು ಪರಿಶೀಲನಾ ಸಭೆ:*
ಇಂದು ಬೆಳಗ್ಗೆ 10 ಗಂಟೆಗೆ ಆರೋಗ್ಯ ಸೌಧದಲ್ಲಿ ಆರೋಗ್ಯ ಇಲಾಖೆ ಪರಿಶೀಲನಾ ಸಭೆಯನ್ನ ಸಚಿವ ಯು ಟಿ ಖಾದರ್ ಕರೆದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು, ಇಲಾಖೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
*’ನೈಜವಾದ ಪರಿಸ್ಥಿತಿ ನೋಡಲು ಬಂದೆ’:*
ಆಸ್ಪತ್ರೆ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಆರೋಗ್ಯ ಸಚಿವ ಯು ಟಿ ಖಾದರ್, ಆಸ್ಪತ್ರೆಯಲ್ಲಿ ನೈಜವಾದ ಪರಿಸ್ಥಿತಿ ನೋಡಲು ಬಂದೆ. ಏನೆಲ್ಲಾ ಲೋಪದೋಷವಿದೆ ನೋಡಿದ್ದೇನೆ. ಆಸ್ಪತ್ರೆಯ ಎಲ್ಲಾ ಕಡೆ ವಿಸಿಟ್ ಮಾಡಿದ್ದು, ಇವತ್ತು ಇಬ್ಬರು ವೈದ್ಯರು ಗೈರಾಗಿದ್ರೂ ಅವರಿಗೆ ನಾಳೆ ಎಚ್ಚರಿಕೆ ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸೂಚಿಸ್ತೇನೆ ಎಂದಿದ್ದಾರೆ..
ಬೆಳಗ್ಗೆ ಬೇರೆ ಬೇರೆ ಕೆಲಸ, ಸಭೆ ಇರುತ್ತೆ. ಸರಿಯಾದ ಪಿಕ್ಚರ್ ಈ ಹೊತ್ತಲ್ಲೇ ಸಿಗೋದು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಹೆಚ್ಚು ಬರ್ತಾರೆ. ಎಷ್ಟೇ ಜನ ಬಂದ್ರೂ ವೈದ್ಯರು ಸರಿಯಾದ ಚಿಕಿತ್ಸೆ ನೀಡ್ಬೇಕು ಎಂದಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಂಬ್ಯುಲೆನ್ಸ್ ಗಳ ಹಾವಳಿ ಹೆಚ್ಚಿದ್ದು, ನಾಳೆ ಇಲಾಖೆಯ ಪರಿಶೀಲನಾ ಸಭೆಯಿದ್ದು, ಅಲ್ಲಿ ವಿಚಾರಣೆ ಮಾಡುತ್ತೇನೆ. ಯಾವುದೇ ಸಲಹೆಗಳು ಇದ್ರೂ ಅದರ ಬಗ್ಗೆ ಚರ್ಚಿಸುತ್ತೇವೆ. ವೈದ್ಯರಿಗೂ ಕೆಲಸ ಮಾಡಲು ನಿರ್ಭಯವಾದ ವಾತಾವರಣ ಸೃಷ್ಠಿಯಾಗಬೇಕು ಎಂದಿದ್ದಾರೆ.












