ಇತ್ತೀಚಿನ ಸುದ್ದಿ
ವೀರಪ್ಪನ್ ಹೇಳಿದ ಅಕ್ರಮ ಸಂಬಂಧದ ಕತೆಗೆ 30 ವರ್ಷದ ಬಳಿಕ ಕ್ಲೈಮ್ಯಾಕ್ಸ್: ಸನ್ ಟಿವಿ ವಿರುದ್ಧ ಗೆದ್ದ ಬಹುಭಾಷಾ ನಟಿ ಸುಕನ್ಯಾ
08/06/2026, 16:51
ಚೆನ್ನೈ(reporterkarnataka.com): ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾ ರಂಗದಲ್ಲಿ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ಸುಕನ್ಯಾ ಮತ್ತು ಸನ್ ಟಿವಿ ನೆಟ್ವರ್ಕ್ ನಡುವೆ ಕಳೆದ 30 ವರ್ಷಗಳಿಂದ ನಡೆಯುತ್ತಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನಟಿ ಸುಕನ್ಯಾ ಪರವಾಗಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ್ದು, ಅವರ ಘನತೆಗೆ ಧಕ್ಕೆ ತಂದ ಹಿನ್ನೆಲೆ 10 ಲಕ್ಷ ಪರಿಹಾರ ನೀಡುವಂತೆ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಕುಖ್ಯಾತ ಕ್ರಿಮಿನಲ್ ಕಾಡುಗಳ್ಳ ವೀರಪ್ಪನ್ ಅವರ ಸಂದರ್ಶನವನ್ನು ಪ್ರಸಾರ ಮಾಡಿದ್ದಕ್ಕಾಗಿ ಸನ್ ಟಿವಿ ವಿರುದ್ಧ ನಟಿ ಮಾನನಷ್ಟ ಮೊಕದ್ದೆಮ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಸೂಕ್ತ ಪರಿಶೀಲನೆ ಮಾಡದೇ ಸಂದರ್ಶನ ಪ್ರಸಾರ ಮಾಡಿ ನಟಿ ಘನತೆಗೆ ಧಕ್ಕೆ ತಂದಿದ್ದಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ ಸನ್ ಟಿವಿ ಈ ಆದೇಶದ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
*ಮೂವತ್ತು ವರ್ಷದ ಹಿಂದಿನ ಪ್ರಕಣವೇನು?:*
1996 ಏಪ್ರಿಲ್ 17ರಂದು ಸನ್ ಟಿವಿಯಲ್ಲಿ ನೆರಕ್ಕು ನೇರ್( ಫೇಸ್ ಟು ಫೇಸ್) ಎಂಬ ಕಾರ್ಯಕ್ರಮದಿಂದ ಈ ಪ್ರಕರಣದ ವಿವಾದ ಆರಂಭವಾಯಿತು. ತಮಿಳಿನ ನಕ್ಕೀರನ್ ಮ್ಯಾಗ್ಜಿನ್ ಸಂಪಾದಕ ಗೋಪಾಲನ್ ಕಾಡುಗಳ್ಳ ವೀರಪ್ಪನ್ ಅವರ ಸಂದರ್ಶನ ಮಾಡಿದ್ದರು. ಅದರಲ್ಲಿ ನಟಿ ಸುಕನ್ಯಾ ಕುರಿತಾದ ಕೆಲವು ಆಕ್ಷೇಪಾರ್ಹ ಅಂಶಗಳನ್ನು ವೀರಪ್ಪನ್ ಮಾತಾಡಿದ್ದರು. ಅದನ್ನೇ ನೇರವಾಗಿ ಸನ್ ಟಿವಿ ತನ್ನ ಕಾರ್ಯಕ್ರಮದಲ್ಲಿ ಬಿತ್ತರಿಸಿತ್ತು.
*ವೀರಪ್ಪನ್ ಮಾಡಿದ ಆರೋಪವೇನು?:*
ನಕ್ಕೀರನ್ ಗೋಪಾಲನ್ ಮಾಡಿದ ಸಂದರ್ಶನದಲ್ಲಿ ವೀರಪ್ಪನ್ ನಟಿ ಸುಕನ್ಯಾ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿದ್ದರು. ಅವರು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಪುತ್ರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದರು. 1996ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸುಕನ್ಯಾ ಅವರಿಗೆ ಸಂಬಂಧಿಸಿದ ಕೆಲವು ವೀಡಿಯೊಗಳನ್ನು ಬಳಸಲಾಗಿದೆ ಎಂದು ಹೇಳಿದ್ದರು.
ಈ ಕುರಿತು ಅಂದು ಪ್ರತಿಕ್ರಿಯಿಸಿದ್ದ ನಟಿ ವೀರಪ್ಪನ್ ಹೇಳಿಕೆಗಳು ಸಂಪೂರ್ಣ ಸುಳ್ಳು, ಆಧಾರರಹಿತವಾದ ಹೇಳಿಕೆಗಳನ್ನು ಪ್ರಸಾರ ಮಾಡಿ ಸಮಾಜದಲ್ಲಿ ತಮ್ಮ ಗೌರವ ಮತ್ತು ಖ್ಯಾತಿಗೆ ಧಕ್ಕೆ ತಂದಿದ್ದಾರೆ. ಸನ್ ಟಿವಿ ನೆಟ್ವರ್ಕ್ ವಿರುದ್ಧ ಕೆಳ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
*ನ್ಯಾಯಾಲಯದ ಆದೇಶ:*
ನಟಿ ಸುಕನ್ಯಾ ದಾಖಲಿಸಿದ್ದ ಪ್ರಕರಣವನ್ನು ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು, 2015 ರಲ್ಲಿ ಸುಕನ್ಯಾ ಪರವಾಗಿ ತೀರ್ಪು ನೀಡಿತ್ತು. ಸನ್ ಟಿವಿಗೆ 10,00,500 ರೂ. ಪರಿಹಾರವನ್ನು ನೀಡುವಂತೆ ಆದೇಶಿಸಿತು. ಇದರ ವಿರುದ್ಧ ಸನ್ ಟಿವಿ ನೆಟ್ವರ್ಕ್ ಮದ್ರಾಸ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತು.
ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಕೆ. ಕುಮರೇಶ್ ಬಾಬು ನೇತೃತ್ವದ ಪೀಠವು, ಸನ್ ಟಿವಿಯ ವಾದಗಳನ್ನು ತಿರಸ್ಕರಿಸಿತು. ಪ್ರಸಾರಕರು ಸಂದರ್ಶನವನ್ನು ಪ್ರಸಾರ ಮಾಡುವ ಮೊದಲು ಆಕ್ಷೇಪಾರ್ಹ ಮತ್ತು ಮಾನನಷ್ಟಕರ ಕಾಮೆಂಟ್ಗಳನ್ನು ಪರಿಶೀಲಿಸಲು ಮತ್ತು ತೆಗೆದುಹಾಕಲು ವಿಫಲರಾಗಿದ್ದಾರೆ ಎಂದು ಹೇಳಿತು. ಕಾರ್ಯಕ್ರಮದ ಮೇಲೆ ಸಂಪೂರ್ಣ ಸಂಪಾದಕೀಯ ನಿಯಂತ್ರಣ ಹೊಂದಿದ್ದರೂ, ವಿವಾದಾತ್ಮಕ ವಿಷಯವನ್ನು ಸಂಪಾದಿಸದೆ ಪ್ರಸಾರ ಮಾಡುವುದು ತಪ್ಪು ಎಂದು ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.














