ಇತ್ತೀಚಿನ ಸುದ್ದಿ
ಭುವನೇಶ್ವರದ ಕಳಿಂಗ ಶಿಕ್ಷಣ ಸಂಸ್ಥೆಗಳಿಗೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ಭೇಟಿ
12/08/2025, 23:01

ಲಕ್ಷಾಂತರ ಬುಡಕಟ್ಟು ಸಮುದಾಯದವರಿಗೆ ಉಚಿತವಾಗಿ ಅನ್ನ, ಅಕ್ಷರ, ವಸತಿ ಸೌಲಭ್ಯ ನೀಡುತ್ತಿರುವುದಕ್ಕೆ ಮೆಚ್ಚುಗೆ
ಭುವನೇಶ್ವರ್(reporterkarnataka.com):
ಅನ್ನ, ಅಕ್ಷರ, ವಸತಿಗೆ ದೇಶದಲ್ಲಿ ತನ್ನದೇ ಆದ ಹೆಗ್ಗುರುತುಗಳನ್ನು ಮೂಡಿಸಿರುವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಡಿ ಪರಿಗಣಿತ ವಿಶ್ವವಿದ್ಯಾಲಯವಾಗಿರುವ, ಅಸಂಖ್ಯಾತ ಬುಡಕಟ್ಟು ಸಮುದಾಯದ ಆಶಾಕಿರಣವಾಗಿರುವ ಭುವನೇಶ್ವರದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ – ಕಿಸ್, ಕಳಿಂಗ ಇನ್ಸ್ಟಿಟ್ಯೂಟ್ ಆಪ್ ಇಂಡಸ್ಟ್ರೀಯಲ್ ಟೆಕ್ನಾಲಜಿ -–ಕಿಟ್ ಮತ್ತು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ಭೇಟಿ ನೀಡಿದರು.
ಎರಡು ದಿನಗಳ ಕಾಲ ಭುವನೇಶ್ವರ ಪ್ರವಾಸ ಕೈಗೊಂಡಿರುವ ಜಸ್ಟೀಸ್ ಸಂತೋಷ್ ಹೆಗ್ಡೆ, ಮಾನವೀಯತೆಗೆ ಹೆಸರಾಗಿರುವ, ಅನ್ನ, ಅಕ್ಷರ, ವಸತಿ, ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಹೆಗ್ಗುರುತುಗಳನ್ನು ಮೂಡಿಸಿ ಮುನ್ನಡೆಯುತ್ತಿರುವ ಶಿಕ್ಷಣ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಜೊತೆ ಮಗುವಾಗಿ ಬೆರೆತ ಅವರು, ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು.
ಶಿಕ್ಷಣ ಸಂಸ್ಥೆಗಳ ಸಾರಥ್ಯ ವಹಿಸಿರುವ ಅಚ್ಯುತ ಸಮಂತ ಅವರು 34 ವರ್ಷಗಳಿಂದ ಬಡ ಬುಡಕಟ್ಟು ಸಮುದಾಯದ ಕಿಟ್, ಕಿಸ್, ಕಿಮ್ಸ್ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ, ಊಟ, ವಸತಿ, ಮತ್ತು ಅರೋಗ್ಯ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಕ್ರೀಡೆ, ಸಂಗೀತ, ಉದ್ಯಮ, ವೃತ್ತಿಪರರು, ಅಧಿಕಾರಿ ವಲಯ ಇನ್ನಿತರ ಕ್ಷೇತ್ರಗಳಲ್ಲಿ ಮುನ್ನುಗ್ಗುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಸುಮಾರು 1 ಲಕ್ಷ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳಾಗಿ ಮಾಡಿರುವ ಅಚ್ಯುತ ಸಮಂತ ಅವರ ಸಾಧನೆಗೆ ಇಡೀ ವಿಶ್ವವೇ ಬೆರಗಾಗಿ ನೋಡುತ್ತಿದೆ ಮತ್ತು ಆಶೀರ್ವದಿಸುತ್ತಿದೆ.
ಕಿಸ್ ಸಂಸ್ಥೆ 2015ರಿಂದ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಯ ವಿಶೇಷ ಸಲಹಾ ಸ್ಥಾನಮಾನವನ್ನು ಪಡೆದಿದೆ. ಇದು ವಿಶ್ವಸಂಸ್ಥೆಯ ಸಾರ್ವಜನಿಕ ಮಾಹಿತಿ ಇಲಾಖೆಯ (ಯು.ಎನ್.ಡಿ.ಪಿ.ಐ) ಸಹಯೋಗಿ ಸಂಸ್ಥೆಯಾಗಿದೆ. ಮುಂದಿನ 10 ವರ್ಷಗಳಲ್ಲಿ 2 ಲಕ್ಷ ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡುವ ಯೋಜನೆ, 10 ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆಯುವ, ಹತ್ವಾಕಾಂಕ್ಷೆ ಗುರಿ ಹೊಂದಿದೆ. ಒಡಿಶಾದ ಎಲ್ಲಾ 30 ಜಿಲ್ಲೆಗಳಲ್ಲೂ ಶಾಖೆ ಆರಂಭಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಸ್ಟೀಸ್ ಸಂತೋಷ್ ಹೆಗ್ಡೆ ಹೇಳಿದರು.