ಇತ್ತೀಚಿನ ಸುದ್ದಿ
Kodagu | ಮಡಿಕೇರಿ: ರಾತ್ರಿ ವೇಳೆ ಕಾಡಾನೆ ದಾಳಿಗೆ ಚೆoಬು ಗ್ರಾಮದ ರೈತ ದಾರುಣ ಸಾವು
07/08/2025, 10:42

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ತಾಲ್ಲೂಕು ಚೆoಬು ಗ್ರಾಮದ ದಬ್ಬಡ್ಕ ಭಾಗದಲ್ಲಿ ಕಳೆದ ರಾತ್ರಿ 9 ಗಂಟೆಗೆ ಆನೆ ದಾಳಿಯಿಂದ ಸ್ಥಳೀಯ ಕೊಪ್ಪದ ಶಿವಪ್ಪ (72) ಎಂಬ ರೈತ ಮೃತಪಟ್ಟ ದಾರುಣ ಘಟನೆ ನಡೆದಿದೆ.
ರಾತ್ರಿ 8:30 ಗಂಟೆಗೆ ಕೊಪ್ಪದ ಶಿವಪ್ಪ ತನ್ನ ಮನೆಯ ಮುಂಭಾಗದಲ್ಲಿ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದು ಮನೆಯ ಮುಂಭಾಗದಿಂದ 30 ಮೀಟರ್ ದೂರದಲ್ಲಿ ನಡೆದು ಕೊಂಡು ಹೋದಾಗ ಕಾಡಾನೆ ದಿಢೀರ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಆನೆ ದಾಳಿಯಿಂದ ಎದೆ ಭಾಗ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳು ಉಂಟಾಗಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಶಿವಪ್ಪ ಮೃತಪಟ್ಟಿದ್ದಾರೆ.
ಘಟನೆ ಸುದ್ದಿ ತಿಳಿದೊಡನೆ ಶಾಸಕ ಎ. ಎಸ್. ಪೊನ್ನಣ್ಣನವರ ಸೂಚನೆ ಮೇರೆಗೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಶವವನ್ನು ಇರಿಸಿದ ಸಂಪಾಜೆ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರ ಪಡೆದುಕೊಂಡರು.
ಆನೆ ಹಾವಳಿಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದಾಗ ಅವರನ್ನು ಸಮಾಧಾನಪಡಿಸಿ ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪರಿಣಾಮ ಕೂಡಲೇ ಆ ಭಾಗದಲ್ಲಿ ಇರುವ ಒಂದು ಪುಂಡಾನೆಯನ್ನು ಹಿಡಿಯಲು ಬೇಕಾದ ಎಲ್ಲಾ ಇಲಾಖೆ ಕಾನೂನುಗಳನ್ನು ಈಡೇರಿಸಿ ಶೀಘ್ರದಲ್ಲಿ ಆನೆ ಹಿಡಿಯಲು ಅನುಮತಿ ಕೊಡಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಸಂಕೇತ್ ಪೂವಯ್ಯ ಹೇಳಿದ್ದಾರೆ.
ಆನೆ ಓಡಿಸುವ ಕಾರ್ಯಾಚರಣೆ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಈಗಾಗಲೇ ಸೂಚಿಸಿದರಲ್ಲದೆ ಅರಣ್ಯ ಇಲಾಖೆಗೆ ಹೆಚ್ಚು ಸಿಬ್ಬಂದಿ ಒದಗಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ ಎಂದು ಗ್ರಾಮಸ್ಥರಿಗೆ ಸಂಕೇತ್ ಪೂವಯ್ಯ ಭರವಸೆಯನ್ನು ಈ ಸಂದರ್ಭ ನೀಡಿದರು.