9:11 PM Sunday11 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ಚಂದನದಿಂದ ‘ಬದುಕ ಬಂಡಿ’, ‘ಸ್ಮಾರ್ಟ್ ಸೊಸೆಯಂದಿರು’ ಶೀಘ್ರದಲ್ಲೇ ಪ್ರಸಾರ; ತೆರೆಯ ಮೇಲೆ ಮೂಡಿ ಬರಲಿದೆ ಭಾವ ನವ ನವೀನ, ಸ್ಟಾಂಡ್ ಅಪ್ ಕಾಮಿಡಿ ಶೋ

03/06/2025, 23:44

ಬೆಂಗಳೂರು(reporterkarnataka.com): ದೇಶದ ಅಧಿಕೃತ ವಾಹಿನಿ ದೂರದರ್ಶನ ಚಂದನ ವಾಹಿನಿಯಿಂದ ನಾಡು – ನುಡಿ – ಸಂಸ್ಕೃತಿ, ಬಾಂಧವ್ಯಗಳನ್ನು ಬೆಸೆಯುವ ವಿನೂತನ 4 ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಶೀಘ್ರದಲ್ಲಿ ಇವು ಕಿರುತೆರೆಯ ಮೇಲೆ ಮೂಡಿಬರಲಿವೆ ಎಂದು ದೂರದರ್ಶನ ದಕ್ಷಿಣ ವಲಯದ ಉಪ ಮಹಾನಿರ್ದೇಶಕ ಭಾಗ್ಯವಾನ್ ಹೇಳಿದ್ದಾರೆ.
ಚಂದನ ವಾಹಿನಿಯ ಸ್ಟುಡಿಯೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬದುಕ ಬಂಡಿ – ಬೀದಿ ಬದಿಯ ಕಥೆಗಳು “,” ಸ್ಮಾರ್ಟ್ ಸೊಸೆಯಂದಿರು “, ” ಭಾವ ನವನವೀನ” ಹಾಗೂ ” ಸ್ಟಾಂಡ್ ಅಪ್ ಕಾಮಿಡಿ – ರಿಯಾಲಿಟಿ ಶೋ ” ಕಾರ್ಯಕ್ರಮಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ. ಪ್ರತಿಯೊಂದು ಕಾರ್ಯಕ್ರಮವನ್ನು ವ್ಯಾಪಕ ಸಂಶೋಧನೆ, ಹಿನ್ನೆಲೆ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಪೂರಕವಾಗಿ ಸಿದ್ಧಪಡಿಸಲಾಗುತ್ತಿದೆ ಎಂದರು.
ರಸ್ತೆ ಬದಿಯ ಬದುಕಿನ ಕಥೆಗಳನ್ನು ಅನಾವರಣಗೊಳಿಸುವ ‘ಬದುಕ ಬಂಡಿ’, ಮಾನವೀಯ ಸಂವೇದನೆಗಳನ್ನು ಆಧರಿಸಿರುತ್ತದೆ. ಆಯಾ ಪ್ರದೇಶದ ವೈವಿಧ್ಯತೆ, ಸಂಸ್ಕೃತಿ, ಇತಿಹಾಸ, ಜನಜೀವನವನ್ನು ಇದು ಬಿಂಬಿಸಲಿದೆ. ಈ ಕಾರ್ಯಕ್ರಮಕ್ಕೆ ಆಳವಾದ ಅಧ್ಯಯನದ ಮೂಲಕ ಸಾಮಾಜಿಕ ಇತಿಹಾಸಕಾರ ಧರ್ಮೇಂದ್ರ ಕುಮಾರ್ ನಿರೂಪಣೆ ಮಾಡಲಿದ್ದಾರೆ ಎಂದರು.


ಆಧುನಿಕ ಜೀವನದಲ್ಲಿ ಕಳೆದುಹೋಗುತ್ತಿರುವ ಬಾಂಧ್ಯವಗಳು ಹಾಗೂ ನಶಿಸುತ್ತಿರುವ ಕೂಡು ಕುಟುಂಬಗಳ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು “ಸ್ಮಾರ್ಟ್ ಸೊಸೆಯಂದಿರು” ಕಾರ್ಯಕ್ರಮ ವಿನೂತನ ರೀತಿಯಲ್ಲಿ ರೂಪುಗೊಂಡಿದೆ. ಜೊತೆಗೆ, ಹಾಸ್ಯ, ವಿನೋದ ಆಟಗಳ ಜೊತೆಗೆ ಖ್ಯಾತ ಮನಶಾಸ್ತ್ರಜ್ಞ ಡಾ. ಸಿ. ಆರ್. ಚಂದ್ರಶೇಖರ್ ಅವರು ಪ್ರತಿಯೊಂದು ಕಾರ್ಯಕ್ರಮಕ್ಕೆ ಕೌಟಿಂಬಿಕ ಸಂಬಂಧಗಳನ್ನು ಬಲಪಡಿಸುವ ಕುರಿತು ಕಿವಿಮಾತು ಹೇಳುವ ಚಿತ್ರಣವನ್ನು ಇದು ಒಳಗೊಂಡಿದೆ ಎಂದರು.
ಸಹಸ್ರಾರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯದ ಒಳನೋಟ, ಅರ್ಥ ಮತ್ತು ಕಸುವನ್ನು ಒಳಗೊಂಡ ” ಭಾವ ನವ ನವೀನ ” ಕಾರ್ಯಕ್ರಮ ರೂಪಿಸಲಾಗಿದೆ. ಕನ್ನಡ ಸಾರಸ್ವತ ಲೋಕದ ವಿವಿಧ ಭಾವಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿಸಿ, ಪ್ರಸ್ತುತ ಪಡಿಸಲಾಗುವುದು. ಆರಂಭದಲ್ಲಿ, ಸತ್ಯೇಶ್ ಎನ್. ಬೆಳ್ಳೂರ್ ಅವರ ” ಒಂದು ಸಾಲಿನ ಕವಿತೆ”ಗಳಿಗೆ ಖ್ಯಾತ ಸಂಯೋಜಕ ಮ್ಯಾಂಡೊಲಿನ್ ಪ್ರಸಾದ್ ಸಂಗೀತ ನೀಡಿದ್ದು, ಗಾಯಕ – ಸಂಯೋಜಕದ್ವಯರಾದ ಪ್ರಾಣೇಶ್ ಬಿ. ವಿ. ಹಾಗೂ ಪ್ರದೀಪ್ ಬಿ. ವಿ. ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.
“ಆರೋಗ್ಯಕರ ಹಾಸ್ಯ ವಲಯದಲ್ಲಿ, ಆರೋಗ್ಯಕರ ಸ್ಪರ್ಧೆ” ಪರಿಕಲ್ಪನೆಯಡಿ, ” ಸ್ಟಾಂಡ್ ಅಪ್ ಕಾಮಿಡಿ ” ಎಂಬ ನವೀನ ಕಾರ್ಯಕ್ರಮವನ್ನು ರಚಿಸಲಾಗಿದೆ. ಬೆಂಗಳೂರು ದೂರದರ್ಶನದಲ್ಲೇ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ 20 ಹಾಸ್ಯ ಪಟುಗಳನ್ನು ಹೆಕ್ಕಿ ತೆಗೆಯಲಾಗುವುದು. 32 ಸಂಚಿಕೆಗಳ ಈ ರಿಯಾಲಿಟಿ ಶೋಗೆ ಪ್ರಸಿದ್ಧ ಹಾಸ್ಯ ಕಲಾವಿದರಾದ ಸುಧಾ ಬರಗೂರು ಹಾಗೂ ಗಂಗಾವತಿ ಪ್ರಾಣೇಶ್ ತೀರ್ಪುಗಾರರಾಗಿರಲಿದ್ದಾರೆ. ದೂರದರ್ಶನದಲ್ಲೇ ಮೊದಲ ಬಾರಿಗೆ ಹಾಸ್ಯ ರಿಯಾಲಿಟಿ ಶೋ ಪ್ರಸಾರಗೊಳಲಿದ್ದು, ವಿಜೇತರಿಗೆ ಉತ್ತಮ ಮೊತ್ತದ ನಗದು ಬಹುಮಾನವನ್ನು ನೀಡಲಾಗುವುದು ಎಂದು ಭಾಗ್ಯವಾನ್ ತಿಳಿಸಿದರು.
ದೂರದರ್ಶನ ಕೇಂದ್ರದ ಅಭಿಯಂತರ ಮಹಾನಿರ್ದೇಶಕರಾದ ಎ. ಹನುಮಂತ್ ಮಾತನಾಡಿ, ಈ ಎಲ್ಲಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ತಾಂತ್ರಿಕ ಸಹಕಾರ, ನೆರವು ಹಾಗೂ ಬೆಂಬಲ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೂರದರ್ಶನ ಚಂದನ ವಾಹಿನಿಯ ಸುದ್ದಿ ವಿಭಾಗದ ನಿರ್ದೇಶಕರಾದ ಕೇಶವ ಮೂರ್ತಿ ಬಿ. ಎ., ಹಿರಿಯ ಕಾರ್ಯಕ್ರಮ ನಿರ್ವಾಹಕಿ ಎಚ್. ಎನ್. ಆರತಿ, ಕಾರ್ಯಕ್ರಮ ನಿರ್ಮಾಪಕರುಗಳಾದ ಚಂದ್ರ ಭೌಮಿಕ್, ಸುಧಾಕರನ್ ಪ್ರಿಯ, ಎಂ. ಗೋವಿಂದರಾಜು ಹಾಗೂ ಲಕ್ಷ್ಮಿ ಕಾರಂತ್ ಎಂ. ಎಸ್. ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು