2:16 PM Sunday26 - April 2026
ಬ್ರೇಕಿಂಗ್ ನ್ಯೂಸ್
ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು… ಶಿವಮೊಗ್ಗ | ಹುಡುಗಿ ವಿಚಾರಕ್ಕೆ ಅಪ್ರಾಪ್ತನಿಗೆ ಲಾಂಗಿನೇಟು: ತಲೆಗೇ ಸಿಲುಕಿಕೊಂಡ ಲಾಂಗ್ ಕಾಂತಾರ ದೈವ ಪಾತ್ರದ ಅನುಕರಣೆ ವಿವಾದ: ಬಾಲಿವುಡ್ ನಟ ರಣವೀರ್ ಚಾಮುಂಡೇಶ್ವರಿಯಲ್ಲಿ ಕ್ಷಮೆ… ಚಿಕ್ಕಮಗಳೂರು: ಸೊಪ್ಪು ತರಲು ಹೋದ ವೃದ್ಧೆ ಹೇಮಾವತಿ ನದಿಯಲ್ಲಿ ನೀರುಪಾಲು ಮೇಕೆದಾಟು ಕಾವೇರಿ ಸಂಗಮದಲ್ಲಿ ಆಟವಾಡುತ್ತಿದ್ದವರ ಮೇಲೆ ನುಗ್ಗಿಬಂದ ಕಾಡಾನೆ: ಎದ್ದು ಬಿದ್ದೋಡಿದ ಪ್ರವಾಸಿಗರು Kodagu | ವಿರಾಜಪೇಟೆ: 9 ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ ಅರಣ್ಯ ಇಲಾಖೆ ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ?

ಇತ್ತೀಚಿನ ಸುದ್ದಿ

ಕನ್ನಡಿಗರ ವರ್ತಮಾನದ ಸಂಕಷ್ಟಕ್ಕೆ ಗಡಿ ರೇಖೆಗಳಿಲ್ಲ: ಡಾ.ಪುರುಷೋತ್ತಮ ಬಿಳಿಮಲೆ

05/01/2025, 09:47

ಹೈದರಾಬಾದ್(reporterkarnataka.com):ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ ಕುರಿತಂತೆ ಹೆಮ್ಮೆಯನ್ನು ಹೊಂದಿರುವ ಕನ್ನಡಿಗರು ಒಳನಾಡಿನಲ್ಲಿಯೂ ಸಂಕಷ್ಟದಲ್ಲಿದ್ದು, ಕನ್ನಡದ ಸಮಸ್ಯೆಗಳನ್ನು ಎಲ್ಲ ಕನ್ನಡಿಗರು ಸಂಘಟಿತರಾಗಿ ಪರಿಹರಿಸಿಕೊಳ್ಳಬೇಕಾದ ಸಂದರ್ಭ ಇದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿದ್ದಾರೆ.


ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಶನಿವಾರ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಕನ್ನಡಿಗರ ಹಿತಕಾಯಲು ಸಿದ್ಧವಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಸಂಪರ್ಕಕೊಂಡಿಯ ಕೆಲಸವನ್ನು ಮುಂದುವರೆಸಲಿದೆ ಎಂದರು.
ರಾಜ್ಯದಲ್ಲಿ 7 ಸಾವಿರ ಏಕೋಪಾಧ್ಯಾಯ ಶಾಲೆಗಳು, 55 ಸಾವಿರ ಶಿಕ್ಷಕರ ಖಾಲಿ ಹುದ್ದೆಗಳು, ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿತವಾಗುತ್ತಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಗಮನಿಸಿದಲ್ಲಿ ಕನ್ನಡದ ಮುಂದಿನ ದಿನಗಳ ಸ್ಥಿತಿ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದ ಡಾ.ಬಿಳಿಮಲೆ, ಇದು ಪ್ರವಾಹದ ವಿರುದ್ಧ ಈಜುವ ಕೆಲಸವಾಗಿದ್ದು, ಸಂಘಟಿತ ಹೋರಾಟವೇ ಪರಿಣಾಮಕಾರಿಯಾದ ಫಲಿತಾಂಶವನ್ನು ಒದಗಿಸಲು ಸಾಧ್ಯವೆಂದರು.
*ದೇಶದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ವಸತಿನಿಲಯಗಳಲ್ಲಿ ಉಚಿತ ಪ್ರವೇಶ:*
ಕರ್ನಾಟಕದಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರೆಸ ಬಯಸುವ ಗಡಿನಾಡು, ಹೊರನಾಡು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಯಾವುದೇ ನಿರ್ಬಂಧಗಳನ್ನು ಹೇರದೆ ಅವಕಾಶ ಕಲ್ಪಿಸಿಕೊಡಲು ಈಗಾಗಲೇ ರಾಜ್ಯ ಸರ್ಕಾರವು ತೀರ್ಮಾನಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಂಡ ಡಾ.ಬಿಳಿಮಲೆ, ಈ ಕುರಿತಂತೆ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪನವರು ತಮಗೆ ಸ್ಪಷ್ಟ ಭರವಸೆಯನ್ನು ನೀಡಿದ್ದು, ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಇದು ಅನುಷ್ಠಾನಗೊಳ್ಳಲಿದೆ ಎಂದರು
*ಆಂಗ್ಲ ಭಾಷೆಯ ವ್ಯಾಮೋಹ ಬೇಡ- ಡಾ. ಬೈರಮಂಗಲ ರಾಮೇಗೌಡ:*
ಕನ್ನಡದ ಪ್ರಾಚೀನತೆಗೆ ಮತ್ತು ಅದರ ಶ್ರೀಮಂತಿಕೆಗೆ ಯಾವುದೇ ಸಾಟಿಯಲ್ಲದ ಇಂಗ್ಲಿಷ್ ಭಾಷೆಯನ್ನು ಓಲೈಸುವ ವಾತಾವರಣ ಎಲ್ಲ ಕಡೆ ಸೃಷ್ಟಿಯಾಗಿರುವುದು ದುರದೃಷ್ಟಕರವೆಂದ ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಎಲ್ಲ ಭಾಷೆಗಳಿಗೆ ಕಂಟಕಪ್ರಾಯವಾಗಿರುವ ಇಂಗ್ಲಿಷ್ ಅನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವಿಶೇಷ ಮಹತ್ವ ಹೊಂದಿದೆ. ಕನ್ನಡ ಭಾಷೆಯ ಜೀವಂತಿಕೆಯನ್ನು ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಅದನ್ನು ದಾಟಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು.
*ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ:*
ಹೈದರಾಬಾದ್ ನ ಕೇಂದ್ರೀಯ ಪತ್ತೇದಾರಿ ತರಬೇತಿ ಸಂಸ್ಥೆಯ ನಿರ್ದೇಶಕ ರಾಜಶೇಖರ .ಎನ್ (ಭಾ.ಪೋ.ಸೇ.) ರವರು, ಕನ್ನಡ ಮಾಧ್ಯಮದಲ್ಲಿ ಓದಿದರೆ ಉನ್ನತ ವ್ಯಾಸಂಗವಾಗಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಲಿ ಸಾಧ್ಯವಿಲ್ಲವೆನ್ನುವ ನಂಬಿಕೆಯನ್ನು ಮಕ್ಕಳು ಮತ್ತು ಪೋಷಕರು ಬಿಡಬೇಕು. ಕನ್ನಡದ ಮೂಲಕವೂ ಯಶಸ್ಸು ಸಾಧ್ಯವೆನ್ನುವುದಕ್ಕೆ ಮಾದರಿಯಾಗಿ ತಾನೇ ಇದ್ದೇನೆಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಸಿ ಹಾಗೂ ಎಚ್.ಎಸ್.ಸಿ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿ ಅತಿಹೆಚ್ಚು ಅಂಕಗಳಿಸಿದ ಆಂಧ್ರ ಪ್ರದೇಶ ರಾಜ್ಯದ 52 ಹಾಗೂ ತೆಲಂಗಾಣ ರಾಜ್ಯದ 17 ವಿದ್ಯಾರ್ಥಿಗಳು ಸೇರಿ 69 ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಟಿ. ತಿಮ್ಮೇಶ್, ಡಾ.ರವಿಕುಮಾರ್ ನೀಹ, ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಲಿಂಗಪ್ಪ ಗೋನಾಳ್, ತೆಲಂಗಾಣ ಗಡಿನಾಡು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಗುಡಗುಂಟಿ ವಿಠ್ಠಲ ಜೋಶಿ, ಹೈದರಾಬಾದ್ ನ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ದೂರಿ, ಗಡಿನಾಡು ಕನ್ನಡ ಸಂಘ (ಕೃಷ್ಣಾ) ಗೌರವಾಧ್ಯಕ್ಷ ಎಸ್.ರಾಮಲಿಂಗಪ್ಪ, ಅನಂತಪುರ ಜಿಲ್ಲೆಯ ಜಿಲ್ಲಾ ಪರಿಷತ್ ಪ್ರೌಢಶಾಲೆ ಶಿಕ್ಷಕರಾದ ಗಿರಿಜಾಪತಿ ಮಠ್, ಹೈದರಾಬಾದ್ನಲ್ಲಿರುವ ಬಸವ ಕೇಂದ್ರದ ಅಧ್ಯಕ್ಷ ನಾಗನಾಥ ಮಾಶೆಟ್ಟಿ, ಉಪನ್ಯಾಸಕರಾದ ಎಲ್. ಅಕ್ಷಯ್ ಕುಮಾರ್ ಅವರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು