ಇತ್ತೀಚಿನ ಸುದ್ದಿ
ಗೋವಾದಲ್ಲಿ 15ನೇ ಬಾರಿಗೆ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಬೆಳಗಾವಿಯ ಧನ್ಯ ಕುಮಾರ್ ಪಾಟೀಲ್ ಆಯ್ಕೆ
09/10/2024, 19:56

ಮಹೇಶ್ ಬಾಬು ಸುರ್ವೆ ಪಣಜಿ
info.reporterkarnataka@gmail.com
ಗೋವಾದ ಬಿಚ್ಚೋಲಿಯ ಹೀರಾಬಾಯಿ ಸಭಾಂಗಣದಲ್ಲಿ 15ನೇ ಬಾರಿಗೆ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಅಕ್ಟೋಬರ್ 27ರಂದು ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೆಳಗಾವಿಯ ಧನ್ಯ ಕುಮಾರ್ ಪಾಟೀಲ್ ಆಯ್ಕೆಯಾಗಿದ್ದಾರೆ.
ಹನುಮಂತಪ್ಪ ರೆಡ್ಡಿ ಶಿರೂರು ಅವರ ಅಧ್ಯಕ್ಷತೆಯ ಬಿಚ್ಚೋಲಿಯಂ ಕರ್ಮಭೂಮಿ ಕನ್ನಡ ಸಂಘ ಮತ್ತು ಮಹೇಶ್ ಬಾಬು ಸುರ್ವೆ ಸಂಚಾಲಕತ್ವದ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಸಂಸ್ಥೆ
ಜೊತೆಗೂಡಿ ಅಖಿಲ ಗೋವಾ ಕನ್ನಡ ಮಹಾಸಂಘ
ಸಹಕಾರದಲ್ಲಿ 15ನೇ ಬಾರಿಗೆ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ನಡೆಸಲಿದೆ.
ನಿನ್ನೆ ನಡೆದ ಸಮ್ಮೇಳನದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬೆಳಗಾವಿಯ ನ್ಯಾಯವಾದಿ ಸಂಸ್ಕೃತಿಕ ಚಿಂತಕ ಸಾಹಿತಿ ಕನ್ನಡ ಪರ ಹೋರಾಟಗಾರ ನುಡಿ ಸೇವಕ ಧನ್ಯ ಕುಮಾರ್ ಪಾಟೀಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಳೆದ 14 ವರ್ಷಗಳಿಂದಲೂ ಗೋವಾದಲ್ಲಿ ನಿರಂತರವಾಗಿ ಅಲ್ಲಿಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಮ್ಮೇಳನಗಳನ್ನು ಮಾಡುತ್ತಾ ಬಂದಿದೆ. ಅದರ ಜೊತೆಗೆ ಗೋವಾದಲ್ಲಿನ ಕನ್ನಡಿಗರನ್ನ ಒಗ್ಗೂಡಿಸಿ ಕನ್ನಡಮಯ ವಾತಾವರಣವನ್ನು ನಿರ್ಮಿಸುವಲ್ಲಿ ಈ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಪಾತ್ರ ಪ್ರಮುಖವಾದದ್ದು.
ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಬಗ್ಗೆ ಪ್ರತಿಯೊಂದು ಸಮ್ಮೇಳನಗಳಲ್ಲಿ ಪ್ರಸ್ತಾಪಿಸಿ ಗೋವಾ ಕನ್ನಡಿಗರನ್ನು ಜಾಗೃತಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಈ ಬಾರಿ ನಡೆಯುವ 15ನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಮಹತ್ವ ಪಡೆದುಕೊಂಡಿದೆ.
ಕರ್ಮಭೂಮಿ ಕನ್ನಡ ಸಂಘದ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯಲಿದೆ. ಗೋವಾದ 15ನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ ಅವರು ಉದ್ಘಾಟಿಸಲಿದ್ದಾರೆ. 501 ಮಹಿಳೆಯರು ಪೂರ್ಣ ಕುಂಭ ದೊಂದಿಗೆ ವೀರಗಾಸೆ, ಡೊಳ್ಳು, ತಮಟೆ, ಕೋಲಾಟ ತಂಡಗಳೊಂದಿಗೆ ಭವ್ಯವಾದ ಮೆರವಣಿಗೆಯನ್ನು ಆಯೋಜಿಸಲಾಗಿದೆ. ವೇದಿಕೆಯಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 25ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಲಿವೆ. ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕ ರಾಜ್ಯ ಸಾಧಕರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.