12:33 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಜೀತ ಇನ್ನೂ ಜೀವಂತ!: ಸುಳ್ಯದ ಕರಿಕಳಂನಲ್ಲಿ ಬಾಲ ಕಾರ್ಮಿಕ ಪದ್ಧತಿ ಬೆಳಕಿಗೆ; ಜಮೀನ್ದಾರನ ಮನೆಯಲ್ಲಿ 8-10 ಮಕ್ಕಳು ಪತ್ತೆ !!

10/07/2021, 20:50

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಬುದ್ಧಿವಂತರ ನಾಡು ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲರು ತಲೆ ತಗ್ಗಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಬಚ್ ಪನ್ ಬಚಾವೋ ಸಂಸ್ಥೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಸೇರಿದಂತೆ ವಿವಿಧ ಇಲಾಖೆಗಳು ನಡೆಸಿದ ದಾಳಿಯಿಂದ ಇಲ್ಲಿನ ಸುಳ್ಯ ತಾಲೂಕಿನ ಪಂಜ ಗ್ರಾಮದ ಕರಿಕಳಂ ಎಂಬಲ್ಲಿ ಜೀತ ಬಾಲ ಕಾರ್ಮಿಕ ಪದ್ದತಿ ಬೆಳಕಿಗೆ ಬಂದಿದೆ.

4ರ ಹರೆಯದ ಮಕ್ಕಳಿಂದ ಆರಂಭಗೊಂಡು ಸುಮಾರು 10-12 ವರ್ಷದೊಳಗಿನ 8 -10 ಮಕ್ಕಳು ಕರಿಕಳಂನ ಜಮೀನುದಾರ ವಿಶ್ವನಾಥ ಭಟ್ ಅವರ ಮನೆಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ಇಟ್ಟುಕೊಂಡ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಕೂಡ ಇವರ ಬಳಿ ಇಲ್ಲದಿರುವುದರಿಂದ ಪ್ರಕರಣ ದಾಖಲಿಸಲಾಗಿದೆ.

ವಿವಿಧ ಇಲಾಖೆಗಳು ನಡೆಸಿದ ಸಂಯುಕ್ತ ಕಾರ್ಯಾಚರಣೆ ವೇಳೆ ವಿಶ್ವನಾಥ ಭಟ್ ದಂಪತಿ ಕಾನೂನುಬಾಹಿರವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ದುಡಿಸುವುದು ಬೆಳಕಿಗೆ ಬಂತು. ಈ ಮಕ್ಕಳ ತಂಡದಲ್ಲಿ 4ರ ಹರೆಯದ ಮಗು ಕೂಡ ಇದೆ ಎಂದರೆ ಯಾರು ಕೂಡ ಒಂದು ಕ್ಷಣ ಬೆಚ್ಚಿಬೀಳಬಹುದು.

ಮಕ್ಕಳನ್ನು ಜೀತ ಕಾರ್ಮಿಕತೆಗೆ ಒಳಪಡಿಸಿದ ಕುರಿತು ಸಾಮಾಜಿಕ ಸಂಘಟನೆಯಾದ ನೀತಿ ತಂಡ ಬಚ್ ಪನ್ ಬಚಾವೋ ಸಂಸ್ಥೆಗೆ ದೂರು ನೀಡಿತ್ತು. ಬಚ್ ಪನ್ ಬಚಾವೋ ಸಂಸ್ಥೆಯು ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಪಲ್ಲವಿ ಆಕುರಾತಿ ಅವರಿಗೆ ದೂರು ನೀಡಿತ್ತು. ನಿರ್ದೇಶನಾಲಯದಿಂದ ದ.ಕ. ಜಿಲ್ಲಾಧಿಕಾರಿಗೆ ಈ ಕುರಿತು ಮಾಹಿತಿ ನೀಡಲಾಯಿತು. ನಂತರ ಬಚ್ ಪನ್  ಬಚಾವೋ ಆಂದೋಲನದ ಸಮನ್ವಯ ಅಧಿಕಾರಿ ವಿನು ವರ್ಗಿಸ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ಬಾಲ ಕಾರ್ಮಿಕ ರಕ್ಷಣಾ ಅಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಸುಬ್ರಹ್ಮಣ್ಯ ಪೊಲೀಸರು ಹಾಗೂ ಪಂಜ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ವಿಶ್ವನಾಥ್ ಭಟ್ ಅವರ ನಿವಾಸಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಯಾವುದೇ ದಾಖಲೆಗಳಿಲ್ಲದೆ ಕಾನೂನು ಬಾಹಿರವಾಗಿ ಮಕ್ಕಳನ್ನು ಹಾಗೂ ಹೆಂಗಸರನ್ನು ಕೆಲಸಕ್ಕೆ ಇಟ್ಟುಕೊಂಡ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು 48 ತಾಸಿನೊಳಗೆ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲು ಸೂಚಿಸಲಾಗಿದೆ.

ಈ ನಡುವೆ ಪುಟ್ಟ ಪುಟ್ಟ ಮಕ್ಕಳು ದನ ಮೇಯಿಸುವ ವೀಡಿಯೊವೊಂದು ಇತ್ತೀಚೆಗೆ  ವೈರಲ್ ಆಗಿತ್ತು. ಆ ಮೂಲಕ ಮಕ್ಕಳನ್ನು ದುಡಿಸುವ ಕೆಟ್ಟ ಸಂಪ್ರದಾಯ ಇನ್ನೂ ಮುಂದುವರಿದಿದೆ ಎಂಬ ಸಂದೇಶವನ್ನು ಅದು ಹೊರ ಜಗತ್ತಿಗೆ ಬಿತ್ತರಿಸಿತ್ತು.

ಕರಿಕಳಂ ಪ್ರದೇಶದಲ್ಲಿ ವಿಶ್ವನಾಥ್ ಭಟ್ ಅವರು ಪಾಳೆಗಾರಿಗೆ ನಡೆಸುತ್ತಿದ್ದಾರೆ. ಅವರು ಆಡಿದ್ದೇ ಆಟ ಎನ್ನುವ ಅಂಶ ಸ್ಥಳೀಯರಿಂದ ರಿಪೋರ್ಟರ್ ಕರ್ನಾಟಕಕ್ಕೆ ಲಭ್ಯವಾಗಿದೆ.

ಬಡ, ಪಾಪದ ಮಕ್ಕಳಿಗೆ ಶಿಕ್ಷಣ ಕೊಡಿಸುವುದಾಗಿ ನಂಬಿಸಿ, ಹುಷಾರಿಲ್ಲದ ಹೆಂಗಸರಿಗೆ ಔಷಧೋಪಚಾರ ಮಾಡಿಸುವುದಾಗಿ ಸುಳ್ಳು ಹೇಳಿ ವಿಶ್ವನಾಥ್ ಭಟ್ ಅವರು ಮಕ್ಕಳು -ಹೆಂಗಸರನ್ನು ದುಡಿಸುತ್ತಾರೆ. ನಂತರ ಅವರಿಗೆ ಸಂಬಳ ಕೂಡ ಕೊಡುವುದಿಲ್ಲ. ಸುತ್ತಮುತ್ತಲಿನ ಸರಕಾರಿ ಜಾಗವನ್ನು ಕೂಡ ಕಬಳಿಸಿದ್ದಾರೆ. ಯಾವ ಜಾಗದ ಹತ್ತಿರ ಹೋದರೂ ಇದು ನನ್ನ ಜಾಗ ಎಂದು ಬೆದರಿಸುತ್ತಾರೆ ಎಂದು ಸ್ಥಳೀಯ ನಿವಾಸಿ ಮೋನಪ್ಪ ಅವರು ಅಳಲು ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು