4:54 PM Tuesday30 - April 2024
ಬ್ರೇಕಿಂಗ್ ನ್ಯೂಸ್
ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ… ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ… ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು

ಇತ್ತೀಚಿನ ಸುದ್ದಿ

10 ದಿನ ಕೊರೊನಾ ಚಿಕಿತ್ಸೆಗೆ 5 ಲಕ್ಷ ರೂಪಾಯಿ ಬಿಲ್ !: ಇದು ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಸುಲಿಗೆಯ ಕಥೆ

13/05/2021, 10:50

ಮಂಗಳೂರು(reporterkarnataka news):

10 ದಿನದ ಚಿಕಿತ್ಸೆಗೆ ಬರೋಬ್ಬರಿ 5 ಲಕ್ಷ ರೂ. ಬಿಲ್. ಇದು ಕೊರೊನಾ ಎರಡನೇ ಅಲೆಯ ಕೋವಿಡ್ ರೋಗಿಗಳನ್ನು ಲೂಟುವ ಪರಿ. 

ಕೊರೊನಾ ಮೊದಲ ಅಲೆಯ ಸಂದರ್ಭ “ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ವಿಧಿಸಿ ಸೋಂಕಿತರನ್ನು ಸುಲಿಗೆ ಮಾಡುತ್ತಿವೆ” ಎಂದು ಪ್ರತಿ ದಿನ ದೂರುಗಳು ಬರುತ್ತಿದ್ದವು. ಕೊನೆಗೆ ಸರಕಾರ ಚಿಕಿತ್ಸೆಯ ದರಪಟ್ಟಿ ಪ್ರಕಟಿಸಿತು. ಆದರೆ ಸುಲಿಗೆ ತಪ್ಪಲಿಲ್ಲ. ಈ ಬಾರಿ ಅಂತಹ ದೂರು ಸಾರ್ವಜನಿಕವಾಗಿ ದೊಡ್ಡ ರೀತಿಯಲ್ಲಿ ಕೇಳಿ ಬರುತ್ತಿಲ್ಲ. ಅದಕ್ಕೆ ಕಾರಣ, “ಈ ಬಾರಿ ಎರಡನೆ ಅಲೆ ವ್ಯಾಪಕವಾಗಿ ಬೀಸಿರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್ ದೊರಕಿಸಿಕೊಳ್ಳುವುದೇ ದೊಡ್ಡ  ಸಾಧನೆ”  ಎಂಬ ಮೂಡ್ ನಿರ್ಮಾಣ ಮಾಡಲಾಯಿತು. ಜನರೂ ಬಿಲ್ ಬಗ್ಗೆ ತುಟಿ ಬಿಚ್ಚದೆ ಖಾಸಗಿ ಆಸ್ಪತ್ರೆಗಳ ಖಜಾನೆ ತುಂಬುತ್ತಿದ್ದಾರೆ. ಇದು ಯಾವ ಮಟ್ಟಿಗಿನ ದಂಧೆಗೆ ಅವಕಾಶ ಮಾಡಿಕೊಟ್ಟಿದೆ ಎಂಬುದುಕ್ಕೆ ಮುಂದಕ್ಕೆ ಓದಿ.

ಸೋಮವಾರ ಪೇಟೆಯ ಅಹಮದ್ ಎಂಬ 65ರ ಹರೆಯದ ಹಿರಿಯ ವ್ಯಕ್ತಿಗೆ ಕೋವಿಡ್ ತಗುಲಿದೆ. ಒಂದಿಷ್ಟು ದಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಆಸ್ಪತ್ರೆ ಜಿಲ್ಲಾಡಳಿತ ಘೋಷಿಸಿದ ಕೊರೊನಾ ಆಸ್ಪತ್ರೆಗಳಲ್ಲಿ ಒಂದಾಗಿದ್ದರೂ, “ಆಯುಷ್ಮಾನ್ ಸಹಿತ ಯಾವುದೇ ಸರಕಾರಿ ರಿಯಾಯತಿಗಳು” ದೊರಕುವುದಿಲ್ಲ, ಪೂರ್ತಿ ಬಿಲ್ ರೋಗಿಯ ಕಡೆಯವರೇ ಪಾವತಿಸಬೇಕು” ಎಂಬ ಶರತ್ತು ವಿಧಿಸಿ ರೋಗಿಯನ್ನು‌ ಐಸಿಯುನ ಆಕ್ಸಿಜನ್ ಬೆಡ್ ಗೆ ಅಡ್ಮಿಷನ್ ಮಾಡಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆ ನೇಮಿಸಿದ್ದ “ಆರೋಗ್ಯ ಮಿತ್ರ” ಸಿಬ್ಬಂದಿ ರೋಗಿಯ ಕಡೆಯವರಿಗೆ ಮಾಹಿತಿ ಒದಗಿಸದಂತೆ ಪಳಗಿಸಿಟ್ಟುಕೊಂಡಿದ್ದಾರೆ.

ಹೀಗೆ ಐಸಿಯವಿನ ಆಕ್ಸಿಜನ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಹತ್ತು ದಿನಗಳಲ್ಲಿ ಸರಿ ಸುಮಾರು 1.50 ಲಕ್ಷ ರೂಪಾಯಿಗಳ ಔಷಧಿಯನ್ನು ರೋಗಿಯ ಕಡೆಯವರಿಂದ ಆಸ್ಪತ್ರೆಯ ಸಿಬ್ಬಂದಿಗಳು ತಮ್ಮದೇ ಮೆಡಿಕಲ್ ನಿಂದ ತರಿಸಿಕೊಂಡಿದ್ದಾರೆ. ಒಂದೂವರೆ ಲಕ್ಷ ರೂಪಾಯಿಗಳ ಔಷಧಿ, ಐಸಿಯು ಚಿಕಿತ್ಸೆಯಿಂದಲೂ ಅಹಮ್ಮದರ ಆರೋಗ್ಯ ಸುಧಾರಣೆಯಾಗುವುದರ ಬದಲು ಮತ್ತಷ್ಟು ಹದಗೆಟ್ಟಿದೆ. ಇದರಿಂದ ಬದುಕುವ ಆಸೆ ಕೈಬಿಟ್ಟ ವೃದ್ದರಾದ ಅಹಮದರು ತನ್ನನ್ನು ಮನೆಗೆ ಕರೆದೊಯ್ಯುವಂತೆ ಹಠ ತೊಟ್ಟಿದ್ದಾರೆ. ಕೊನೆಗೆ ವೈದ್ಯರ ಸಲಹೆ ಪಡೆದು ಡಿಸ್ಚಾರ್ಜ್ ಮಾಡುವ ನಿರ್ಧಾರಕ್ಕೆ ರೋಗಿಯ ಕುಟುಂಬಸ್ಥರು ಬಂದಿದ್ದಾರೆ.

ಹೀಗೆ ಡಿಸ್ಚಾರ್ಜ್ ನಿರ್ಧಾರಕ್ಕೆ ಬಂದಾಗ ಆಸ್ಪತ್ರೆಯವರು ಔಷಧಿಯ ಒಂದೂವರೆ ಲಕ್ಷ ರೂಪಾಯಿ ಹೊರತು ಪಡಿಸಿ ಬರೋಬ್ವರಿ ನಾಲ್ಕು ಲಕ್ಷ ರೂಪಾಯಿ ಬಿಲ್ ನೀಡಿದ್ದಾರೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಮಂಗಳೂರಿನ ಪರಿಚಿತರ ಬಳಿ ನೋವು ತೋಡಿಕೊಂಡಿದ್ದಾರೆ. (ನಿಮಗೆ ತಿಳಿದಿರಲಿ. ಸರಕಾರ ನಿಗದಿ ಪಡಿಸಿದ ಪ್ರಕಾರ ಐಸಿಯು ಅಕ್ಸಿಜನ್ ಬೆಡ್ ದರ ಒಂದು ದಿನಕ್ಕೆ 15 ಸಾವಿರ ರೂಪಾಯಿ. ಇದರಲ್ಲಿ ಆಕ್ಸಿಜನ್, ವೈದ್ಯರ ವೆಚ್ಚವೂ ಒಳಗೊಂಡಿದೆ, ಅ ಪ್ರಕಾರ ಹೆಚ್ಚೆಂದರೆ ಒಂದೂವರೆ ಲಕ್ಷ ಬಿಲ್ ಮಾಡಬಹುದು) ವಕೀಲರಾದ ಪರಿಚಿತರು ಈ ಕುರಿತು ನೋಡಲ್ ಅಧಿಕಾರಿಗೆ ದೂರು ನೀಡಿದ್ದಾರೆ. ಆಗ ಒಂದಿಷ್ಟು ಚಿಲ್ಲರೆ ರೂಪಾಯಿ ರಿಯಾಯತಿಯ ಆಫರ್ ಆಸ್ಪತ್ರೆಯ ಆಡಳಿತ ನೀಡಿದೆ. ಅದನ್ನು ಒಪ್ಪದ ವಕೀಲರು ಕೊನೆಗೆ ಈ “ಸುಲಿಗೆಯ ಕತೆ” ಯನ್ನು ಡಿವೈಎಫ್ಐ ಸಂಘಟನೆಯ ಗಮನಕ್ಕೆ ತಂದಿದ್ದಾರೆ. ಅದರಂತೆ ಸಂಘಟನೆಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ನಡೆಯುತ್ತಿರುವ ಸುಲಿಗೆಯ ಕುರಿತು ವಿವರವಾದ ಮಾಹಿತಿ ನೀಡಲಾಯಿತು.‌ *ಕೋವಿಡ್, ಆಯುಷ್ಮಾನ್ ಕುರಿತು ತನಿಖೆಯ ಜವಾಬ್ದಾರಿ ಹೊಂದಿರುವ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ರತ್ನಾಕರ್ ಅವರಲ್ಲಿಯೂ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಲಾಯಿತು.‌ “ಆಯುಷ್ಮಾನ್ ಗೆ ರೋಗಿಯ ಕಡೆಯವರು ಅಡ್ಮಿಷನ್ ಸಂದರ್ಭ ಮನವಿ ಮಾಡದೇ ಇದ್ದ ಕಾರಣ ಈ ಕುರಿತು ಸಹಾಯ ಕಷ್ಟ, ದುಬಾರಿ ಬಿಲ್ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ” ರತ್ನಾಕರ್ ತಿಳಿಸಿದರು. ಜಿಲ್ಲಾಧಿಕಾರಿಗಳೂ ರತ್ಮಾಕರ್ ಅವರಲ್ಲಿ ಸರಿಯಾದ ಕ್ರಮಕ್ಕೆ ಸೂಚಿಸಿದರು.

ಕೊನೆಗೆ ರತ್ನಾಕರ್ ನೇತೃತ್ವದ ಅಧಿಕಾರಿಗಳ ತಂಡ ಆಸ್ಪತ್ರೆಗೆ ತೆರಳಿ ವಿವರವಾದ ಮಾತುಕತೆ ನಡೆಸಿ ನಾಲ್ಕು ಲಕ್ಷ ಮೊತ್ತದ ಬಿಲ್ ಅನ್ನು ಒಂದು ಲಕ್ಷ ಇಪ್ಪತ್ತು ಸಾವಿರಕ್ಕೆ ಇಳಿಸಿದರು. ನಿಟ್ಟುಸಿರು ಬಿಟ್ಟ ರೋಗಿಯ ಕುಟುಂಬಸ್ಥರು ಒಂದು ಲಕ್ಷ ಇಪ್ಪತ್ತು ಸಾವಿರ ಬಿಲ್ ಪಾವತಿಸಿ ರೋಗಿಯನ್ನು ಡಿಸ್ಚಾರ್ಜ್ ಮಾಡಿಸಿದರು. ಎಲ್ಲಾ ಪ್ರಕ್ರಿಯೆ ಮುಗಿಸಿ ಸೋಂಕಿತ ವೃದ್ದರನ್ನು ಆಂಬುಲೆನ್ಸ್ ಗೆ ಸಾಗಿಸುವಾಗ ಆಗಲೇ ಆರೋಗ್ಯ ಕ್ಷೀಣಗೊಂಡಿದ್ದ ವೃದ್ದ ಆಸ್ಪತ್ರೆಯ ವರಾಂಡದಲ್ಲೆ ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು