ಇತ್ತೀಚಿನ ಸುದ್ದಿ
ಬಿಎಸ್ಸೆನ್ನೆಲ್ ಟವರ್ ನಿರ್ಮಿಸಲು ಪಡೆದ ಹಣ ವಂಚನೆ: 36.70 ಲಕ್ಷ ಪರಿಹಾರ, 5 ಸಾವಿರ ದಂಡ ನೀಡಲು ಕೋರ್ಟ್ ಆದೇಶ
26/08/2022, 15:20
ಮಂಗಳೂರು(reporterkarnataka.com): ಬಿಎಸ್ಸೆನ್ನೆಲ್ ಟವರ್ ನಿರ್ಮಿಸಲೆಂದು
ಪಡೆದ 36 ಲಕ್ಷ ರೂ. ಹಣ ಹಿಂತಿರುಗಿಸದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಜೆಎಂಎಫ್ ಸಿ 5ನೇ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿಯು 36,70,000 ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ.
ಬಿಎಸ್ಸೆನ್ನೆಲ್ ಗುತ್ತಿಗೆದಾರರಾದ.ಮಂಗಳೂರಿನ ಮಠದಕಣಿ ಮಾರ್ವೆಲ್ಲ ಅಪಾರ್ಟ್ ಮೆಂಟಿನ ನಿವಾಸಿಯಾದ ಪ್ರಕಾಶ್ ವಿ. ನಾಯಕ್ ಅವರು ಪ್ರಿಯಾ ಎಸ್. ಭಂಡಾರಿ ಅವರಿಂದ ಬಿಎಸ್ಸೆನ್ನೆಲ್ ಟವರ್ ನಿರ್ಮಿಸಲು 36 ಲಕ್ಷ ರೂ. ಪಡೆದಿದ್ದರು. ನಂತರ ಪ್ರಕಾಶ್ ನಾಯಕ್ ಅವರು ಹಣ ಹಿಂತಿರುಗಿಸಲಿಲ್ಲ. ಅವರು ಕೊಟ್ಟ ಚೆಕ್ ಕೂಡ ಬೌನ್ಸ್ ಆಗಿತ್ತು. ಈ ಕುರಿತು ಪ್ರಿಯಾ ಭಂಡಾರಿ ಅವರು ಪ್ರಕಾಶ್ ನಾಯಕ್ ವಿರುದ್ಧ ವಿಶ್ವಾಸದ್ರೋಹ ಮತ್ತು ಮೋಸ ಮಾಡಿದ ಪ್ರಕರಣ ದಾಖಲಿಸಿದ್ದರು. ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಆ್ಯಕ್ಟ್ ಪ್ರಕಾರ ಮಂಗಳೂರಿನ ಜೆಎಂ ಎಫ್ ಸಿ 5ನೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಕುರಿತಂತೆ ಅನೇಕ ಸಾಕ್ಷ್ಯಾಧಾರಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚಿನ್ಮಯಿ ಅವರು ಪ್ರಿಯಾ ಭಂಡಾರಿ ಅವರಿಗೆ ಆರೋಪಿ ಪ್ರಕಾಶ್ ನಾಯಕ್ ಅವರು 36,70,000 ರೂ. ಪರಿಹಾರ ಮತ್ತು 5 ಸಾವಿರ ದಂಡ ನೀಡುವಂತೆ ತೀರ್ಪು ನೀಡಿದ್ದಾರೆ. ಆರೋಪಿಯು ದಂಡ ಪಾವತಿಸಲು ವಿಫಲರಾದರೆ 6 ತಿಂಗಳು ಸಾಧಾರಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.
ಪ್ರಿಯಾ ಭಂಡಾರಿ ಅವರ ಪರವಾಗಿ ಹಿರಿಯ ವಕೀಲರಾದ ಆಶಾ ನಾಯಕ್ , ಜೀವನ್ ಕೊಲ್ಯ ಹಾಗೂ ಚೈತ್ರಾ ವಾದಿಸಿದ್ದರು.














