ಇತ್ತೀಚಿನ ಸುದ್ದಿ
ನಾವು ಪಕ್ಷನಿಷ್ಠರು, ಜಮೀರ್ ವಿರುದ್ದ ಬೃಹತ್ ಷಡ್ಯಂತ್ರ: ವೈರಲ್ ಆಡಿಯೋ ಬಗ್ಗೆ ಸಿರಾಜ್ ಪ್ರತಿಕ್ರಿಯೆ
01/06/2026, 15:29
ಬೆಂಗಳೂರು(reporterkarnataka.com): ಜಮೀರ್ ಅಹ್ಮದ್ ಹಾಗೂ ಕೆಎಂಡಿಸಿ ಅಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದ ಆಡಿಯೊ ಈಗ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ಸಿರಾಜ್, ನಾವು ಸಂಪೂರ್ಣ ಪಕ್ಷನಿಷ್ಠರಾಗಿದ್ದೇವೆ. ಜಮೀರ್ ಅಹ್ಮದ್ ವಿರುದ್ದ ದೊಡ್ಡ ಷಡ್ಯಂತ್ರವೇ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.
ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಕೆಎಂಡಿಸಿ ಅಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉರ್ದುವಿನಲ್ಲಿ ನಡೆದಿದ್ದ ಈ ಸಂಭಾಷಣೆಯಲ್ಲಿ ಆಗ ಸಚಿವರಾಗಿದ್ದ ಜಮೀರ್ ಅಹ್ಮದ್ ದಾವಣಗೆರೆ ಉಪಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುವಂತೆ ಮುಸ್ಲಿಮರಿಗೆ ಹೇಳುವುದು ಬೇಡ. ಎಲ್ಲರೂ ಸ್ವತಂತ್ರ್ಯ ಅಭ್ಯರ್ಥಿಗೆ ಅಥವಾ ಎಸ್ಡಿಪಿಐ ಅಭ್ಯರ್ಥಿಗೆ ಮತ ಚಲಾಯಿಸಲಿ ಎಂದು ಹೇಳಿರುವುದು ದಾಖಲಾಗಿತ್ತು.
ಈ ಹಿಂದೆಯೇ ಜಮೀರ್ ಅಹ್ಮದ್ ಮತ್ತು ಇತರೆ ಮುಸ್ಲಿಂ ನಾಯಕರ ವಿರುದ್ದ ಪಕ್ಷದ್ರೋಹ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಹಲವರು ಮುಸ್ಲಿಂ ನಾಯಕರ ತಲೆದಂಡವೂ ನಡೆದಿತ್ತು.













