ಇತ್ತೀಚಿನ ಸುದ್ದಿ
ಕಕ್ಯಪದವು: ಮಹಾವಿಷ್ಣು ದೇವಸ್ಥಾನದ ಗರ್ಭಗುಡಿಗೆ ಸಿಡಿಲು ಬಡಿದು ಹಾನಿ
17/05/2026, 09:00
ಬಂಟ್ವಾಳ(reporterkarnata.com): ಬಂಟ್ವಾಳ ತಾಲೂಕಿನ ಕಕ್ಯಪದವು ಸಮೀಪದ ಇಳಿಯೂರು ಎಂಬಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಸುಮಾರು ರೂ 3.50 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆದಿದ್ದ ಮಹಾವಿಷ್ಣು ದೇವಳದ ಗರ್ಭಗುಡಿಗೆ ಸಿಡಿಲು ಬಡಿದು ಅಪಾರ ಹಾನಿ ಉಂಟಾಗಿದೆ.


ಶನಿವಾರ ಸಂಜೆ ಭಾರೀ ಸಿಡಿಲು ಮಿಂಚು ಸಹಿತ ಗಾಳಿ ಮಳೆಗೆ ಶಿಲಾಮಯ ಗರ್ಭಗುಡಿ ಮೇಲಿನ ಅಂತಸ್ತು ಒಡೆದಿದೆ. ಸಿಡಿಲಿನ ಅಬ್ಬರಕ್ಕೆ ಶಿಲೆಯ ತುಂಡುಗಳು ಅಂಗಣಕ್ಕೆ ಬಿದ್ದಿದ್ದು, ಸುಮಾರು ರೂ.ಒಂದೂ ಕೋಟಿಗೂ ಮಿಕ್ಕಿ ನಷ್ಟ ಉಂಟಾಗಿದೆ. ಈ ಸಂದರ್ಭದಲ್ಲಿ ದೇವಳದ ಒಳಗೆ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ.ಕೊರೋನ ಸಂಕಷ್ಟದ ನಡುವೆ ನೂರಾರು ಮಂದಿ ಭಕ್ತರು ಶ್ರಮದಾನ ಸೇವೆ ಸಲ್ಲಿಸಿ ಕಟ್ಟಿದ ದೇವಾಲಯಕ್ಕೆ ಈ ಆಕಸ್ಮಿಕ ಹಾನಿ ಭಕ್ತರಲ್ಲಿ ಆತಂಕ ಮೂಡಿಸಿದೆ ಎಂದು ದೇವಳದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.












