ಇತ್ತೀಚಿನ ಸುದ್ದಿ
ಕಾರ್ಮಿಕರ ದಿನಾಚರಣೆ: ದ.ಕ. ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ
02/05/2026, 19:46
ಮಂಗಳೂರು(reporterkarnaraka.com): ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮೇ 1 ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಮಂಗಳೂರಿನ ಪೌರ ಕಾರ್ಮಿಕರನ್ನು ಗುರುತಿಸಿ ಗೌರವಿಸುವ “ಕಾಯಕ ಗೌರವ” ಕಾರ್ಯಕ್ರಮವು ಪಂಪ್ವೆಲ್ ನ ಖಾಸಗಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು.


ಪೌರ ಕಾರ್ಮಿಕರಿಗೆ ಕಾಯಕ ಗೌರವ ಪುರಸ್ಕಾರ ನೀಡಿ ಮಾತನಾಡಿದ ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಬ್ರಾಹೀಂ ನವಾಝ್ ಅವರು, ದೇಹದಲ್ಲಿ ನರಗಳಿರುವಂತೆ ಕಾರ್ಮಿಕರು ದೇಶದ ನರಗಳಿದ್ದಂತೆ. ಅವರು ಕೆಲಸದಲ್ಲಿ ತೊಡಗಿದರೆ ಮಾತ್ರ ದೇಶ ಮುನ್ನಡೆಯಲು ಸಾಧ್ಯ. ಅವರು ಸ್ತಬ್ದರಾದರೆ ದೇಶ ಆರ್ಥಿಕವಾಗಿ ಕುಸಿಯುತ್ತದೆ. ಕಾರ್ಮಿಕರ ಶ್ರಮವೂ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿರ. ಕಾರ್ಮಿಕರ ದಿನ ಹಬ್ಬವಾಗಿ ಜನ್ಮತಾಳಿರುವುದಲ್ಲ, ಬದಲಾಗಿ ಅದು ಹೋರಾಟದ ಸಂಕೇತ. ಕಾಂಗ್ರೆಸ್ ಅಂದೂ ಕಾರ್ಮಿಕರ ಪರವಾಗಿತ್ತು, ಇಂದೂ ಇದೆ, ಮುಂದೆಯೂ ಇರಲಿದೆ ಎಂದು ನವಾಝ್ ಭರವಸೆ ನೀಡಿದರು.
ವೇದಿಕೆಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ರಮಾನಂದ ಪೂಜಾರಿ, ಸಮರ್ಥ್ ಭಟ್, ಆಸೀಫ್ ಬಜಾಲ್, ಸಾಗರ್ ಕಟೀಲ್, ಮಿತೇಶ್ ಡಿಸೋಜಾ, ಉಮ್ಮರ್ ಸಾಲೆತ್ತೂರು, ಅನ್ಸಾರ್ ಸಾಲ್ಮರ, ಲುಕ್ಮನ್ ಅಡ್ಯಾರ್, ಅಬ್ದುಲ್ ಅಕ್ಮಲ್, ನಜೀಬ್ ಕಾರ್ಮಿಕ ಮುಖಂಡರಾದ ಮನೋಜ್, ಚಂದ್ರು ಮತ್ತು ನವೀನ್ ಉಪಸ್ಥಿತರಿದ್ದರು.












