ಇತ್ತೀಚಿನ ಸುದ್ದಿ
Mysore | ಚಾಮುಂಡಿ ಬೆಟ್ಟದಲ್ಲಿ ಬಿಸಿಲ ಧಗೆ: ಭಕ್ತರ ಕೈಯಿಂದ ತಂಪು ಪಾನೀಯ ಕಸಿಯುತ್ತಿರುವ ವಾನರ ಸೇನೆ
31/03/2026, 15:46
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಮೈಸೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಚಾಮುಂಡಿ ಬೆಟ್ಟದ ಕೋತಿಗಳು ತತ್ತರಿಸಿದ್ದು ತಮ್ಮ ಬಾಯಾರಿಕೆ ನೀಗಿಸಿಕೊಳ್ಳಲು ಪ್ರವಾಸಿಗರಿಂದ ತಂಪು ಪಾನೀಯ ಕಿತ್ತು ಕುಡಿಯುತ್ತಿದ್ದು, ಈ ದೃಶ್ಯಗಳು ವೈರಲ್ ಆಗಿವೆ. ಸಾಮಾನ್ಯವಾಗಿ ಕೋತಿಗಳು ಭಕ್ತರ ಕೈಯಿಂದ ಹಣ್ಣು-ಹಂಪಲು ಅಥವಾ ತಿಂಡಿಗಳನ್ನು ಕಿತ್ತುಕೊಳ್ಳುವುದು ಸಹಜ. ಆದರೆ, ಈಗ ಮೈಸೂರಿನಲ್ಲಿ ಬಿಸಿಲಿರುವುದರಿಂದ ಕೋತಿಗಳಿಗೆ ಹಸಿವಿಗಿಂತ ಹೆಚ್ಚಾಗಿ ಬಾಯಾರಿಕೆಯಾಗುತ್ತಿದೆ. ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಕೈಯಲ್ಲಿದ್ದ ತಂಪು ಪಾನೀಯದ ಬಾಟಲಿಗಳ ಮೇಲೆ ಈ ವಾನರ ಸೈನ್ಯ ದಾಳಿ ನಡೆಸುತ್ತಿದೆ. ಭಕ್ತರ ಕೈಯಿಂದ ಜ್ಯೂಸ್ ಹಾಗೂ ಸೋಡಾ ಬಾಟಲಿಗಳನ್ನು ಕಿತ್ತುಕೊಂಡು ಅರಾಮವಾಗಿ ಕುಡಿಯುವ ಮೂಲಕ ಕೋತಿಗಳು ದಣಿವು ನಿವಾರಿಸಿಕೊಳ್ಳುತ್ತಿವೆ.
ವಿಶೇಷವೆಂದರೆ, ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಓಡಾಡುವ ಪ್ರವಾಸಿಗರು ಹೆಚ್ಚಾಗಿ ಬಳಸುವ ‘ಜಿರಾ’ ಪಾನೀಯದ ಬಾಟಲಿಗಳನ್ನೇ ಕೋತಿಗಳು ಟಾರ್ಗೆಟ್ ಮಾಡುತ್ತಿವೆ. ಭಕ್ತರ ಕೈಯಲ್ಲಿದ್ದ ಬಾಟಲಿಗಳನ್ನು ಜಾಣ್ಮೆಯಿಂದ ಕಿತ್ತುಕೊಳ್ಳುವ ಕೋತಿಗಳು, ಮನುಷ್ಯರಂತೆಯೇ ಬಾಟಲಿಯ ಮುಚ್ಚಳ ತೆರೆದು ಅಥವಾ ತೂತು ಮಾಡಿ ಪಾನೀಯವನ್ನು ಹೀರುತ್ತಿವೆ. ಸಕ್ಕರೆ ಅಂಶವಿರುವ ಮತ್ತು ತಂಪಾಗಿರುವ ಈ ಪಾನೀಯವನ್ನು ಕುಡಿದು ವಾನರ ಸೈನ್ಯ ಫುಲ್ ಖುಷ್ ಆಗಿರುವ ದೃಶ್ಯಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.
ಚಾಮುಂಡಿ ಬೆಟ್ಟದ ರಸ್ತೆಯ ತಿರುವುಗಳಲ್ಲಿ ಕುಳಿತು ಕೋತಿಗಳು ಮನುಷ್ಯರಂತೆ ಸ್ಟೈಲಿಶ್ ಆಗಿ ಕೂಲ್ ಡ್ರಿಂಕ್ಸ್ ಕುಡಿಯುತ್ತಿರುವ ದೃಶ್ಯವನ್ನು ಅಲ್ಲಿಗೆ ಬಂದಿದ್ದ ಪ್ರವಾಸಿಗರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ‘ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಬಿಸಿಲಿನ ತಾಪ ತಡೆಯಲು ಸಾಧ್ಯವಾಗುತ್ತಿಲ್ಲ’,ಇದು ಅವುಗಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ಪಟ್ಟಿದ್ದು ಅರಣ್ಯ ಅಧಿಕಾರಿಗಳು ಕೂಡ ಈ ಪ್ರಾಣಿಗಳ ಬಗ್ಗೆ ಗಮನಹರಿಸಬೇಕಿದೆ.














