ಇತ್ತೀಚಿನ ಸುದ್ದಿ
13 ವರ್ಷಗಳ ಕೋಮಾ ಜೀವನ ಅಂತ್ಯಗೊಳಿಸಿ ನೋವಿಲ್ಲದ ಸಾವು ಕಂಡ ಹರೀಶ್ ರಾಣಾ: ಅಂತಿಮ ಕ್ಷಣದಲ್ಲಿ ಜತೆಗಿದ್ದ ತಾಯಿ
24/03/2026, 21:42
ನವದೆಹಲಿ(reporterkarnataka.com): ಸುಪ್ರೀಂ ಕೋರ್ಟ್ ನಿಂದ ಇತ್ತೀಚೆಗೆ ದಯಾಮರಣ ಪಡೆದ ಹರೀಶ್ ರಾಣಾ ತನ್ನ 13 ವರ್ಷಗಳ ಕೋಮಾ ಜೀವನಕ್ಕೆ ಅಂತಿಮ ವಿದಾಯ ಹಾಡಿದರು. ಜೀವ ರಕ್ಷಕವನ್ನು ಹಂತ ಹಂತವಾಗಿ ಹಿಂತೆಗೆಯುವ ಪ್ರಕ್ರಿಯೆ ಮೂಲಕ ಹರೀಶ್ ಇಂದು ಕೊನೆಯುಸಿರೆಳೆದರು.
2013ರಿಂದ ಕೋಮಾದಲ್ಲಿರುವ ಹರೀಶ್ ರಾಣಾ ಅವರಿಗೆ ಸುಪ್ರೀಂಕೋರ್ಟ್ ದಯಾ ಮರಣ ಕಲ್ಪಿಸಿರುವುದರಿಂದ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹರೀಶ್ ರಾಣಾ ಅಂತಿಮ ಕ್ಷಣಗಳಲ್ಲಿ ಅವರ ತಾಯಿಗೆ ಮಾತ್ರ ಜೊತೆಯಲ್ಲಿರಲು ಅವಕಾಶ ನೀಡಲಾಗಿತ್ತು.
ಹರೀಶ್ ರಾಣಾ ಅವರ ದಯಾ ಮರಣ ಪ್ರಕ್ರಿಯೆ ಕಳೆದ ಕೆಲ ದಿನಗಳಿಂದ ಆರಂಭವಾಗಿತ್ತು. ವೈದ್ಯರು ಮೊದಲು ಫೀಡಿಂಗ್ ಟ್ಯೂಬ್ ಮತ್ತು ಆಕ್ಸಿಜನ್ ಸಪೋರ್ಟ್ ತೆಗೆದುಹಾಕಿದ್ದರು. ಏಮ್ಸ್ನ ಡಾ. ಸೀಮಾ ಮಿಶ್ರಾ ಸೇರಿದಂತೆ 10 ವೈದ್ಯರ ತಂಡ ಈ ಪ್ರಕ್ರಿಯೆಯ ನೇತೃತ್ವ ವಹಿಸಿತ್ತು. ‘ಬೇಗ ಸಾಯಿಸುವುದಲ್ಲ, ನೋವಿಲ್ಲದ ಸಾವು ನೀಡುವುದು ನಮ್ಮ ಗುರಿ’ ಎಂದು ವೈದ್ಯರ ತಂಡ ಹೇಳಿತ್ತು. ಗೌರವಯುತವಾಗಿ ಸಾಯುವ ಹಕ್ಕು ಪ್ರಜೆಗಿದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ದಯಾಮರಣಕ್ಕೆ ಅನುಮತಿ ನೀಡಿತ್ತು.
*ಮಗನ ಕಷ್ಟ ನೋಡಿ ಸಾಕಾಗಿದೆ*
ಕಳೆದ 13 ವರ್ಷಗಳಿಂದ ಯಾವುದೇ ಚಲನವಲನವಿಲ್ಲದೆ ಯಂತ್ರಗಳ ಸಹಾಯದಿಂದ ಬದುಕುತ್ತಿದ್ದ ಹರೀಶ್ ರಾಣಾಗೆ ಸುಪ್ರೀಂ ಕೋರ್ಟ್ ಈ ಆದೇಶದ ಮೂಲಕ ನ್ಯಾಯ ಒದಗಿಸಿತ್ತು. ರಾಣಾ ಮತ್ತೆ ಜೀವನಕ್ಕೆ ಮರಳುವ ಯಾವುದೇ ಸಾಧ್ಯತೆ ಇಲ್ಲ ಎಂಬುದು ಸ್ಪಷ್ಟವಾದಾಗ, ಅವರ ವೃದ್ಧ ಪೋಷಕರು ದಯಾಮರಣ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ‘ಮಗನ ಕಷ್ಟ ನೋಡಿ ಸಾಕಾಗಿದೆ, ಚಿಕಿತ್ಸೆ ಮುಂದುವರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ’ ಎಂದು ಪೋಷಕರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಜೆ.ಪಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ, ಹಂತ ಹಂತವಾಗಿ ಹರೀಶ್ ರಾಣಾ ಅವರ ಚಿಕಿತ್ಸೆಯನ್ನು ನಿಲ್ಲಿಸಲು ಆದೇಶಿಸಿತ್ತು.
ಚಿಕಿತ್ಸೆ ಮುಂದುವರಿಸಿದರೂ ಯಾವುದೇ ಸುಧಾರಣೆ ಕಾಣುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿರುವುದಾಗಿ ನ್ಯಾಯಾಲಯವೂ ತಿಳಿಸಿತ್ತು. ಏಮ್ಸ್ನ ಉಪಶಾಮಕ ಆರೈಕೆ ವಿಭಾಗಕ್ಕೆ (Palliative Care) ದಾಖಲಿಸಿ ದಯಾಮರಣ ಪ್ರಕ್ರಿಯೆ ನಡೆಸುವಂತೆ ಕೋರ್ಟ್ ನಿರ್ದೇಶನ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನೂ ನೀಡಿತ್ತು. ‘ರಾಣಾ ಕುಟುಂಬದ ಈ ನಡೆ ನಿಸ್ವಾರ್ಥವಾದದ್ದು’ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಹೇಳಿದ್ದರು. ‘ರೋಗಿಗೆ ಗೌರವಯುತ ಸಾವು ಪಡೆಯುವ ಹಕ್ಕಿದೆ’ ಎಂದು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದರು.
2018ರಲ್ಲಿ ಸುಪ್ರೀಂ ಕೋರ್ಟ್ ದೇಶದಲ್ಲಿ ದಯಾಮರಣವನ್ನು ಕಾನೂನುಬದ್ಧಗೊಳಿಸಿದ ನಂತರ ಬಂದ ಮೊದಲ ತೀರ್ಪು ಇದಾಗಿದೆ. ಚಂಡೀಗಢದಲ್ಲಿ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದ ಹರೀಶ್ ರಾಣಾ, 2013ರಲ್ಲಿ ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಹರೀಶ್ ಪೋಷಕರ ಪರವಾಗಿ ಮಲಯಾಳಿ ಮೂಲದ ವಕೀಲೆ ರಶ್ಮಿ ನಂದಕುಮಾರ್ ವಾದ ಮಂಡಿಸಿದ್ದರು.












