ಇತ್ತೀಚಿನ ಸುದ್ದಿ
ಕೈಗೆ ಕಂಟಕ? | ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್ ಸ್ಪರ್ಧೆ
22/03/2026, 22:43
ದಾವಣಗೆರೆ(reporterkarnataka.com): ‘ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವುದು ಬೇಸರವುಂಟು ಮಾಡಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದೇನೆ’ ಎಂದು ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ತಿಳಿಸಿದರು. ‘ಕಾಂಗ್ರೆಸ್ ಟಿಕೆಟ್ಗೆ 2013ರಿಂದ ಬೇಡಿಕೆ ಮುಂದಿಡುತ್ತಿದ್ದೇನೆ. ಕ್ಷೇತ್ರದಲ್ಲಿ ಪ್ರಬಲವಾಗಿರುವ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ನಾಯಕರನ್ನು ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮತದಾರರ ಒತ್ತಾಯದ ಮೇರೆಗೆ ಉಪಚುನಾವಣಾ ಕಣಕ್ಕೆ ಇಳಿಯಲು ಸಿದ್ಧನಾಗಿದ್ದೇನೆ’ ಎಂದು ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ರಾಷ್ಟ್ರಮಟ್ಟದ ಕುಸ್ತಿ ಪೈಲ್ವಾನ್ ಆಗಿದ್ದ ನನಗೆ ಅಖಾಡದಲ್ಲಿ ಆಟವಾಡುವ ಪಟ್ಟುಗಳು ಗೊತ್ತಿವೆ. ಮುಂದಿಟ್ಟ ಹೆಜ್ಜೆಯನ್ನು ಹಿಂದೆ ತೆಗೆಯುವುದಿಲ್ಲ. ಯಾವುದೇ ಒತ್ತಡಗಳಿಗೂ ಮಣಿಯುವುದಿಲ್ಲ. ಕ್ಷೇತ್ರದಲ್ಲಿ ಸಂಚರಿಸಿ ಮತದಾರರ ಮನವೊಲಿಸಿ ಗೆಲುವು ಸಾಧಿಸುವ ವಿಶ್ವಾಸವಿದೆ’ ಎಂದು ಹೇಳಿದರು.
ಟಿಕೆಟ್ಗೆ ಬೇಡಿಕೆ ಇಟ್ಟಿದ್ದ ಸಾದಿಕ್ ಪೈಲ್ವಾನ್ ಅವರು ‘ಬಿ’ ಫಾರಂ ಇಲ್ಲದೇ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು.












